ಎನ್ಸಿಸಿ ವಿಮರ್ಶಾ ಸಮಿತಿಯಲ್ಲಿ ಪರಿಣಿತರು
"ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಅನ್ನು ಕಾಲಕ್ಕೆ ಅನುಗುಣವಾಗಿ ಹೆಚ್ಚು ಪ್ರಸ್ತುತವೆನಿಸುವಂತೆ ಮಾಡಲು ಪಾರ್ಲಿಮೆಂಟ್ ಮಾಜಿ ಸದಸ್ಯ ಬೈಜಯಂತ್ ಪಂಡ ಅವರ ಅಧ್ಯಕ್ಷತೆಯಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ಸಮಗ್ರವಾಗಿ ವಿಮರ್ಶಿಸಲು ರಕ್ಷಣಾ ಸಚಿವಾಲಯ ಸಮಿತಿ ರೂಪಿಸಿದೆ. ಎನ್ಸಿಸಿ ಕೆಡೆಟ್ಗಳು ರಾಷ್ಟ್ರ ನಿರ್ಮಾಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿ ಪ್ರಯತ್ನಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಅಧಿಕಾರ ನೀಡುವ ಕ್ರಮಗಳು ಇದಾಗಿವೆ," ಎಂದು ರಕ್ಷಣಾ ಸಚಿವಾಲಯ ಹೇಳಿಕೆಯ ಮೂಲಕ ತಿಳಿಸಿದೆ. ಎನ್ಸಿಸಿ ವಿಮರ್ಶೆಗೆ ರಚಿಸಲಾದ ಪರಿಣಿತರ ಸಮಿತಿಯಲ್ಲಿ ಸಂಸದ ವಿನಯ್ ಸಹಸ್ರಬುದ್ಧೆ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಉಪಕುಲಪತಿ ಪ್ರೊಫೆಸರ್ ನಜ್ಮಾ ಅಖ್ತರ್, ಎಸ್ಎನ್ಡಿಟಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ವಸುಧಾ ಕಾಮತ್ ಸೇರಿ ಇನ್ನಿತರರಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಆಗಿರುವ ಎಂಎಸ್ಡಿ
ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಯಶಸ್ವಿ ನಾಯಕರಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾರತೀಯ ತಂಡ ಹೆಚ್ಚು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಮುಖ ಟ್ರೋಫಿಗಳನ್ನು ಗೆದ್ದಿರುವುದು ಧೋನಿ ನಾಯಕತ್ವದಡಿಯಲ್ಲೇ. ಸದ್ಯ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಧೋನಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, 2019ರಲ್ಲಿ ಏಕದಿನ ವಿಶ್ವಕಪ್ ಬಳಿಕ ಧೋನಿ ಭಾರತೀಯ ಆರ್ಮಿಯ ಪ್ಯಾರಚೂಟ್ ರೆಜಿಮೆಂಟ್ನಲ್ಲಿ ಒಂದು ತಿಂಗಳ ಕಾಲ ಅಭ್ಯಾಸ ಪಡೆದುಕೊಂಡಿದ್ದರು. ಇನ್ನು ಆನಂದ್ ಮಹೀದ್ರ ಅವರು ತನ್ನ ಉದ್ಯಮದ ಮೂಲಕ ರಕ್ಷಣಾ ಉತ್ಪಾದನಾ ಕಾರ್ಯಗಳ ಮುಖಾಂತರ ಭಾರತೀಯ ಸೇನೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.
ಟೀಮ್ ಇಂಡಿಯಾಕ್ಕೆ ಮರಳಿದ ಮಾಹಿ
ಮಾಹಿ ಈಗ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮುಂಬರಲಿರುವ 14ನೇ ಆವೃತ್ತಿಯ ಐಪಿಎಲ್ ದ್ವಿತೀಯ ಆವೃತ್ತಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಧೋನಿ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ಕಾದಾಡಲಿವೆ. ಎರಡೂ ತಂಡಗಳು ಐಪಿಎಲ್ನಲ್ಲಿ ಹೆಚ್ಚು ಯಶಸ್ವಿ ತಂಡಗಳೆನಿಸಿವೆ. ಸಿಎಸ್ಕೆ 3 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದರೆ, ಎಂಐ ಐದು ಬಾರಿ ಚಾಂಪಿಯನ್ಸ್ ಎನಿಸಿದೆ. ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಚೆನ್ನೈ ದ್ವಿತೀಯ ಸ್ಥಾನದಲ್ಲಿದೆ. ಅಗ್ರ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಮೂರನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿವೆ. ಅಕ್ಟೋಬರ್-ನವೆಂಬರ್ನಲ್ಲಿ ಯುಎಇ ಮತ್ತು ಓಮನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವೇಳೆ ಧೋನಿ ಮೆಂಟರ್ ಆಗಿ ಟೀಮ್ ಇಂಡಿಯಾ ಜೊತೆಗಿರಲಿದ್ದಾರೆ.