ಮುಂದಿನ ಆವೃತ್ತಿಯಲ್ಲಿ ಇದೇ ತಂಡವನ್ನು ಉಳಿಸಿಕೊಳ್ಳುವುದು ಕಷ್ಟ
"ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದೇ ತಂಡವನ್ನು ಉಳಿಸಿಕೊಳ್ಳುವುದು ತೀರಾ ಕಷ್ಟದ ಕೆಲಸ. ತಂಡದಲ್ಲಿರುವ ಎಲ್ಲಾ ಪ್ರಮುಖ ಆಟಗಾರರನ್ನು ಮುಂದಿನ ಆವೃತ್ತಿಯಲ್ಲಿ ತಂಡದಲ್ಲಿ ಹೊಂದುವುದು ಕಷ್ಟ. ಆದರೆ ತಂಡಕ್ಕೆ ಬೇಕಾಗಿರುವ ಅತಿಮುಖ್ಯವಾದ ಆಟಗಾರರ ಗುಂಪನ್ನು ತಂಡ ಉಳಿಸಿಕೊಳ್ಳಲಿದೆ" ಎಂಬ ವಿಶ್ವಾಸವನ್ನು ರೋಹಿತ್ ಶರ್ಮಾ ವ್ಯಕ್ತಪಡಿಸಿದರು.
ತಂಡದ ಅತಿಮುಖ್ಯ ಆಟಗಾರರನ್ನು ಉಳಿಸಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್?
ಮುಂಬೈ ಇಂಡಿಯನ್ಸ್ ಇತರೆ ತಂಡಗಳ ರೀತಿ ಉತ್ತಮ ಆಟಗಾರರನ್ನು ಇಷ್ಟು ವರ್ಷಗಳಲ್ಲಿ ಹೆಚ್ಚಾಗಿ ಬಿಟ್ಟುಕೊಟ್ಟಿಲ್ಲ. ಅನೇಕ ವರ್ಷಗಳಿಂದ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವನ್ನು ನೀಡುತ್ತಾ ಬಂದಿರುವ ಮುಂಬೈ ಇಂಡಿಯನ್ಸ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿಯೂ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ರಾಹುಲ್ ಚಹಾರ್, ಟ್ರೆಂಟ್ ಬೌಲ್ಟ್ ಹೀಗೆ ಮುಂತಾದ ಪ್ರಮುಖ ಆಟಗಾರರಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವದಂತೂ ನಿಜ.
ಇತರೆ ತಂಡಗಳಿಗಿಂತ ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾಕೆ ಒತ್ತಡ?
ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಮುಂಬರುವ ಐಪಿಎಲ್ ಹರಾಜಿನಲ್ಲಿ ತಂಡವೊಂದು ತನ್ನ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಈ ರೀತಿಯ ನಿಯಮ ಜಾರಿಯಾಗುವುದು ಬಹುತೇಕ ಖಚಿತವಾಗಿದ್ದು, ಇದು ಇತರೆ ತಂಡಗಳಿಗಿಂತ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೆಚ್ಚು ಒತ್ತಡವನ್ನು ಉಂಟು ಮಾಡಲಿದೆ. ಏಕೆಂದರೆ ಕಳೆದ ಕೆಲ ವರ್ಷಗಳಿಂದ ಇತರೆ ತಂಡಗಳ ರೀತಿ ಮುಂಬೈ ಇಂಡಿಯನ್ಸ್ ತಂಡ ತನ್ನ ಬಹುತೇಕ ಆಟಗಾರರನ್ನು ಬಿಟ್ಟುಕೊಟ್ಟಿಲ್ಲ, ಹಲವಾರು ವರ್ಷಗಳಿಂದ ಅದೇ ಆಟಗಾರರಿಗೆ ತಂಡದಲ್ಲಿ ಸ್ಥಾನ ಕೊಡುತ್ತಾ ಬಂದಿರುವ ಮುಂಬೈ ಇಂಡಿಯನ್ಸ್ ಮುಂಬರಲಿರುವ ಹರಾಜಿನಲ್ಲಿ ತನ್ನ ಆಟಗಾರರನ್ನು ಬಿಟ್ಟು ನೂತನ ಆಟಗಾರರನ್ನು ಖರೀದಿಸಿ ಇಷ್ಟೇ ಮಟ್ಟದ ತಂಡವನ್ನು ಕಟ್ಟುವುದು ಸವಾಲಿನ ಕೆಲಸವಾಗಲಿದೆ. ಹೀಗಾಗಿ ಇತರೆ ತಂಡಗಳಿಗೆ ಹೋಲಿಸಿದರೆ ರಿಟೇನ್ ಮಾಡಿಕೊಳ್ಳುವ ನಿಯಮ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಹೆಚ್ಚು ಪ್ರಭಾವ ಮತ್ತು ಒತ್ತಡವನ್ನು ಬೀರಲಿದೆ. ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಈ ರೀತಿಯ ಒತ್ತಡದಿಂದ ಹೊರತಾಗಿಲ್ಲ.