ಮಾಜಿ ನಾಯಕ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾಗಿ ಅದಾಗಲೇ ಆರು ತಿಂಗಳು ಕಳೆದಿದೆ. ಸದ್ಯ ಕುಟುಂಬದ ಜೊತೆ ಗೆಳೆಯರ ಜೊತೆ ಕಾಲ ಕಳೆಯುತ್ತಿರುವ ಧೋನಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರ ಮಧ್ಯೆ ಮಹೇಂದ್ರ ಸಿಂಗ್ ಧೋನಿ ಪುಟ್ಟಪರ್ತಿಯ ಪ್ರಸಿದ್ಧ ಪ್ರಶಾಂತಿ ನಿಲಯಂಗೆ ಭೇಟಿ ನೀಡಿದ್ದಾರೆ.
ಕಳೆದ ಮಂಗಳವಾರದಂದು ಮಹೇಂದ್ರ ಸಿಂಗ್ ಪುಟ್ಟಪರ್ತಿಗೆ ಭೇಟಿ ನೀಡಿದ್ದಾರೆ. ಐಪಿಎಲ್ಗೆ ಇನ್ನೇನು ಒಂದೂವರೆ ತಿಂಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಪುಟ್ಟಪರ್ತಿಗೆ ಧೋನಿ ಭೇಟಿ ನೀಡಿರುವುದು ವಿಶೇಷವೆನಿಸಿದೆ.
ಆರ್ಸಿಬಿ ಮೇಲೆ ನಾಯಕ ಕೊಹ್ಲಿಯೂ ಬೇಸರ, ಏನಾಗಿದೆ ಚಾಲೆಂಜರ್ಸ್ಗೆ?!
ಚಾರ್ಟೆಡ್ ಫ್ಲೈಟ್ ಮೂಲಕ ಪುಟ್ಟಪರ್ತಿ ವಿಮಾನ ನಿಲ್ದಾಣಕ್ಕೆ ಮಹೇಂದ್ರ ಸಿಂಗ್ ಧೋನಿ ಬೆಳಗ್ಗೆ ಆಗಮಿಸಿದರು. ಬಳಿಕ ಸಾಯಿ ಕುಲ್ವಂತ್ ಹಾಲ್ನಲ್ಲಿರುವ ಶ್ರೀ ಸತ್ಯಸಾಯಿಬಾಬಾ ಅವರ ಸಮಾಧಿಯ ದರ್ಶನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಿಂದ ವಿಶೇಷ ಸನ್ಮಾನವನ್ನು ಧೋನಿ ಸ್ವೀಕರಿಸಿದ್ದಾರೆ.
ಪ್ರಶಾಂತಿ ನಿಲಯಂನಿಂದ ಬಳಕ ನೇರವಾಗಿ ಟೀಮ್ ಇಂಡಿಯಾದ ಎಕ್ಸ್ಟರ್ನಲ್ ಡಾಕ್ಟರ್ಗಳಲ್ಲಿ ಓರ್ವರಾಗಿರುವ ಮುತು ಕುಮಾರ್ ಅವರನ್ನು ಭೇಟಿಯಾಗಲು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಆಸ್ಪತ್ರೆ ಸಿಬ್ಬಂಧಿಗಳು ಆಸ್ಪತ್ರೆಯ ವಿಶೇಷತೆಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
ಕ್ರೀಡಾ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿರುವ ಮುತು ಕುಮಾರ್ ಲಂಡನ್ನಲ್ಲಿ ಕರ್ತವ್ಯ ಮಾಡುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ವರ್ಷಕ್ಕೆರಡು ಬಾರಿ ಈ ಆಸ್ಪತ್ರೆಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಮುತು ಕುಮಾರ್ ಇದೇ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು.