1. ಅಂತಿಮ ಓವರ್ ಜೋಗೀಂದರ್ಗೆ ನೀಡಿದ್ದು
2007ರ ಐಸಿಸಿ ವಿಶ್ವಕಪ್ ಫೈನಲ್ನಲ್ಲಿ ಬದ್ಧ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ತಂಡಗಳು ಮೈದಾನಕ್ಕಿಳಿದಿದ್ದವು. ಪಂದ್ಯದ ಕೊನೇ ಓವರ್ ಬಾಕಿಯಿತ್ತು. ಪಾಕ್ ಗೆದ್ದು ಚೊಚ್ಚಲ ಬಾರಿಗೆ ಟಿ20 ಚಾಂಪಿಯನ್ಸ್ ಅನ್ನಿಸಿಕೊಳ್ಳಲು 13 ರನ್ಗಳು ಬೇಕಿದ್ದವು. ಕ್ರೀಸ್ನಲ್ಲಿ 35 ಎಸೆತಗಳಲ್ಲಿ 37 ರನ್ ಬಾರಿಸಿದ್ದ ಮಿಸ್ಬಾ ಉಲ್ ಹಕ್ ಇದ್ದರು. ಸ್ಪಿನ್ನರ್ ಹರ್ಭಜನ್ಗೆ ಇನ್ನೂ ಒಂದು ಓವರ್ ಬಾಕಿಯಿತ್ತು. ಆದರೆ ಭಜ್ಜಿಯ 17ನೇ ಓವರ್ಗೆ ಮಿಸ್ಬಾ 3 ಸಿಕ್ಸ್ಗಳನ್ನು ಬಾರಿಸಿದ್ದರು. ಹೀಗಾಗಿ ಧೋನಿ ವೇಗಿ ಜೋಗೀಂದರ್ ಶರ್ಮಾಗೆ ಅವಕಾಶವಿತ್ತರು. ಓವರ್ ಎಸೆಯೋಕೆ ಬಂದ ಜೋಗೀಂದರ್ ಮೊದಲ ಎಸೆತವೇ ವೈಡ್ ಎನಿಸಿತು. ಇತ್ತ ಕೋಟಿ ಭಾರತೀಯರ ಎದೆ ಹೊಡೆದುಕೊಳ್ಳಾರಂಭಿಸಿತ್ತು. ಆ ನಂತರ ಮೊದಲ ಎಸೆತ ಡಾಟ್ ಅನ್ನಿಸಿತು. ಆದರೆ ಎರಡನೇ ಎಸೆತವನ್ನು ಮಿಸ್ಬಾ ಸಿಕ್ಸ್ ಲೈನ್ನತ್ತ ಅಟ್ಟಿದರು. ಈ ಕ್ಯಾಚ್ ಡ್ರಾಪ್ ಅನ್ನಿಸಿತು. ಮುಂದಿನ ಎಸೆತಕ್ಕೆ ಮಿಸ್ಬಾ, ಶ್ರೀಶಾಂತ್ಗೆ ಕ್ಯಾಚಿತ್ತರು. ಮಿಸ್ಬಾದ್ದು 10ನೇ ವಿಕೆಟ್ ಆಗಿದ್ದರಿಂದ ಭಾರತ ಆ ಪಂದ್ಯವನ್ನು ರೋಚಕ 5 ರನ್ನಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. (ಸ್ಕೋರ್: ಭಾರತ-157-5 (20), ಪಾಕಿಸ್ತಾನ-152-10 (19.3).
2. ಏಕದಿನದಿಂದ ಗಂಗೂಲಿ-ದ್ರಾವಿಡ್ ಕೈಬಿಟ್ಟಿದ್ದು
ವಿಶ್ವಕ್ರಿಕೆಟ್ನಲ್ಲಿ ಪ್ರಮುಖ ಕ್ರಿಕೆಟಿಗರ ಸಾಲಿನಲ್ಲಿ ಭಾರತದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಇದ್ದರು. ಅದರಲ್ಲೂ ಏಕದಿನದಲ್ಲಿ ಮಾಜಿ ನಾಯಕರಾದ ಗಂಗೂಲಿ ಮತ್ತು ದ್ರಾವಿಡ್ ಜೊತೆಯಾಗಿ 23,000 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದವರು. ಆದರೆ 2008ರಲ್ಲಿ ಭಾರತ vs ಶ್ರೀಲಂಕಾ vs ಆಸ್ಟ್ರೇಲಿಯಾ ವಿರುದ್ಧ ತ್ರಿಕೋನ ಏಕದಿನ ಸರಣಿಗೆ ತಂಡ ಆರಿಸುವಾಗ ಧೋನಿ, ಗಂಗೂಲಿ ಮತ್ತು ದ್ರಾವಿಡ್ ಅವರನ್ನು ಕೈಬಿಟ್ಟು ಕ್ರಿಕೆಟ್ ಅಭಿಮಾನಿಗಳ ತಲೆಕೆಡಿಸಿಬಿಟ್ಟಿದ್ದರು. ಅಂದು ಫೀಲ್ಡಿಂಗ್ನತ್ತ ಹೆಚ್ಚು ಗಮನಹರಿಸಿದ್ದ ಧೋನಿ ದಿಗ್ಗಜರಿಬ್ಬರನ್ನು ಬದಿಗಿರಿಸಿ ಯುವಕರಿಗೆ ಮಣೆ ಹಾಕಿದ್ದರು. ಧೋನಿಯ ಈ ನಿರ್ಧಾರ ಸರಿಯಿತ್ತು. ಧೋನಿ ತಂಡ ಆವತ್ತು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಈ ಮೂರರಲ್ಲೂ ಸಮತೋಲನ ಸಾಧಿಸಿತ್ತು. ಅಲ್ಲದೆ ಟೀಮ ಇಂಡಿಯಾ ಅಂದಿನಿಂದ ಫೀಲ್ಡಿಂಗ್ನಲ್ಲಿ ಬಲಿಷ್ಠ ತಂಡವಾಗಿ ವಿಶ್ವದ ಗಮನ ಸೆಳೆಯಲಾರಂಭಿಸಿತು. ಅಷ್ಟೇ ಅಲ್ಲ, ಅಂದಿನ ಆ ತ್ರಿಕೋನ ಸರಣಿಯಲ್ಲಿ ಭಾರತ ಅವಿಸ್ಮರಣೀಯ ಗೆಲುವು ದಾಖಲಿಸಿತ್ತು.
3. ತನಗೆ ತಾನೇ 5ನೇ ಕ್ರಮಾಂಕಕ್ಕೆ ಬಡ್ತಿ
2011ರಲ್ಲಿ ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ, ಭಾರತಕ್ಕೆ 275 ಗುರಿ ನೀಡಿತ್ತು. ಚೇಸಿಂಗ್ಗೆ ಇಳಿದಿದ್ದ ಭಾರತ, ವೀರೇಂದ್ರ ಸೆಹ್ವಾಗ್ (0 ರನ್), ಸಚಿನ್ ತೆಂಡೂಲ್ಕರ್ (18), ವಿರಾಟ್ ಕೊಹ್ಲಿ (35) ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತ್ತು. ಅತ್ತ ಲಸಿತ್ ಮಾಲಿಂಗ ಕೂಡ ಮಾರಕ ಸ್ಪೆಲ್ಗಳನ್ನು ಎಸೆಯುತ್ತಿದ್ದರು. ಆವತ್ತು ಧೋನಿ ಇದ್ದಕ್ಕಿದ್ಹಾಗೇ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೈದಾನಕ್ಕಿಳಿದಿದ್ದರು. ಧೋನಿ ಸಡನ್ ನಿರ್ಧಾರ ಕಂಡು ಭಾರತದ ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ಆಸೆ ಬಿಟ್ಟು ತಲೆಕೆರೆದುಕೊಂಡಿದ್ದರು. ಆದರೆ ಆ ದಿನ ಹಾಗೆ ಬ್ಯಾಟಿಂಗ್ಗೆ ಬಂದ ಧೋನಿ ಆಟದ ಕೊನೇವರೆಗೂ ನಿಂತು 79 ಎಸೆತಗಳಲ್ಲಿ 91 ರನ್ ಚಚ್ಚಿದ್ದರು. ಇತ್ತ ಗೌತಮ್ ಗಂಭೀರ್ ಕೂಡ 97 ರನ್, ಯುವರಾಜ್ ಅಜೇಯ 21 ರನ್ ಸೇರ್ಪಡೆಯೊಂದಿಗೆ ಭಾರತ ಆ ದಿನ 6 ವಿಕೆಟ್ ಜಯದೊಂದಿಗೆ 2ನೇ ವಿಶ್ವಕಪ್ ಜಯಿಸಿ ಇತಿಹಾಸ ನಿರ್ಮಿಸಿತ್ತು. (ಸ್ಕೋರ್: ಶ್ರೀಲಂಕಾ-274-6 (50), ಭಾರತ 277-4 (48.2).
4. ತೆಂಡೂಲ್ಕರ್, ಸೆಹ್ವಾಗ್, ಗಂಗೂಲಿಯ ರೊಟೇಟ್
ಕ್ರಿಕೆಟ್ ದಂತಕತೆಗಳನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಿದ್ದ ಹೊತ್ತದು. ಆದರೆ ಎಂಎಸ್ ಧೋನಿ ಆ ಹೊತ್ತಿನಲ್ಲೂ ಭಾರತೀಯ ಕ್ರಿಕೆಟ್ನಲ್ಲಿ ಬದಲಾವಣೆಯ ಗಾಳಿ ಬೀಸಿದ್ದರು. ಫೀಲ್ಡಿಂಗ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದ ಧೋನಿ, ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿಯನ್ನು ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2012ರ ಕಾಮನ್ವೆಲ್ತ್ ಬ್ಯಾಂಕ್ ಸರಣಿಯಲ್ಲಿ ಬದಲಾಯಿಸಲು ನಿರ್ಧರಿಸಿದ್ದರು. ಮೂವರೂ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಾಗಿದ್ದರೂ ಧೋನಿ ಮೂವರನ್ನೂ ಸರಣಿಯುದ್ದಕ್ಕೂ ಒಂದೇ ಒಂದು ಪಂದ್ಯದಲ್ಲಿ ಜೊತೆಯಾಗಿ ಆಡಲು ಅವಕಾಶ ಮಾಡಿಕೊಡದೆ ರೊಟೇಲ್ ಮಾಡುತ್ತಲೇಯಿದ್ದರು. ಆ ಸರಣಿಯಲ್ಲಿ ಭಾರತ ಫೈನಲ್ಗೆ ಅರ್ಹತೆ ಗಳಿಸದೆ ಹೊರ ಬಿದ್ದಿತು. ಆದರೆ ಆರಂಭಿಕ ಬ್ಯಾಟ್ಸ್ಮನ್ಗಳ ವೈಫಲ್ಯ ಎಲ್ಲರೂ ಆವತ್ತು ಗಮನಿಸುವಂತಾಗಿತ್ತು. ಇದು ಮುಂದೆ ಭಾರತದ ಆರಂಭಿಕ ಜೋಡಿ ಇನ್ನಷ್ಟು ಬಲಿಷ್ಟಗೊಳ್ಳಲು ಕಾರಣವಾಯ್ತು.
5. ರೋಹಿತ್ ಶರ್ಮಾಗೆ ಆರಂಭಿರಾಗಿ ಬಡ್ತಿ
2013ರ ವೇಳೆಗೆ ಧೋನಿ, ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದ ಏಕಮಾತ್ರ ನಾಯಕರಾಗಿ ಗುರುತಿಸಿಕೊಂಡಿದ್ದರು. ಇವತ್ತು ತಾನು ಟೀಮ್ ಇಂಡಿಯಾಕ್ಕೆ ಎಂಟ್ರಿಯಾಗುವುದನ್ನೇ ಎದುರು ನೋಡುತ್ತಿರುವ, ಪರಿತಪಿಸುತ್ತಿರುವ ಧೋನಿ ಆವತ್ತು ಅನೇಕ ಕ್ರಿಕೆಟಿಗರ ಅದೃಷ್ಟವನ್ನೇ ಬದಲಾಯಿಸಿದ್ದರು. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ತಂಡದಲ್ಲಿ ಆರಂಭಿಕರಾಗಿ ಬಡ್ತಿ ನೀಡಿದ್ದು. 2011ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಧೋನಿ ರೋಹಿತ್ಗೆ ಆರಂಭಿಕರಾಗಿ ಮೊದಲ ಅವಕಾಶ ನೀಡಿದ್ದರು. ಆದರೆ ಆವತ್ತು ಶರ್ಮಾ ಮೂರು ಇನ್ನಿಂಗ್ಸ್ಗಳಲ್ಲಿ ಕೇವಲ 29 ರನ್ ಗಳಿಸಿದ್ದರು. ಜನವರಿ 2013ರಲ್ಲಿ ಧೋನಿ ಮತ್ತೆ ರೋಹಿತ್ಗೆ ಇಂಗ್ಲೆಂಡ್ ವಿರುದ್ಧ ಆರಂಭಿಕರಾಗಿ ಅವಕಾಶವಿತ್ತರು. ಆವತ್ತು ಮೊಹಾಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ರೋಹಿತ್ ಆರಂಭಿಕರಾಗಿ 83 ರನ್ ಸಿಡಿಸಿದ್ದರು. ಅದಾಗಿ ರೋಹಿತ್ ಮತ್ತೆ ಹಿಂದಿರುಗಿ ನೋಡಲಿಲ್ಲ, ಅಂದಿನಿಂದ ಶರ್ಮಾ ಟೀಮ್ ಇಂಡಿಯಾದ ಅಪಾಯಕಾರಿ ಓಪನರ್ ಆಗಿ ಮಿನುಗತೊಡಗಿದರು.