ಟೀಮ್ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಬುಧವಾರ ಸೋಶಿಯಲ್ ಮೀಡಿಯಾ ದಿನದ ಅಂಗವಾಗಿ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್ವೊಂದರ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕುರಿತಾಗಿ ಹಂಚಿಕೊಂಡಿದ್ದ ಪೋಸ್ಟ್ ಬಗ್ಗೆ ಭುವನೇಶ್ವರ್ ಕುಮಾರ್ ಮಾತನಾಡಿದ್ದು ಈ ಸಂದರ್ಭದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯಾದ ಮರುದಿನ ಕಳೆದ ವರ್ಷ ಆಗಸ್ಟ್ 16ರಂದು ಧೋನಿ ಕುರಿತಾಗಿ ಪೋಸ್ಟ್ ಹಂಚಿಕೊಂಡಿದ್ದರು. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಭುವನೇಶ್ವರ್ ಕುಮಾರ್ ಎಂಎಸ್ ಧೋನಿ ತನಗೆ ಯಾವ ಕಾರಣಕ್ಕೆ ಯಾವಾಗಲೂ ವಿಶೇಷ ಎಂಬುದನ್ನು ವಿವರಿಸಿದ್ದಾರೆ.
ಬಯೋಬಬಲ್ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರಿಗೆ ಒಂದು ವರ್ಷಗಳ ನಿಷೇಧ
"ಈ ಫೋಟೋವನ್ನು ನಾನು ಮಾಹಿ ಭಾಯಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ ಪೋಸ್ಟ್ ಮಾಡಿದ್ದೆ. ಯಾವ ರೀತಿಯಾದ ಆಟಗಾರ ಆತ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಅವರು ವಿಶೇಷ ಮಾನವೀಯತೆಯನ್ನು ಹೊಂದಿರುವ ವ್ಯಕ್ತಿ. ಆ ಕಾರಣಕ್ಕಾಗಿ ನಾನು ಅವರ ಬಗ್ಗೆ ವಿಶೇಷವಾಗಿ ಪೋಸ್ಟ್ ಮಾಡಿದ್ದೆ"
"ಧೋನಿ ಬಗ್ಗೆ ಯಾರ ಬಳಿಯಾದರೂ ನೀವು ಮಾತನಾಡಿ, ಅವರೆಲ್ಲರೂ ಧೋನಿ ಎಷ್ಟು ಸಹಾಯವನ್ನು ಮಾಡಿದ್ದಾರೆ ಎಂಬುದನ್ನೇ ಹೇಳುತ್ತಾರೆ. ಅವರು ಯುವ ಆಟಗಾರರಿಗೆ ಯಾವಾಗಲೂ ಮಾರ್ಗದರ್ಶನವನ್ನು ನೀಡುತ್ತಾ ಇರುತ್ತಾರೆ" ಎಂದು ಭುವನೇಶ್ವರ್ ಕುಮಾರ್ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕಳೆದ ವರ್ಷ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದರು. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಭಾರತಕ್ಕೆ ಗೆಲ್ಲಿಸುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಈ ಮೂರು ಮಹತ್ವದ ಟ್ರೋಫಿಯನ್ನು ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಯನ್ನು ಧೋನಿ ಹೊಂದಿದ್ದಾರೆ.
ಮತ್ತೊಂದೆಡೆ ಭುವನೇಶ್ವರ್ ಕುಮಾರ್ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗಾಗಿ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನ ಜವಾಬ್ಧಾರಿ ಭುವಿ ಹೆಗಲೇರಿದೆ.