ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ಆರ್ಸಿಬಿ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಕಾಮೆಂಟರಿ ಬಾಕ್ಸ್ನಲ್ಲಿ ಸುನಿಲ್ ಗವಾಸ್ಕರ್ ಹೇಳಿದ್ದ ಮಾತು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಆದರೆ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಗವಾಸ್ಕರ್ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ದ್ವಂದ್ವಾರ್ಥದಲ್ಲಿ ನಾನು ಯಾವುದೇ ಮಾತನ್ನು ಹೇಳಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಕಾಮೆಂಟರಿ ಸಂದರ್ಭದಲ್ಲಿ ವಿವರಣೆಯನ್ನು ನೀಡಿದ್ದಾರೆ.
ಕೊಹ್ಲಿ ಇನ್ನೂ ಕ್ರೀಸ್ನಲ್ಲಿದ್ದ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ 'ಭಾರತದ ನಾಯಕ ಆಟದಲ್ಲೂ ಇನ್ನೂ ಸುಧಾರಿಸಲು ಉತ್ಸುಕನಾಗಿದ್ದಾರೆ. ಆದರೆ ಅದು ಇನ್ನೂ ಹೆಚ್ಚಿನ ಅಭ್ಯಾಸ ಮಾಡುವುದರಿಂದ ಮಾತ್ರವೇ ಸಾಧ್ಯವಾಗಲಿದ ಎಂದು ಆತನಿಗೂ ತಿಳಿದಿದೆ. ಲಾಕ್ಡೌನ್ ಸಂದರ್ಭದಲ್ಲಿ ಕೊಹ್ಲಿ ಅನುಷ್ಕಾರ ಬೌಲಿಂಗ್ಅನ್ನು ಮಾತ್ರವೇ ಎದುರಿಸಿದ್ದರು. ಆದರೆ ಅದು ಹೆಚ್ಚು ಸಹಾಯ ಮಾಡಿದಂತೆ ತೋರುತ್ತಿಲ್ಲ್ ಎಂದಿದ್ದರು ಗವಾಸ್ಕರ್.
'ಕಾಮೆಂಟರಿಯಿಂದ ಕಿತ್ತಾಕಿ': ಸುನಿಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಕಿಡಿ
ಈ ಕಾಮೆಂಟರಿ ಮಾಡುವ ವೇಳೆ ಸುನಿಲ್ ಗವಾಸ್ಕರ್ ಆಕಾಶ್ ಚೋಪ್ರಾ ಜೊತೆಗೆ ಹಿಂದಿಯಲ್ಲಿ ವಿಕ್ಷಕವಿವರಣೆಯನ್ನು ನೀಡುತ್ತಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆ ಸಾಕಷ್ಟು ವಿವಾದವಾಗಿ ಅಭಿಮಾನಿಗಳು ಸುನಿಲ್ ಗವಾಸ್ಕರ್ ಅಭಿರುಚಿಯನ್ನು ಖಂಡಿಸಲು ಶುರು ಮಾಡಿದ್ದರು. ಮಾತ್ರವಲ್ಲ ಕಾಮೆಂಟರಿಯಿಂದ ಸುನಿಲ್ ಗವಾಸ್ಕರ್ ಅವರನ್ನು ತೆಗೆದುಹಾಕಿ ಎಂಬ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದರು.
'ಲಾಕ್ಡೌನ್ನ ಸಂದರ್ಭದಲ್ಲಿ ಅಭ್ಯಾಸದ ಬಗ್ಗೆ ನಾನು ಮಾತನ್ನಾಡಿದ್ದೆ. ವಿರಾಟ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಬೌಲಿಂಗ್ ಮಾಡುತ್ತಿದ್ದರು. ಆ ವಿಡಿಯೋವನ್ನು ನೋಡಿದ್ದೆ. ಹಾಗೂ ಅದರ ಬಗ್ಗೆಯೇ ಮಾತನ್ನಾಡಿದ್ದೆ. ಅದನ್ನು ಬಿಟ್ಟು ಹೆಚ್ಚಿನದನ್ನೇನೂ ನಾನು ಹೇಳಿಲ್ಲ. ಹೀಗಿದ್ದಾಗ ನಾನೆಲ್ಲಿ ಆಕೆಯ ಬಗ್ಗೆ ಕೆಟ್ಟದಾಗಿ ಹೇಳಿಕೆಯನ್ನು ನೀಡಿದ್ದೇನೆ' ಎಂದು ಗವಾಸ್ಕರ್ ಪ್ರಸ್ನಿಸಿದ್ದಾರೆ.
'ನಿಮ್ಮ ಸಂದೇಶ ಅಸಹ್ಯಕರವಾಗಿದೆ': ಗವಾಸ್ಕರ್ ವಿರುದ್ಧ ಸಿಡಿದ ಅನುಷ್ಕಾ
ನಾನು ಹೇಳಿಕೆಯನ್ನು ನೀಡಿದ್ದು ಒಂದು ವಿಡಿಯೋವನ್ನು ನೋಡಿದ ಕಾರಣದಿಂದಾಗಿ. ಅದನ್ನು ಪಕ್ಕದ ಮನೆಯ ಯಾರೋ ಚಿತ್ರೀಕರಿಸಿದ್ದರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ಯಾರಿಗೂ ಅಭ್ಯಾಸ ಮಾಡಲು ಸಾದ್ಯವಾಗಿರಲಿಲ್ಲ. ಅದಕ್ಕೆ ವಿರಾಟ್ ಕೊಹ್ಲಿ ಕೂಡ ಹೊರತಾಗಿರಲಿಲ್ಲ ಎಂಬುದನ್ನಷ್ಟೇ ಹೇಳಲು ನಾನು ಪ್ರಯತ್ನಿಸಿದ್ದೆ. ಕೆಟ್ಟದಾಗಿ ನಾನು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಬೇರೆ ಯಾರೋ ನನ್ನ ಹೇಳಿಕೆಯನ್ನು ಭಿನ್ನ ರೀತಿಯಲ್ಲಿ ಬಿಂಬಿಸಿದರೆ ನಾನೇನು ಮಾಡಲು ಸಾಧ್ಯ ಎಂದು ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.