ಲಂಡನ್, ಆಗಸ್ಟ್ 18: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಭಾರತ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ ಭಾರತ ಟೆಸ್ಟ್ ಸರಣಿಯಲ್ಲಿ ಮಹತ್ವದ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ನೀಡಿದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಇಂತಾ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಇಂಗ್ಲೆಂಡ್ ತಂಡ ಲಾರ್ಡ್ಸ್ ಅಂಗಳದಲ್ಲಿ ಇದಕ್ಕೂ ಮೊದಲು ಸಾಕಷ್ಟು ಅತ್ಯುತ್ತಮ ಕ್ರಿಕೆಟ್ ಪಂದ್ಯಗಳನ್ನು ಆಡಿದೆ. ಈ ಸೋಲಿನಿಂದ ಆದಷ್ಟು ಶೀಘ್ರವಾಗಿ ತಂಡ ಕಮ್ಬ್ಯಾಕ್ ಮಾಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ನಾಸಿರ್ ಹುಸೇನ್ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳು ರನ್ಗಳಿಸುವುದು ಬಹಳ ಮುಖ್ಯವಾಗಿದೆ ಎಂದಿದ್ದಾರೆ. ಜೋ ರೂಟ್ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಭಾರತದ ವಿರುದ್ಧ ಗೆಲುವು ಸಾಧಿಸಬೇಕಾದರೆ ಇತರ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಎಂದಿದ್ದಾರೆ.
ಭಾರತ vs ಇಂಗ್ಲೆಂಡ್: ಲಾರ್ಡ್ಸ್ ಅಂಗಳದಲ್ಲಿ ಸೋತರೂ ಟೀಮ್ ಇಂಡಿಯಾ ಎಂದರೆ ಭಯವಿಲ್ಲ ಎಂದ ಸಿಲ್ವರ್ವುಡ್!
ಭಾರತ ತಂಡದ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿನ ಪಂದ್ಯವನ್ನು ಸೋಲು ಕಂಡ ಬಳಿಕ ಇಂಗ್ಲೆಂಡ್ ತಂಡಕ್ಕೆ ಬೆಂಬಲವನ್ನು ಸೂಚಿಸಿ ನಾಸಿರ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ ತಂಡ ಸಾಕಷ್ಟು ಅತ್ಯುತ್ತಮ ಆಟವನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ. ತಂಡ ಎರಡನೇ ಟೆಸ್ಟ್ನಲ್ಲಿ ಸೋಲು ಕಾಣುವುದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆಯನ್ನು ಪಡೆದುಕೊಂಡಿತ್ತು. ಹಾಗಾಗಿ ಸೋಲು ಕಂಡರು ಎಂಬ ಒಂದೇ ಕಾರಣಕ್ಕೆ ಟೀಕಿಸುವುದು ಸರಿಯಲ್ಲ ಎಂದು ನಾಸಿರ್ ಹುಸೇನ್ ಇಂಗ್ಲೆಂಡ್ ತಂಡವನ್ನು ಟೀಕಿಸುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಲಾರ್ಡ್ಸ್ ಟೆಸ್ಟ್ನ ಅಂತಿಮ ದಿನದಾಟದ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿತ್ತು. ಆದರೆ ಇಂಗ್ಲೆಂಡ್ ತಂಡದ ಯೋಜನೆಗಳನ್ನು ಬುಡಮೇಲು ಮಾಡಿದ್ದು ಭಾರತದ ಬಾಲಂಗೋಚಿಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ. ಈ ಜೋಡಿ ಮುರಿಯದ 9ನೇ ವಿಕೆಟ್ಗೆ ಸೇರಿಸಿದ ಬೃಹತ್ ಜೊತೆಯಾಟದ ನೆರವಿನಿಂದ ಭಾರತ ಪಂದ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಬಳಿಕ ಇಂಗ್ಲೆಂಡ್ ತಂಡದ ಎಲ್ಲಾ ದಾಂಡಿಗರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ಗೆದ್ದು ಬೀಗಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲು 272 ರನ್ಗಳ ಗುರಿಯನ್ನು ನಿಗದಿಪಡಿಸಿತ್ತು ಟೀಮ್ ಇಂಡಿಯಾ. ಆದರೆ ಟೀಮ್ ಇಂಡಿಯಾದ ಬೌಲರ್ಗಳು ಇಂಗ್ಲೆಂಡ್ನ ಬ್ಯಾಟ್ಸ್ಮನ್ಗಳನ್ನು ಕೇವಲ 120 ರನ್ಗಳಿಗೆ ಆಲೌಟ್ ಮಾಡಿತ್ತು. ಈ ಮೂಲಕ ಆತಿಥೇಯ ಇಂಗ್ಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ 151 ರನ್ಗಳ ಅಂತರದಿಂದ ಸೋಲು ಕಂಡಿತ್ತು.
"ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ಸಾಕಷ್ಟು ಅತ್ಯುತ್ತಮ ಆಟವನ್ನು ಪ್ರದರ್ಶಿಸಿದೆ. ಅದನ್ನು ಮರೆಯಬಾರದು. ಸೋಮವಾರ ರಿಷಭ್ ಪಂತ್ ಔಟ್ ಆಗಿ ಫೆವಿಲಿಯನ್ಗೆ ಮರಳುವ ವೇಳೆಗೆ ನಾವೆಲ್ಲರೂ ಇಂಗ್ಲೆಂಡ್ ತಂಡ 1-0 ಅಂತರದಿಂದ ಮುನ್ನಡೆ ಪಡೆಯಲಿದೆ ಎಂದು ಭಾವಿಸಿದ್ದೆವು. ಭಾರತ ತಂಡ ಕೂಡ ತನ್ನ ಬ್ಯಾಟಿಂಗ್ನಲ್ಲಿ ದೌರ್ಬಲ್ಯವನ್ನು ಪ್ರದರ್ಶಿಸಿತ್ತು. ಆದರೆ ಇಂಗ್ಲೆಂಡ್ ತಂಡದಲ್ಲಿ ಜೋ ರೂಟ್ ಒಬ್ಬರೇ ರನ್ಗಳಿಸುವ ಮೂಲಕ ತಂಡ ಗೆಲ್ಲಲು ಸಾಧ್ಯವಿಲ್ಲ" ಎಂದು ನಾಸಿರ್ ಹುಸೇನ್ ಖಡಕ್ ಆಗಿ ಹೇಳಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮುಂದಿನ ಪಂದ್ಯ ಹೆಡಿಂಗ್ಲೆಯ ಲೀಡ್ಸ್ ಮೈದಾನದಲ್ಲಿ ಆಗಸ್ಟ್ 29ರಿಂದ ಆರಂಭವಾಗಲಿದೆ. ಭಾರತ ಈಗಾಗಲೇ ಸರಣಿಯ ಎರಡು ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನವನ್ನು ನೀಡಿದ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿರಲಿದೆ. ಆದರೆ ಇಂಗ್ಲೆಂಡ್ ತಂಡಕ್ಕೆ ಇದು ತವರಿನ ಸರಣಿಯಾಗಿದ್ದು ಪರಿಸ್ಥಿತಿಯ ಅನುಕೂಲಗಳು ಆತಿಥೇಯರಿಗೆ ದೊರೆಯಲಿದೆ. ಲಾರ್ಡ್ಸ್ ಅಂಗಳದ ಸೋಲಿಗೆ ಯಾವ ರೀತಿಯಾಗಿ ಲೀಡ್ಸ್ ಅಂಗಳದಲ್ಲಿ ಜೋ ರೂಟ್ ಪಡೆ ಪ್ರತಿಕ್ರಿಯೆ ನೀಡಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲವಾಗಿದೆ.
ಇನ್ನು ಈ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಈಗಾಗಲೇ ಹೆಸರಿಸಲಾಗಿದೆ. ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ:
ಇಂಗ್ಲೆಂಡ್ ತಂಡ: ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಜಾನಿ ಬೈರ್ಸ್ಟೊವ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಡಾನ್ ಲಾರೆನ್ಸ್, ಸಾಕಿಬ್ ಮಹಮೂದ್, ಡೇವಿಡ್ ಮಲನ್, ಕ್ರೇಗ್ ಓವರ್ಟನ್, ಓಲ್ಲಿ ಪೋಪ್, ಹಸೀಬ್ ಹಮೀದ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್