ಕೊಲಂಬೋ, ಜುಲೈ 19: ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರರ ಪ್ರದರ್ಶನಕ್ಕೆ ಶ್ರೀಲಂಕಾ ತಂಡ ಸೊಲ್ಲೆತ್ತಲೂ ಸಾಧ್ಯವಾಗಲಿಲ್ಲ. ಭಾರತದ ಪ್ರಮುಖ ತಂಡ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಸಂದರ್ಭಲ್ಲಿ ಅನುಭವಿಗಳ ಅಲಭ್ಯತೆಯಲ್ಲಿ ಈ ಸರಣಿ ನಡೆಯುತ್ತಿದ್ದರೂ ಭಾರತ ತಂಡದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಧ್ಯೆ ನೆಟ್ಟಿಗರು ಕುತೂಹಲಕಾರಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಶ್ರೀಲಂಕಾಗೆ ತೆರಳಿರುವ ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ನಲ್ಲಿರುವ ಭಾರತೀಯ ತಂಡಕ್ಕೆ ಟೀಮ್ ಇಂಡಿಯಾದ ಖಾಯಂ ಮುಖ್ಯ ಕೋಚ್ ರವಿ ಶಾಸ್ತ್ರಿ ಮಾರ್ಗದರ್ಶನವಿದೆ. ಈ ಎರಡು ತಂಡಗಳು ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗ ನೆಟ್ಟಿಗರು ಈ ಎರಡು ತಂಡಗಳ ನಡುವೆಯೇ ಪಂದ್ಯವನ್ನು ಏರ್ಪಡಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ಚೊಚ್ಚಲ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ಇಶಾನ್, ಲಂಕಾ ವಿರುದ್ಧ ಧವನ್ 1000 ರನ್
ಹೌದು, ರಾಹುಲ್ ದ್ರಾವಿಡ್ ಮಾರ್ಗದರ್ಶನದ ಭಾರತೀಯ ಕ್ರಿಕೆಟ್ ತಂಡ ಹಾಗೂ ರವಿಶಾಸ್ತ್ರಿ ಮಾರ್ಗದರ್ಶನದ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯವನ್ನು ಏರ್ಪಡಿಸಬೇಕು ಎಂಬ ಮನವಿಯನ್ನು ಸಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿದೆ. ಬಿಸಿಸಿಐನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಉಲ್ಲೇಖಿಸಿ ಈ ಮನವಿಯನ್ನು ಮಾಡಲಾಗಿದೆ.
ಇನ್ನು ಕೆಲವರು ರವಿ ಶಾಸ್ತ್ರಿ XIಗೆ ವಿರಾಟ್ ಕೊಹ್ಲಿ ನಾಯಕತ್ವದ ಬದಲು ರೋಹಿತ್ ಶರ್ಮಾಗೆ ನಾಯಕತ್ವ ನೀಡಬೇಕು ಎಂಬ ಕೋರಿಕೆಯನ್ನು ಸಲ್ಲಿಸಿದ್ದರೆ ಇನ್ನೂ ಕೆಲವರು ರೋಹಿತ್ ಶರ್ಮಾ ರಾಹುಲ್ ದ್ರಾವಿಡ್ XIಗೆ ಸೇರಿಕೊಂಡು ತಂಡವನ್ನು ಮುನ್ನಡೆಸಲಿ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇಂಗ್ಲೆಂಡ್ನಲ್ಲಿ ಆಗಸ್ಟ್ 4ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಪಾಳ್ಗೊಳ್ಳುವ ವಿರಾಟ್ ಕೊಹ್ಲಿ ನೇತೃತ್ವದ ತಂಡ ಈಗ ಕಠಿಣ ಅಭ್ಯಾಸವನ್ನು ನಡೆಸುತ್ತಿದೆ. ಮತ್ತೊಂದೆಡೆ ಶಿಖರ್ ಧವನ್ ನೇತೃತ್ವದ ತಂಡ ಶ್ರೀಲಂಕಾದಲ್ಲಿದ್ದು ಏಕದಿನ ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು ಎರಡನೇ ಪಂದ್ಯಕ್ಕೆ ಸಿದ್ಧವಾಗುತ್ತಿದೆ.