ಐಪಿಎಲ್ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇ ಆಫ್ ಕನಸನ್ನು ಕೈ ಬಿಟ್ಟಿದೆ. ಐಪಿಎಲ್ ಇತಿಹಾಸದಲ್ಲೇ ಹಿಂದೆದೂ ಕಾಣದ ರೀತಿಯಲ್ಲಿ ಸಿಎಸ್ಕೆ ನಾಕೌಟ್ಗಳಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.
ರಾಜಸ್ಥಾನ್ ರಾಯಲ್ಸ್ ಭಾನುವಾರ (ಅಕ್ಟೋಬರ್ 25) ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವನ್ನು ದಾಖಲಿಸಿದ ಬಳಿಕ ಅಂಕಿ-ಅಂಶಗಳ ಲೆಕ್ಕಚಾರದಂತೆ ಸಿಎಸ್ಕೆ ಪ್ಲೇ ಆಫ್ ಹಂತಕ್ಕೇರಲು ಸಾಧ್ಯವಿಲ್ಲ ಎಂಬುದು ಬಹಿರಂಗವಾಯಿತು. ಈ ಮೂಲಕ ಐಪಿಎಲ್ 2020ರಲ್ಲಿ ಲೀಗ್ನಲ್ಲೇ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೆ ಸಿಎಸ್ಕೆ ಪಾತ್ರವಾಯಿತು.
ಧೋನಿ ನಾಯಕತ್ವದ ಸಿಎಸ್ಕೆಗೆ ಈ ಹಿನ್ನಡೆ ಬಳಿಕ ಪ್ರಸ್ತುತ 39ರ ಹರೆಯದ ಧೋನಿಗೆ ಇದೇ ಕೊನೆಯ ಐಪಿಎಲ್ ಆಗಬಹುದು ಎಂದು ಹಲವರು ನಂಬಿದ್ದರು. ಜೊತೆಗೆ ಧೋನಿ ಕೂಡ ರನ್ಗಳಿಸಲು ಹೆಣಗಾಡುತ್ತಿದ್ದು, ಮುಂದಿನ ಸೀಸನ್ನಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು. ಆದರೆ ಈ ಕುರಿತು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಸ್ವತಃ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ.
ತನ್ನ ಅಭಿಮಾನಿಯ ಅಭಿಮಾನ ಕಂಡು ಭಾವುಕನಾದ ಧೋನಿ: ಧನ್ಯವಾದ ತಿಳಿಸಿದ ಮಾಹಿ
"ಹೌದು, ಖಂಡಿತವಾಗಿ 2021 ರಲ್ಲಿ ಧೋನಿ ಸಿಎಸ್ಕೆ ಮುನ್ನಡೆಸಲಿದ್ದಾರೆ ಎಂಬ ನಂಬಿಕೆ ನನಗಿದೆ. ಐಪಿಎಲ್ನಲ್ಲಿ ಅವರು ನಮಗೆ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಾವು ಪ್ಲೇಆಫ್ಗೆ ಅರ್ಹತೆ ಪಡೆಯದ ಮೊದಲ ವರ್ಷ ಇದಾಗಿದೆ. ಆದರೆ ಬೇರೆ ಯಾವ ತಂಡವೂ ಈ ಸಾಧನೆ ಮಾಡಿಲ್ಲ. ಒಂದು ಕೆಟ್ಟ ವರ್ಷ ಎಂದರೆ ನಾವು ಎಲ್ಲವನ್ನೂ ಬದಲಾಯಿಸಬೇಕಾಗುತ್ತದೆ ಎಂದಲ್ಲ "ಎಂದು ವಿಶ್ವನಾಥನ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.
"ನಾವು ಈ ಸೀಸನ್ನಲ್ಲಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ನಾವು ಗೆಲ್ಲಬೇಕಾದ ಆಟಗಳನ್ನು ಕಳೆದುಕೊಂಡಿದ್ದೇವೆ. ಅದು ನಮ್ಮನ್ನು ಹಿಂದಕ್ಕೆ ತಳ್ಳಿದೆ. ತಂಡದಲ್ಲಿ ಕೋವಿಡ್ ಪ್ರಕರಣಗಳ ಜೊತೆಗೆ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಅನುಪಸ್ಥಿತಿ ತಂಡದ ಸಮತೋಲನವನ್ನು ಅಲುಗಾಡಿಸಿದೆ"ಎಂದು ಅವರು ಹೇಳಿದರು.
ಚೆನ್ನೈ ಮುಂದಿನ ಐಪಿಎಲ್ ಹರಾಜಿಗೆ ಮುಂಚಿತವಾಗಿ ತಮ್ಮ ಹೆಚ್ಚಿನ ಆಟಗಾರರ ಕುರಿತು ಮರುಪರಿಶೀಲಿಸಬೇಕಾಗುತ್ತದೆ.ಕೇದಾರ್ ಜಾಧವ್, ಪಿಯೂಷ್ ಚಾವ್ಲಾ ಮತ್ತು ಶೇನ್ ವ್ಯಾಟ್ಸನ್ ಅವರಂತಹವರು ಈ ಸೀಸನ್ನಲ್ಲಿ ಆಡುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ಡ್ವೇನ್ ಬ್ರಾವೋ ಕೂಡ ಗಾಯಾಳುವಾಗಿ ತಂಡದಿಂದ ಹೊರಬಿದ್ದರು.