ಹುಬ್ಬಳ್ಳಿ, ಸೆ. 13 : ಮೈಸೂರು ವಾರಿಯರ್ಸ್ ತಂಡ ಕೆಪಿಎಲ್ ಮೂರನೇ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಸೋಲಿಸಿದ ಮೈಸೂರು ಚಾಂಪಿಯನ್ ಪಟ್ಟ ಪಡೆಯಿತು.
ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ಶುಕ್ರವಾರ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ನೀಡಿದ್ದ 170 ರನ್ಗಳ ಗುರಿಯನ್ನು ಒಂದು ಎಸೆತ ಬಾಕಿ ಇರುವಂತೆಯೇ ತಲುಪುವಲ್ಲಿ ಮೈಸೂರು ಯಶಸ್ವಿಯಾಯಿತು. 19.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡ ಮೈಸೂರು ವಾರಿಯರ್ಸ್ 174 ರನ್ ಗಳಿಸಿ ಜಯಗಳಿಸಿತು.
ಬೆಳಗಾವಿ ಪ್ಯಾಂಥರ್ಸ್ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಕೆ.ಬಿ.ಪವನ್ 14 ರನ್ ಗಳಿಸಿ ಔಟಾದರೆ ಶಿಶಿರ್ ಭವಾನೆ 29 ರನ್ಗೆ ಔಟಾದರು. ಮಂಜೇಶ್ ರೆಡ್ಡಿ 52 ಮತ್ತು ಅಮಿತ್ ವರ್ಮಾ ಅವರ ಅಜೇಯ 39 ರನ್ ನೆರವಿನಿಂದ ಮೈಸೂರು ಚಾಂಪಿಯನ್ ಆಗಿ ಹೊರಹೊಮ್ಮಿತು. [ಕೆಪಿಎಲ್ ತಂಡ: ಇವರು ಮೈಸೂರು ವಾರಿಯರ್ಸ್]
ಬೃಹತ್ ಮೊತ್ತ ದಾಖಲಿಸಿದ ಬೆಳಗಾವಿ : ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬೆಳಗಾವಿ ಪ್ಯಾಂಥರ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದರು. ಮೋಹನ್ ರಾಮ್ ನಿದೇಶ್ 70 ರನ್ ಗಳಿಸಿ ತಂಡ ಬೃಹತ್ ಮೊತ್ತ ದಾಖಲಿಸಲು ನೆರವು ನೀಡಿದರು. ಮನೀಶ್ ಪಾಂಡೆ 9 ರನ್ ಗಳಿಸಿದರೆ, ಅಭಿಷೇಕ್ ರೆಡ್ಡಿ 24 ರನ್ ಗಳಿಸಿದರು.
ವಿನಯ್ ಕುಮಾರ್ ನೇತೃತ್ವದ ಬೆಳಗಾವಿ ಪ್ಯಾಂಥರ್ಸ್ ನೀಡಿದ ಕಠಿಣ ಗುರಿ ಬೆನ್ನತ್ತಿದ್ದ ಮೈಸೂರು ವಾರಿಯರ್ಸ್ ಕರ್ನಾಟಕ ಪ್ರಿಮೀಯರ್ ಲೀಗ್ 3ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಮಿತ್ ವರ್ಮಾ ಪಂದ್ಯ ಶೇಷ್ಠ ಪ್ರಶಸ್ತಿ ಪಡೆದರೆ, ಶಿಶಿರ್ ಭವಾನೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.