ಪಾಕ್ ಕ್ರಿಕೆಟನ್ನು ನ್ಯೂಜಿಲೆಂಡ್ ಕೊಂದು ಹಾಕಿತು
ನ್ಯೂಜಿಲೆಂಡ್ ನಿಲುವಿಗೆ ಶೋಯೆಬ್ ಅಖ್ತರ್ ಟ್ವಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. "ಪಾಕಿಸ್ತಾನ ಕ್ರಿಕೆಟ್ ಅನ್ನು ನ್ಯೂಜಿಲೆಂಡ್ ಕೊಂದು ಹಾಕಿತು," ಎಂದು ಅಖ್ತರ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಅದೊಂದು ಪರಿಶೀಲಿಸದ ಬೆದರಿಕೆಯಾಗಿತ್ತು. ಅದನ್ನು ಕೇಳಿ ನ್ಯೂಜಿಲೆಂಡ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿತು ಎಂದು ಅಖ್ತರ್ ಹೇಳಿದ್ದಾರೆ. ನ್ಯೂಜಿಲೆಂಡ್ ತಂಡ ಪಾಕಿಸ್ತಾನದಲ್ಲಿ ಸೆಪ್ಟೆಂಬರ್ 17, 19, 21ಕ್ಕೆ ಮೂರು ಏಕದಿನ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಮತ್ತು ಸೆಪ್ಟೆಂಬರ್ 25, 26, 29, ಅಕ್ಟೋಬರ್ 1, 3ಕ್ಕೆ ಲಾಹೋರ್ನಲ್ಲಿ ಐದು ಪಂದ್ಯಗಳ ಟಿ20ಐ ಸರಣಿ ಆಡಲಿತ್ತು. ಆದರೆ ಭದ್ರತೆಯ ಭೀತಿ ಎದುರಾದ ಕಾರಣ ಪ್ರವಾಸ ಸರಣಿ ಮುಂದೂಡಲ್ಪಟ್ಟಿದೆ. ನ್ಯೂಜಿಲೆಂಡ್ ಭದ್ರತಾ ಸಿಬ್ಬಂದಿಗೆ ಭದ್ರತೆಯ ಅಪಾಯದ ಎಚ್ಚರಿಕೆ ಲಭಿಸಿತ್ತಷ್ಟೇ. ಆದರೆ ಪರಿಶೀಲಿಸಿದಾಗ ಭದ್ರತೆಗೆ ಧಕ್ಕೆಯಾಗುವಂಥ ಯಾವುದೇ ಅಂಶಗಳು ಕಂಡುಬಂದಿರಲಿಲ್ಲ. ಈ ಪಂದ್ಯ ಮುಂದೆ ಯಾವಾಗ ನಡೆಯುತ್ತದೆ ಎನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ. ಇದರಿಂದ ಪಾಕಿಸ್ತಾನ ಕ್ರಿಕೆಟ್ಗಂತೂ ದೊಡ್ಡ ಹಿನ್ನಡೆಯಾಗಿದೆ.
ನ್ಯೂಜಿಲೆಂಡ್ನಲ್ಲಿ 9 ಪಾಕಿಸ್ತಾನಿಗಳು ಕೊಲ್ಲಲ್ಪಟ್ಟಿದ್ದರು
ಸೆಪ್ಟೆಂಬರ್ 17ರಂದು ಶೋಯೆಬ್ ಅಖ್ತರ್ ಸರಣಿ ಟ್ವೀಟ್ಗಳ ಮೂಲಕ ನ್ಯೂಜಿಲೆಂಡ ಕ್ರಿಕೆಟ್ ವಿರುದ್ಧ ಹರಿಹಾಯ್ದಿದ್ದಾರೆ. "ಈ ಕೆಲವು ಅಂಶಗಳನ್ನು ನ್ಯೂಜಿಲೆಂಡ್ ತಂಡ ನೆನಪಿಸಿಕೊಳ್ಳಬೇಕು. ಹಿಂದೊಮ್ಮೆ ಕ್ರೈಸ್ಟ್ಚರ್ಚ್ನಲ್ಲಿ ದಾಳಿ ನಡೆದಿದ್ದಾಗ ಪಾಕಿಸ್ತಾನದ 9 ಮಂದಿ ಕೊಲ್ಲಲ್ಪಟ್ಟಿದ್ದರು. ಆದರೂ ನಾವು ನ್ಯೂಜಿಲೆಂಡ್ ಪರ ಬಲವಾಗಿ ನಿಂತೆವು. ಕೋವಿಡ್ ಪಿಡುಗಿನಂಥ ಕೆಟ್ಟ ಪರಿಸ್ಥಿತಿಯಲ್ಲೂ ಪಾಕಿಸ್ತಾನ ಕ್ರಿಕೆಟ್ ತಂಡ ನ್ಯೂಜಿಲೆಂಡ್ಗೆ ಪ್ರವಾಸ ಹೋಗಿತ್ತು. ನ್ಯೂಜಿಲೆಂಡ್ ಅಧಿಕಾರಿಗಳಿಂದ ಕೆಟ್ಟ ಆತಿಥ್ಯ ಸಿಕ್ಕಿದ್ದರೂ ಅದನ್ನು ದೊಡ್ಡದು ಮಾಡಲಿಲ್ಲ. ಅವೆಲ್ಲವನ್ನೂ ಸಹಿಸಿಕೊಂಡಿತ್ತು. ಇದು ಕೇವಲ ಪರಿಶೀಲಿಸದ ಬೆದರಿಕೆ. ಅದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬಹುದಿತ್ತು. ಪ್ರಧಾನಿ ಇಮ್ರಾನ್ ಖಾನ್ ಸ್ವತಃ ನ್ಯೂಜಿಲೆಂಡ್ ಪ್ರಧಾನಿ ಜೊತೆ ಮಾತನಾಡಿ ಭದ್ರತೆಯ ಭರವಸೆ ನೀಡಿದ್ದರು. ಆದರೂ ಪಂದ್ಯ ಆಡಲು ನ್ಯೂಜಿಲೆಂಡ್ ನಿರಾಕರಿಸಿತು. ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ತಂಡಗಳಿಗೆ ಸುರಕ್ಷಿತವಾಗಿ ಆತಿಥ್ಯ ನೀಡಿದೆ," ಎಂದು ಕೆಲವೊಂದು ಸಂಗತಿಗಳನ್ನು ಅಖ್ತರ್ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ಗೆ ನೆನಪಿಸಿದ್ದಾರೆ.
ಯಾಕೆ ನ್ಯೂಜಿಲೆಂಡ್ಗೆ ಇಷ್ಟು ಭಯ?
2002ರಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್ ತಂಡ ತಂಗಿದ್ದ ಹೋಟೆಲ್ ಸಮೀಪ ಬಾಂಬ್ ಬ್ಲಾಸ್ಟ್ ಆಗಿತ್ತು. ಅದಾಗಿ ಒಂದು ವರ್ಷದ ಬಳಿಕ ನ್ಯೂಜಿಲೆಂಡ್ ತಂಡ ಕೂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನೇ ನಿಲ್ಲಿಸಿತ್ತು. ಆ ಘಟನೆ ನಡೆದು ಬರೋಬ್ಬರಿ 18 ವರ್ಷಗಳ ಬಳಿಕ ಮತ್ತೆ ಕಿವೀಸ್ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. 2003ರಲ್ಲಿ ಐದು ಪಂದ್ಯಗಳ ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗಿತ್ತು. ಅದೇ ಕೊನೇ. ಆ ಬಳಿಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಹೋಗಿದ್ದೇ ಇಲ್ಲ. 2009ರಲ್ಲಿ ಪಾಕ್ಗೆ ಹೋಗಿದ್ದಾಗ, ಈಗ ನ್ಯೂಜಿಲೆಂಡ್ ತಂಡದ ಕೋಚ್ ಆಗಿರುವ ಥಿಲನ್ ಸಮರವೀರ ಅವರ ಎಡ ತೊಡೆಯ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಅದಾಗಿ ಶಸ್ತ್ರ ಚಿಕಿತ್ಸೆ ನಡೆದು ಮೂರು ತಿಂಗಳ ಬಳಿಕ ಸಮರವೀರ ಮತ್ತೆ ಮೈದಾನಕ್ಕಿಳಿದಿದ್ದರು. ಈಗ 2019ರಿಂದಲೂ ಸಮರವೀರ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈಚಿನ ದಿನಗಳಲ್ಲಿ ಕ್ರಿಕೆಟರ್ಸ್ಗೆ ಪಾಕ್ನಲ್ಲಿ ಭಯೋತ್ಪಾದನಾ ಭೀತಿ ಎದುರಾಗಿದ್ದ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಅಖ್ತರ್ ಹೇಳಿದಂತೆ ಈಚಿನ ವರ್ಷಗಳಲ್ಲ ಪಾಕಿಸ್ತಾನ ತಂಡ ಜಿಂಬಾಬ್ವೆ, ಸೌತ್ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳಿಗೆ ಯಶಸ್ವಿಯಾಗಿ ಸರಣಿ ಆಯೋಜಿಸಿತ್ತು.