ಲಂಡನ್, ಜುಲೈ 03: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ನಂತರ ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಅವರು ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಬಂದಿದೆ.
ಟೆಸ್ಟ್ ಕ್ರಿಕೆಟ್ ನಿಂದ ದಿಢೀರ್ ಆಗಿ ನಿವೃತ್ತಿ ಹೊಂದಿದ ಧೋನಿ ಅವರು ಏಕದಿನ ಕ್ರಿಕೆಟ್ ನಿಂದಲೂ ಅದೇ ರೀತಿ ನಿವೃತ್ತಿ ಹೊಂದುತ್ತಾರೆ ಎಂಬ ಸುದ್ದಿ 2015ರ ವಿಶ್ವಕಪ್ ಸಂದರ್ಭದಲ್ಲೂ ಹಬ್ಬಿತ್ತು. ಅದರೆ, ಎಲ್ಲಾ ಊಹಾಪೋಹಗಳಿಗೂ ಧೋನಿ ಫುಲ್ ಸ್ಟಾಪ್ ಇಟ್ಟಿದ್ದರು.
ಐಸಿಸಿ ಆಯೋಜನೆಯ ವಿಶ್ವಕಪ್, ವಿಶ್ವ ಟಿ20 ಹಾಗೂ ಚಾಂಪಿಯನ್ ಟ್ರೋಫಿ ಗೆದ್ದಿರುವ ಏಕೈಕ ನಾಯಕ ಧೋನಿ ಎಂಬುದನ್ನು ಮರೆಯುವಂತಿಲ್ಲ. ಆದರೆ, 2015ರ ವಿಶ್ವಕಪ್ ನಂತರ ಧೋನಿ ಸಾಧನೆ ಮರೆತ ಕೆಲ ಹುಚ್ಚು ಅಭಿಮಾನಿಗಳು ಧೋನಿ ವಿರುದ್ಧ ಕಿಡಿಕಾರಿ ಪ್ರತಿಭಟನೆ ನಡೆಸಿದ್ದರು. ಆದರೆ, ಧೋನಿ ಸತತವಾಗಿ ಉತ್ತಮ ಪ್ರದರ್ಶನ ನೀಡಿ ಏಕದಿನ ಕ್ರಿಕೆಟ್ ಅಲ್ಲದೆ, ಟಿ20ಯಲ್ಲೂ ಆನಂತರ ಮಿಂಚಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.
ಆದರೆ, 2019ರ ವಿಶ್ವಕಪ್ ನಲ್ಲಿ ಧೋನಿ ಆಟದ ಬಗ್ಗೆ ಅಪಸ್ವರ ದೊಡ್ಡದಾಗಿ ಕೇಳಿ ಬಂದಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಮಾಜಿ ಕ್ರಿಕೆಟರ್ಸ್, ಧೋನಿ ಬ್ಯಾಟಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಧೋನಿ ನಡೆ ನಿರೀಕ್ಷೆ ಮಾಡುವುದು ಕಷ್ಟ, ಹಠಾತ್ ನಿರ್ಧಾರ ಕೈಗೊಂಡು ಎಲ್ಲರನ್ನು ಅಚ್ಚರಿಗೆ ದೊಡ್ಡಬಹುದು, ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ, ನಾಯಕತ್ವ ತೊರೆದಿದ್ದು ಎಲ್ಲವೂ ಅನಿರೀಕ್ಷಿತವಾಗಿತ್ತು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಬಿಸಿಸಿಐನ ಹೊಸ ಆಯ್ಕೆ ಸಮಿತಿ ರೂಪುಗೊಳ್ಳುವುದರೊಳಗೆ ಧೋನಿ ತಂಡದಲ್ಲಿರುವುದಿಲ್ಲ. ಆಸ್ಟ್ರೇಲಿಯಾದಲ್ಲಿ 2020 ಐಸಿಸಿ ವಿಶ್ವ ಟಿ20 ಆಡುವುದು ಅನುಮಾನ ಎನ್ನಲಾಗಿದೆ.
ಸದ್ಯಕ್ಕೆ ಟೀಂ ಇಂಡಿಯಾ ಈ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಉಪಾಂತ್ಯ ತಲುಪಿದೆ. 7 ಪಂದ್ಯಗಳಿಂದ ಧೋನಿ 223 ರನ್ ಗಳಿಸಿದ್ದಾರೆ. 93 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ನಂತರ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದ್ದು, 2019ರ ವಿಶ್ವಕಪ್ ನಲ್ಲಿ ಧೋನಿ ಆಡುವುದು ಮುಖ್ಯ ಎಂದು ಅವರ ನಿವೃತ್ತಿಯನ್ನು ಮುಂದೂಡಲಾಗಿತ್ತು. ಆದರೆ, ಈಗ ಕಾಲ ಕೂಡಿ ಬಂದಿದೆ ಎಂದು ಮಾಜಿ ಆಟಗಾರರೊಬ್ಬರು ಹೇಳಿದ್ದಾರೆ.