ಜೋಧಪುರ ಮೂಲದ ಕುಟುಂಬದ ಕುಡಿ ಕರುಣ್ ನಾಯರ್
ಜೋಧ್ ಪುರ ನೆಲೆಸಿದ್ದ ಕರುಣ್ ನಾಯರ್ ತಂದೆ ಕಲಾಧರನ್ ನಾಯರ್ ಹಾಗೂ ಪ್ರೇಮ ನಾಯರ್ ದಂಪತಿಯ ಎರಡನೇ ಮಗುವೇ ಕರುಣ್ ನಾಯರ್. 6 ಡಿಸೆಂಬರ್ 1991ರಲ್ಲಿ ಜನಿಸಿದ ಕರುಣ್ ನಾಯರ್ ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಇವರ ಕುಟುಂಬವು ಬೆಂಗಳೂರಿಗೆ ಬಂದು ನೆಲೆಸಿತು.
ಕಲಾಧರನ್ ಮೂಲತಃ ಕೇರಳದವರಾಗಿದ್ದು, ಜೋಧಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ನಂತರ ಕೆಲಸದ ವರ್ಗಾವಣೆ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದರು.
ಚಿಕ್ಕಂದಿನಿಂದಲೇ ಕ್ರಿಕೆಟ್ ಕುರಿತು ಅಪಾರ ಆಸಕ್ತಿ ಹೊಂದಿದ್ದ ಕರುಣ್ ನಾಯರ್
ಕರುಣ್ ನಾಯರ್ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಕುರಿತು ಬಹಳ ಆಸಕ್ತಿ ಹೊಂದಿದ್ದರು. ಮನೆಯಲ್ಲಿಯೇ ಮುದ್ದಿನ ಸಹೋದರಿ ಜೊತೆಗೆ ಕ್ರಿಕೆಟ್ ಆಡುತ್ತಿದ್ದ ಕರುಣ್ ನಾಯರ್, ಮನೆಯ ಸುತ್ತಮುತ್ತ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳುತ್ತಿದ್ದರು. ಮಗನ ಕ್ರಿಕೆಟ್ ಆಸಕ್ತಿಯನ್ನ ಗಮನಿಸಿದ ತಂದೆ ಕಲಾಧರನ್ ನಾಯರ್ ಆತನನ್ನ ಕೋರಮಂಗಲದ ಕ್ರಿಕೆಟ್ ಕೋಚ್ ಶಿವಾನಂದ್ ಅವರ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು.
ಶ್ವಾಸಕೋಶದ ಸಮಸ್ಯೆ ಹೊಂದಿದ್ದ ಕರುಣ್ ನಾಯರ್
ಕರುಣ್ ನಾಯರ್ ಪ್ರಿ ಮೆಚ್ಯುರ್ ಮಗುವಾಗಿದ್ದರಿಂದ ಚಿಕ್ಕಂದಿನಲ್ಲಿ ಸಣ್ಣ ಮಟ್ಟಿನ ಶ್ವಾಸಕೋಶದ ಸಮಸ್ಯೆಯನ್ನ ಎದುರಿಸಿದ್ದರು. ಹೀಗಾಗಿ ಆತನಿಗೆ ಕ್ರೀಡೆಯಲ್ಲಿ ಭಾಗವಹಿಸಲು ಸಹಾಯವಾಗಲು ಪೋಷಕರಿಗೆ ವೈದ್ಯರು ತಿಳಿಸಿದರು. ಹೀಗಾಗಿಯೇ ಮಗನ ಆಸಕ್ತಿಯಂತೆ ಕೋರಮಂಗಲ ಕ್ರಿಕೆಟ್ ಅಕಾಡೆಮಿಗೆ ಸೇರಿಸಲಾಯಿತು. ಕೋಚ್ ಶಿವಾನಂದ್ ಗರಡಿಯಲ್ಲಿ ಬೆಳೆದ ಕರುಣ್ ಕ್ರಿಕೆಟ್ನ ಒಂದೊಂದೇ ಪಾಠಗಳನ್ನ ಕಲಿತನು.
ನಮ್ಮೂರ ಪ್ರತಿಭೆ: ಕುಂದಾಪುರದ ಬಲಭೀಮ ವಿಶ್ವನಾಥ್ ಭಾಸ್ಕರ್ ಗಾಣಿಗ
ಅಕಾಡೆಮಿಗೆ 20 ನಿಮಿಷ ತಡವಾಗಿ ಬಂದಿದ್ದಕ್ಕೆ 3 ಗಂಟೆ ಓಡಿದ್ದ ಬಾಲಕ
ಕರುಣ್ ನಾಯರ್ ಬಾಲ್ಯದ ಕೋಚ್ ಶಿವಾನಂದ್ ಹೇಳಿರುವಂತೆ ಕರುಣ್ ನಾಯರ್ ಒಂದು ಬಾರಿ 20 ನಿಮಿಷ ತಡವಾಗಿ ಬೆಳಿಗ್ಗೆ 6.40ಕ್ಕೆ ಅಕಾಡೆಮಿಗೆ ಆಗಮಿಸಿದ್ದನು. ಹೀಗಾಗಿ ಆತನಿಗಾಗಿ 6.20ಕ್ಕೆ ಬಂದು ಮೊದಲೇ ಕಾಯುತ್ತಿದ್ದ ಕೋಚ್ ಶಿವಾನಂದ್ ಆತನಿಗೆ ಅಕಾಡೆಮಿಯಲ್ಲಿ ಓಡಲು ಹೇಳಿದರು. ಆದ್ರೆ ಶಿವಾನಂದ್ ಮತ್ತೆ ನೆಟ್ಸ್ ನಲ್ಲಿ ಇತರೆ ಹುಡುಗರ ಅಭ್ಯಾಸವನ್ನ ವೀಕ್ಷಿಸಲು ತೆರಳಿದರು. ಆದ್ರೆ ಕೋಚ್ ಮತ್ತೆ ಆತನ ಬಳಿ ತೆರಳುವವರೆಗೂ ಪುಟ್ಟ ಕರುಣ್ ನಾಯರ್ ಓಡುತ್ತಲೇ ಇದ್ದರಂತೆ. ಶಿವಾನಂದ್ ಪ್ರಕಾರ ಆತ ಬರೋಬ್ಬರಿ 3 ಗಂಟೆ ಓಡಿದ್ದನು ಎನ್ನಲಾಗಿದೆ. ಇದರಿಂದ ನೊಂದು ಕೋಚ್ ಕಣ್ಣೀರು ಸಹ ಹಾಕಿದ್ದರು.
ಈ ಅಕಾಡೆಮಿಗೆ ಸೇರಿದ ಬಳಿಕ ಕರುಣ್ ನಾಯರ್ ಒಂದೇ ವರ್ಷದಲ್ಲಿ ಅಂಡರ್-13 ಟೂರ್ನಮೆಂಟ್ನಲ್ಲಿ ಭಾಗವಹಿಸಿದ್ದರು. ಆನಂತರ ಎಲ್ಲಾ ವಯಸ್ಸಿನ ಟೂರ್ನಮೆಂಟ್ಗಳಲ್ಲೂ ಸಹ ಭಾಗವಹಿಸಿದ್ದಾರೆ.
ನಮ್ಮೂರ ಪ್ರತಿಭೆ: ಭಾರತೀಯ ವಾಲಿಬಾಲ್ನಲ್ಲಿ ಮಿಂಚುತ್ತಿರುವ ಅಶ್ವಲ್ ರೈ
ಕೋಚ್ ಶಿವಾನಂದ್ ಮೊದಲೇ ಭವಿಷ್ಯ ನುಡಿದಿದ್ದರು!
ಅಕಾಡೆಮಿಗೆ ಕರುಣ್ ನಾಯರ್ ಅನ್ನು ಸೇರಿಸುವ ದಿನವೇ ಕೋಚ್ ಶಿವಾನಂದ್ ಕರುಣ್ ನಾಯರ್ ಕುರಿತು ಭವಿಷ್ಯ ನುಡಿದಿದ್ದರು. ಈತ ಮುಂದೊಂದು ದಿನ ಬಹುದೊಡ್ಡ ಸ್ಟಾರ್ ಆಗುವ ಲಕ್ಷಣಗಳಿವೆ ಎಂದಿದ್ದರು. ಈ ಕುರಿತು ಸ್ವತಃ ಕರುಣ್ ನಾಯರ್ ಕೋಚ್ ಶಿವಾನಂದ್ ಬಹಿರಂಗಪಡಿಸಿದ್ದಾರೆ.
ಕರುಣ್ ಕ್ರಿಕೆಟ್ ಆಸಕ್ತಿ ಕಂಡು ಪೋಷಕರು ಆತನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಓದಿನ ಜೊತೆಗೆ ಕ್ರಿಕೆಟ್ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕರುಣ್ ನಾಯರ್ಗೆ ಬೆಂಬಲವಾಗಿ ನಿಂತರು. ಗುರುವಿನ ಮಾರ್ಗದರ್ಶನದಲ್ಲಿ ಅಬ್ಯಾಸ ನಡೆಸಿದ ಕರುಣ್ ತನ್ನ 10ನೇ ವಯಸ್ಸಿನಲ್ಲಿಯೇ ಕರ್ನಾಟಕ ಜೋನ್ ಕ್ರಿಕೆಟ್ಗೆ ಸೇರ್ಪಡೆಯಾಗಿ ಒಂದೊಂದೇ ಹಂತ ದಾಟಿದನು.
ನಮ್ಮೂರ ಪ್ರತಿಭೆ: ಕುಸ್ತಿಯಲ್ಲಿ 'ಕರ್ನಾಟಕದ ಕಿಶೋರಿ'ಯಾದ ಹಳಿಯಾಳದ ಸುಜಾತಾ ಪಾಟೀಲ್
ಕರುಣ್ ನಾಯರ್ ಪೆಟ್ ನೇಮ್ ಮತ್ತು ಇಷ್ಟವಾದ ತಿನಿಸು
ಕರುಣ್ ನಾಯರ್ ಅನ್ನು ''ಉನ್ನಿ'' ಎಂಬ ಅಡ್ಡಹೆಸರಿನಲ್ಲಿ ಮನೆಯವರು ಪ್ರೀತಿಯಿಂದ ಕರೆಯುತ್ತಾರೆ. ಕರುಣ್ ನಾಯರ್ಗೆ ಚಿಕ್ಕಂದಿನಿಂದಲೂ ದೋಸೆ ಮತ್ತು ಚಿಕನ್ ಅಂದ್ರೆ ಪಂಚಪ್ರಾಣ. ಬೇಕಾದರೆ ಮೂರು ಹೊತ್ತು ಚಿಕನ್ ತಿನ್ನೋಕು ಇಲ್ಲ ಅನ್ನುವುದಿಲ್ಲ. ಚಿಕ್ಕಂದಿನಲ್ಲಿ ಇಷ್ಟವಾಗದ ತಿನಿಸು ಅಂದ್ರೆ ಮೊಸರನ್ನ. ಆದ್ರೆ ಕೋಚ್ ಶಿವಾನಂದ್ ಆತನಿಗೆ ಮೊಸರನ್ನ ತಿನ್ನುವುದನ್ನ ಅಭ್ಯಾಸ ಮಾಡಿಸಿದರು.
365 ದಿನ ಅಭ್ಯಾಸ ನಡೆಸುತ್ತಿದ್ದ ಕರುಣ್ ನಾಯರ್
ಭಾನುವಾರ, ಹಬ್ಬ, ರಜಾದಿನಗಳು ಹೀಗೆ ಯಾವುದನ್ನೂ ಲೆಕ್ಕವಿಡದ ಕರುಣ್ ನಾಯರ್ ವರ್ಷದ 365 ದಿನಗಳು ಕ್ರಿಕೆಟ್ ಅಭ್ಯಾಸವನ್ನ ಬಿಟ್ಟಿರಲಿಲ್ಲ. 10 ವರ್ಷದಲ್ಲಿ ಕರ್ನಾಟಕ ಜೋನಲ್ ಟೀಮ್ನಲ್ಲಿ ಆಯ್ಕೆಯಾದ ಕರುಣ್, ಮೂರು ವರ್ಷಗಳ ಕಾಲ ಅಂಡರ್-13 ಆಡಿದ್ರು. ನಂತರದಲ್ಲಿ ಅಂಡರ್-15, ಅಂಡರ್-17, ಅಂಡರ್-19, ಅಂಡರ್-23 ಆಡಿದ ಕರುಣ್ ನಾಯರ್ ನಂತರದಲ್ಲಿ ರಣಜಿ ಕೂಡ ಆಡಿದ್ರು. ಭಾರತದ ಪರ ಅಂಡರ್-19 ತಂಡದಲ್ಲೂ, ಇಂಡಿಯ 'A'ಗೆ ಆಡಿದ ಕರುಣ್ ನಾಯರ್ ಒಂದೊಂದೇ ಮೆಟ್ಟಿಲನ್ನು ಹತ್ತಿ ಬೆಳೆದ ಅಪ್ಪಟ ಕ್ರಿಕೆಟ್ ವಿದ್ಯಾರ್ಥಿ.
ಟೀಮ್ ಇಂಡಿಯಾ ಟೆಸ್ಟ್ ಸ್ಕ್ವಾಡ್ನಲ್ಲಿ ಸ್ಥಾನ ಪಡೆದ ಕರುಣ್ ನಾಯರ್
2016ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಪರ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ಕರುಣ್ ನಾಯರ್ ಮೊದಲ ಪಂದ್ಯದಲ್ಲಿ ಕೇವಲ 4ರನ್ಗೆ ರನೌಟ್ ಆದ್ರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದ ಕರುಣ್ ನಾಯರ್ ಮೊದಲ ಪಂದ್ಯದಲ್ಲಿ ರನ್ಗಳಿಸಲು ಸಾಧ್ಯವಾಗಲಿಲ್ಲ.
ತಾನು ಆಡಿದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಕರುಣ್ ನಾಯರ್ ಕೇವಲ 13ರನ್ಗೆ ಮೊಯಿನ್ ಅಲಿ ಬೌಲಿಂಗ್ನಲ್ಲಿ ಎಲ್ಬಿಡ್ಲ್ಯೂ ಬಲೆಗೆ ಬಿದ್ದನು. ಈ ಪಂದ್ಯದಲ್ಲಿ ಕರುಣ್ ನಾಯರ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದನು.
ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿದ ಕರುಣ್ ನಾಯರ್
ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 477 ರನ್ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಭಾರತ ಪರ ಕರುಣ್ ನಾಯರ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್ ನಡೆಸಿದ್ರು.
ಕೆ.ಎಲ್ ರಾಹುಲ್ ದುರಾದೃಷ್ಟವಶಾತ್ 199 ರನ್ಗಳಿಗೆ ಔಟಾಗಿ ನಿರಾಸೆಗೊಂಡು ಪೆವಿಲಿಯನ್ ಸೇರಿಕೊಂಡರು. ಆದ್ರೆ ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡ ಕರುಣ್ ನಾಯರ್ ವಿಶ್ವದಾಖಲೆಯ ತ್ರಿಶತಕ ಸಿಡಿಸಿ ಮಿಂಚಿದನು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೀರೇಂದ್ರ ಸೆಹ್ವಾಗ ಬಳಿಕ ತ್ರಿಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದ ಕರುಣ್ ನಾಯರ್ 381 ಎಸೆತಗಳಲ್ಲಿ ಅಜೇಯ 303 ರನ್ಗಳನ್ನ ಕಲೆಹಾಕಿದನು. ಈತನ ಇನ್ನಿಂಗ್ಸ್ನಲ್ಲಿ 32 ಬೌಂಡರಿ ಮತ್ತು 4 ಅಮೋಘ ಸಿಕ್ಸರ್ಗಳಿದ್ದವು.
ಭಾರತ 759ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿದ್ದಲ್ಲದೆ, ಈ ಪಂದ್ಯವನ್ನ ಇನ್ನಿಂಗ್ಸ್ ಸೇರಿದಂತೆ 75ರನ್ಗಳಿಂದ ಗೆದ್ದುಕೊಂಡಿತು.
ಫಾರ್ಮ್ ವೈಫಲ್ಯದಿಂದ ಭಾರತ ತಂಡದಿಂದ ಸ್ಥಾನ ಕಳೆದುಕೊಂಡರು!
ಕರುಣ್ ನಾಯರ್ ತ್ರಿಶತಕ ಸಿಡಿಸಿದ ಬಳಿಕ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್ನಲ್ಲಿ ಸ್ಥಾನ ಪಡೆದರು. ಆದ್ರೆ ನಂತರದಲ್ಲಿ ಸಿಕ್ಕ ಅವಕಾಶದಲ್ಲಿ ಕರುಣ್ ನಾಯರ್ ಮಿಂಚಲು ವಿಫಲರಾದರು ಹೀಗಾಗಿ ಬಹುಬೇಗನೆ ಟೀಂ ಇಂಡಿಯಾದಿಂದ ಕರುಣ್ ನಾಯರ್ ಸ್ಥಾನ ಕಳೆದುಕೊಂಡರು.
6 ಟೆಸ್ಟ್ ಪಂದ್ಯಗಳನ್ನ ಆಡಿರುವ ಕರುಣ್ ನಾಯರ್ ತ್ರಿಶತಕ ಹೊರತುಪಡಿಸಿ ಮತ್ತೆ ಮಿಂಚಲು ವಿಫಲರಾದರು 7 ಇನ್ನಿಂಗ್ಸ್ನಲ್ಲಿ ಅವರು ಗಳಿಸಿದ್ದು 374 ರನ್. ಕೊನೆಯ ಬಾರಿಗೆ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಈ ಪಂದ್ಯದಲ್ಲಿ ಕರುಣ್ ಮೊದಲ ಇನ್ನಿಂಗ್ಸ್ನಲ್ಲಿ ಐದು ರನ್ಗಳಿಸಿ ಔಟಾದರು. ಆನಂತರದಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲಗೊಂಡರು.
ಪ್ರಸಕ್ತ ಐಪಿಎಲ್ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಬ್ಯಾಟಿಂಗ್
ಐಪಿಎಲ್ ಆರಂಭದಲ್ಲಿ ರಾಜಸ್ತಾನ್ ರಾಯಲ್ಸ್ ಪರ ಚುಟುಕು ಜರ್ನಿ ಶುರು ಮಾಡಿರುವ ಕರುಣ್ ನಾಯರ್ ನಂತರದಲ್ಲಿ ಪಂಜಾಬ್ ಕಿಂಗ್ಸ್ ಪರ ಕೆಲವು ಸೀಸನ್ಗಳನ್ನ ಆಡಿದರು. ಆದ್ರೆ ಅಷ್ಟಾಗಿ ಮಿಂಚದ ಕರುಣ್ ನಾಯರ್ ಅನ್ನು ಈ ಸೀಸನ್ನಲ್ಲಿ ತಂಡದಿಂದ ಹೊರಬಿಡಲಾಯಿತು. ಪರಿಣಾಮ ರಾಜಸ್ತಾನ್ ರಾಯಲ್ಸ್ ಆತನನ್ನ ಖರೀದಿ ಮಾಡಿತು.
ಪ್ರಸಕ್ತ ಸೀಸನ್ನಲ್ಲಿ 3 ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಕರುಣ್ ಗಳಿಸಿರುವ 16ರನ್. ಆದ್ರೂ ಐಪಿಎಲ್ ಇತಿಹಾಸದಲ್ಲಿ 76 ಪಂದ್ಯಗಳಲ್ಲಿ 23.75ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕರುಣ್ ನಾಯರ್ ಒಟ್ಟು 10 ಅರ್ಧಶತಕ ಸೇರಿದಂತೆ 1,496 ರನ್ ಕಲೆಹಾಕಿದ್ದಾರೆ.
ಇವರು ಮುಂದಿನ ದಿನಗಳಲ್ಲಿ ಉತ್ತಮ ಫಾರ್ಮ್ಗೆ ಮರಳಿ ಮತ್ತೆ ಭಾರತ ತಂಡವನ್ನ ಪ್ರತಿನಿಧಿಸಲಿ ಎಂಬುದು ''ಮೈಖೇಲ್ ಕನ್ನಡ''ದ ಆಶಯ.