ಎದುರಾಳಿಗಳಿಂದಲೂ ಸಚಿನ್ ಗೌರವ ಸಂಪಾದನೆ
ಸಚಿನ್ ತೆಂಡೂಲ್ಕರ್ ಎದುರಾಳಿ ಆಟಗಾರರಿಂದಲೂ ಗೌರವ ಸಂಪಾದಿದ್ದ ಆಟಗಾರ. ಶೇನ್ ವಾರ್ನ್, ಶೋಯೆಬ್ ಅಖ್ತರ್ ಅವರಂತಾ ಆಟಗಾರರನ್ನು ಬ್ಯಾಟಿಂಗ್ ಮೂಲಕ ಸಚಿನ್ ಕರುಣೆಯಿಲ್ಲದೆ ದಂಡಿಸಿದ್ದರೂ ಅಷ್ಟೇ ಗೌರವವನ್ನು ಅವರಿಂದಲೂ ಪಡೆದುಕೊಂಡಿದ್ದರು. ಅದಕ್ಕೆ ಕಾರಣ ಸಚಿನ್ ಆಟ ಮತ್ತು ವ್ಯಕ್ತಿತ್ವ.
ಸಚಿನ್ ಬಗ್ಗೆ ಹೇಳಿಕೆ ನೀಡಿದ ಪಾಕ್ ಮಾಜಿ ನಾಯಕ
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನೂ ಈ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಬಗ್ಗೆ ಹೇಳಿಕೆಯನ್ನು ನೀಡಿದ ಆ ಪಾಕಿಸ್ತಾನದ ಮಾಜಿ ನಾಯಕ ಬೇರೆ ಯಾರೂ ಅಲ್ಲ. ಅದು ಪಾಕ್ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಕೂಡ ಆಗಿರುವ ರಶೀದ್ ಲತೀಪ್.
ಪಾಕ್ ಮಾಜಿ ನಾಯಕ ಬಿಚ್ಚಿಟ್ಟ ಕುತೂಹಲಕಾರಿ ವಿಚಾರ
ಪಾಕಿಸ್ತಾನ ತಂಡದ ಮಾಜಿ ನಾಯಕನಾಗಿರುವ ರಶೀದ್ ಲತೀಫ್ ವಿಕೆಟ್ನ ಹಿಂದೆ ಕೀಪಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ನನ್ನ ಹೃದಯವೂ ಕೂಡ ಸಚಿನ್ ಔಟಾಗದಿರಲಿ ಎಂದು ಹೇಳುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಸಚಿನ್ ಬಗ್ಗೆ ಮಾತನಾಡಿದ ರಶೀದ್ ಲತೀಫ್ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.
ಸಚಿನ್ ಔಟಾಗುವುದನ್ನು ಬಯಸುತ್ತಿರಲಿಲ್ಲ
ನಾನು ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ ಅನೇಕ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಯಾವಾಗ ಸಚಿನ್ ಬ್ಯಾಟಿಂಗ್ಗೆ ಇಳಿಯುತ್ತಿದ್ದರೋ ಆಗ ಆತ ಔಟಾಗದಿರಲಿ ಎನಿಸುತ್ತಿತ್ತು. ಆತನ ಬ್ಯಾಟಿಂಗನ್ನು ವಿಕೆಟ್ನ ಹಿಂದೆ ನಾನು ತುಂಬಾ ಆನಂದಿಸುತ್ತಿದ್ದೆ. ಆದರೆ ಟಿವಿಯಲ್ಲಿ ನೋಡುವಾಗ ಅಲ್ಲ ಎಂದು ಹೇಳಿದ್ದಾರೆ.
ಏನು ಹೇಳಿದರೂ ನಗುತ್ತಲೇ ಪ್ರತಿಕ್ರಿಯಿಸುತ್ತಿದ್ದರು
ಕ್ರಿಕೆಟ್ನಲ್ಲಿ ದಿಗ್ಗಜರು ಎನಿಸಿದ ಆಟಗಾರರಾದ ಬ್ರ್ಯಾನ್ ಲಾರಾ, ರಿಕಿ ಪಾಂಟಿಂಗ್ ಅಥವಾ ಜಾಕ್ ಕ್ಯಾಲಿಸ್ ಅವರಂತಾ ಆಟಗಾರರು ಬ್ಯಾಟಿಂಗ್ಗೆ ಇಳಿದಾಗ ಅವರು ಔಟಾಗಲಿ ಎಂದು ಅನಿಸುತ್ತಿತ್ತು. ಆದರೆ ಸಚಿನ್ ತೆಂಡೂಲ್ಕರ್ ಅವರ ವರ್ತನೆ ವಿಭಿನ್ನ. ನಾನು ವಿಕೆಟ್ನ ಹಿಂದಿನಿಂದ ಏನಾದರೂ ಹೇಳಿದರೂ ಸಚಿನ್ ಅದಕ್ಕೆ ತಿರುಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಕೇವಲ ನಗುಮೊಗವನ್ನು ಮಾತ್ರವೇ ಬೀರುತ್ತಿದ್ದರು ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಅಂಗಳದ ವರ್ತನೆಯಲ್ಲೂ ಆತ ಶ್ರೇಷ್ಠ
ಆಟಗಾರರು ಆಡುತ್ತಾರೆ ಮತ್ತು ಅಂಗಳದಿಂದ ಮರೆಯಾಗುತ್ತಾರೆ. ಆದರೆ ಆಟಗಾರರ ವರ್ತನೆ ಯಾವಾಗಲೂ ನೆನಪಿನಲ್ಲಿರುತ್ತದೆ. ನನ್ನ ಅನಿಸಿಕೆಯ ಪ್ರಕಾರ ಅಂಗಳದೊಳಗಿನ ವರ್ತನೆಯ ವಿಚಾರದಲ್ಲೂ ಸಚಿನ್ ಶ್ರೇಷ್ಠನಾಗಿ ಉಳಿಯುತ್ತಾರೆ. ಅಂತಾ ಆಟಗಾರರು ನಮ್ಮ ಮನದಲ್ಲಿ ಸುದೀರ್ಘಕಾಲದವರೆಗೆ ಉಳಿದು ಬಿಡುತ್ತಾರೆ ಎಂದು ರಶೀದ್ ಲತೀಫ್ ಯುಟ್ಯೂಬ್ ಚಾನೆಲ್ನಲ್ಲಿ ಸಚಿನ್ ತೆಂಡೂಲ್ಕರ್ ಬಗ್ಗೆ ಮನಸಾರೆ ಹೊಗಳಿ ಮಾತನಾಡಿದ್ದಾರೆ.