ದುಬೈ, ಸೆಪ್ಟೆಂಬರ್ 22: ಎಂ.ಎಸ್.ಧೋನಿ ಭಾರತದ ಈವರೆಗಿನ ಯಶಸ್ವೀ ನಾಯಕ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅವರು ನಾಯಕತ್ವ ಸ್ಥಾನವನ್ನು ಅವರು ತ್ಯಜಿಸಿದ್ದಾರೆ. ಆದರೆ ನಾಯಕತ್ವ ಅವರನ್ನು ಬಿಟ್ಟು ಹೋಗಿಲ್ಲ.
ವಿಕೆಟ್ ಹಿಂದೆ ನಿಂತು ಬ್ಯಾಟ್ಸ್ಮನ್ನ ಸೂಕ್ಷ್ಮಗಳನ್ನು ಸನಿಹದಿಂದ ನೋಡುವ ಧೋನಿ ವೇಗವಾಗಿ ಬ್ಯಾಟ್ಸ್ಮನ್ನ ನ್ಯೂನತೆಗಳನ್ನು ಅಳೆದುಬಿಡುತ್ತಾರೆ ಹಾಗಾಗಿಯೇ ಅವರು ಭಾರತದ ಯಶಸ್ವಿ ನಾಯಕ. ಇದಕ್ಕೆ ಉದಾಹರಣೆ ನೀಡಿದೆ ಶುಕ್ರವಾರ ನಡೆದ ಬಾಂಗ್ಲಾ-ಭಾರತ ಪಂದ್ಯ.
ಶುಕ್ರವಾರದ ಪಂದ್ಯದಲ್ಲಿ ಒಂದು ಹಂತದಲ್ಲಿ ಬಾಂಗ್ಲಾದ ಆಲ್ರೌಂಡರ್ ಬ್ಯಾಟ್ಸ್ಮನ್ ಶಕೀಬ್ ಉಲ್ ಹಸನ್ ಅಪಾಯಕಾರಿಯಾಗಿ ಪರಿಣಮಿಸುವ ಸುಳಿವು ನೀಡಿದ್ದರು. ಒಂದೇ ಓವರ್ನಲ್ಲಿ ಎರಡು ಬೌಂಡರಿ ಭಾರಿಸಿದ್ದರು.
ಈ ಹಂತದಲ್ಲಿ ರೋಹಿತ್ ಶರ್ಮಾ ಬಳಿ ತೆರಳಿದ ಧೋನಿ, ಸ್ಲಿಪ್ನಲ್ಲಿ ನಿಂತಿದ್ದ ಧವನ್ ಅವರನ್ನು ಲೆಗ್ ಗಲ್ಲಿಯಲ್ಲಿ ನಿಲ್ಲಿಸುವಂತೆ ಸಲಹೆ ನೀಡಿದರು. ಧೋನಿ ಸಲಹೆಯನ್ನು ಪಾಲಿಸಿದ ರೋಹಿತ್ ಧವನ್ರನ್ನು ಲೆಗ್ ಗಲ್ಲಿಗೆ ನಿಲ್ಲಿಸಿದರು. ಅದರ ಮರು ಚೆಂಡಿನಲ್ಲೇ ಶಕೀಬ್ ಉಲ್ ಹಸನ್ ನೇರವಾಗಿ ಧವನ್ ಕೈಗೆ ನೇರವಾಗಿ ಕ್ಯಾಚಿತ್ತು ಹೊರನಡೆದರು.
ಧೋನಿ ಭಾರತ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದು ಬಹಳ ದಿನಗಳಾಗಿವೆ. ಅವರು ನಾಯಕತ್ವ ಬಿಟ್ಟರೂ ನಾಯಕತ್ವ ಅವರನ್ನು ಬಿಟ್ಟಿಲ್ಲ. ಪಂದ್ಯ ನಡೆಯುವ ವೇಳೆ ಬೌಲರ್ಗಳಿಗೆ ಅಗತ್ಯ ಸಲಹೆ ಕೊಡುವುದರಲ್ಲಿ ಧೋನಿ ಅವರನ್ನು ಮೀರಿಸುವವರಿಲ್ಲ. ಕೇದಾರ್ ಜಾದವ್, ಹೊಸ ಪ್ರತಿಭೆ ಕಲೀಲ್ ಅಹ್ಮದ್ ತಮ್ಮ ಉತ್ತಮ ಬೌಲಿಂಗ್ಗೆ ಧೋನಿ ಕಾರಣ ಎಂಬುದನ್ನು ಇಲ್ಲಿ ನೆನಯಬಹುದು.
ಪ್ರಸ್ತುತ ಭಾರತ ತಂಡದ ನಾಯಕ ಕೊಹ್ಲಿ ಆಗಲಿ ಅಥವಾ ಈಗ ಏಷ್ಯಾಕಪ್ನಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಆಗಲಿ ಧೋನಿಯೊಂದಿಗೆ ಚರ್ಚಿಸಿಯೇ ನಿರ್ಣಯ ತೆಗೆದುಕೊಳ್ಳುತ್ತಾರೆ. ಧೋನಿ ಬ್ಯಾಟಿನಿಂದ ಅಷ್ಟೇನೂ ಚೆನ್ನಾಗಿ ರನ್ ಹರಿದುಬರುತ್ತಿಲ್ಲ ಆದರೆ ಅವರ ಅನುಭವ ಹೊಸ ಆಟಗಾರರಿಗೆ ಹೊಳಪು ನೀಡುತ್ತಿದೆ. ಮತ್ತು ಅವರ ತಂತ್ರಗಾರಿಕೆಯಿಂದಾಗಿ ಪಂದ್ಯದಲ್ಲಿ ಭಾರತವು ಎದುರಾಳಿಗಳಿಗಿಂತಲೂ ಒಂದು ಹೆಜ್ಜೆ ಮುಂದಿರುವುವಂತೆ ಮಾಡುತ್ತಿದೆ.