ಎಂಎಸ್ ಧೋನಿಯನ್ನು ಚೆನ್ನೈ ತಂಡದಲ್ಲಿ ಫಿನಿಷರ್ ಆಗಿ ನೋಡಲು ಎಲ್ಲರೂ ಕಾಯುತ್ತಿದ್ದಾರೆ. ಆದರೆ ಅವರಿಗೆ ಆ ಸ್ಥಾನವನ್ನು ತುಂಬಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕ್ರೀಸ್ನಲ್ಲಿದ್ದರೂ ತಂಡದ ಮುಂದಿದ್ದ ದೊಡ್ಡ ಗುರಿಯನ್ನು ತಲುಪಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಬ್ಯಾಟಿಂಗ್ಗೆ ಇಳಿದ ಆರಂಭದಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಗಿದ್ದರು. ಇದು ಟೀಕೆಗೆ ಕಾರಣವಾಗಿತ್ತು.
ಕೆಕೆಆರ್ನಲ್ಲಿ ಪಾಕ್ ಮೂಲದ ಆಟಗಾರ: ಅಲಿ ಬಗ್ಗೆ ಕುತೂಹಲಕಾರಿ ಮಾಹಿತಿ
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರನ್ ಬೆನ್ನತ್ತುವ ವೇಳೆ ಧೋನಿ ತನ್ನ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಮಾತ್ರವಲ್ಲ ಕ್ರೀಸ್ನಲ್ಲಿ ನೆಲೆಯೂರಲು ಧೊನಿ ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದರು. ಒಂದೆಡೆ ಕ್ರೀಸ್ನಲ್ಲಿದ್ದ ಫಾಪ್ ಡು ಪ್ಲೆಸಿಸ್ ಅಬ್ಬರಿಸುತ್ತಿದ್ದರೂ ಧೋನಿ ಬ್ಯಾಟ್ನಿಂದ ರನ್ ಬರುತ್ತಿರಲಿಲ್ಲ. ಅಂತಿಮ ಓವರ್ನಲ್ಲಿ ಧೋನಿ ಲಯಕ್ಕೆ ಬಂದು ಸತತ ಮೂರು ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದರು. ಆದರೆ ಆಗ ಕಾಲ ಮಿಂಚಿಯಾಗಿತ್ತು, ತಂಡದ ಸೋಲು ಖಚಿತವಾಗಿತ್ತು.
ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 16 ರನ್ಗಳ ಅಂತರದಿಂದ ಶರಣಾಯಿತು. 17 ಎಸೆತಗಳನ್ನು ಎದುರಿಸಿದ ಧೋನಿ ಅಜೇಯ 29 ರನ್ಗಳನ್ನು ದಾಖಲಿಸುವಲ್ಲಿ ಯಶಸ್ವಿಯಾದರು. ಆದರೆ ತಂಡವನ್ನು ಗೆಲ್ಲಿಸಲು ಇದು ಸಾಧ್ಯವಾಗಲಿಲ್ಲ. ಹೆಚ್ಚುವರಿ ಕ್ವಾರಂಟೈನ್ ಅವಧಿ ತಂಡದ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಲಿಲ್ಲ ಎಂದು ಧೋನಿ ಪಂದ್ಯ ಮುಗಿದ ಬಳಿಕ ಹೇಳಿಕೊಂಡಿದ್ದರು.
ಐಪಿಎಲ್ 2020: 10 ವರ್ಷಗಳ ಬಳಿಕ ವಿಶಿಷ್ಠ ದಾಖಲೆ ಬರೆದ ಆರ್ಆರ್
"ಧೋನಿ 14ನೇ ಓವರ್ನಲ್ಲಿ ಕ್ರಿಸ್ಗೆ ಇಳಿದರಾದರೂ ಅವರು ಸುದೀರ್ಘ ಕಾಲದಿಂದ ದೊಡ್ಡ ಪ್ರಮಾಣದ ಕ್ರಿಕೆಟ್ ಆಡಿರಲಿಲ್ಲ. ಆತನ ಮೇಲಿರುವ ನಿರೀಕ್ಷೆಯನ್ನು ಮುಟ್ಟಲು ಕೆಲ ಸಮಯ ತೆಗೆದುಕೊಳ್ಳಬಹುದು. ಆದರೆ ಪಂದ್ಯದ ಅಂತಿಮ ಸಂದರ್ಭದಲ್ಲಿ ಅವರು ಅದ್ಭುತವಾಗಿ ಆಡಿದರು. ಬ್ಯಾಟಿಂಗ್ ವಿಚಾರವಾಗಿ ತಂಡದಲ್ಲಿ ಚಿಂತಿಸುವಂತಾ ಸಂದರ್ಭಗಳು ಇಲ್ಲ" ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.