ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸತತ ಎರಡು ಪಂದ್ಯಗಳನ್ನು ಕಳೆದುಕೊಂಡ ನ್ಯೂಜಿಲ್ಯಾಂಡ್ ತಂಡ ಮತ್ತಷ್ಟು ಒತ್ತಡಕ್ಕೊಳಗಾಗಿದೆ.
ನ್ಯೂಜಿಲ್ಯಾಂಡ್ ಪಾಲಿಗೆ ಇಂದಿನ ಪಂದ್ಯ ಮಹತ್ವದ್ದಾಗಿತ್ತು. ಆದರೆ ಈ ಪಂದ್ಯವನ್ನು ಕಳೆದುಕೊಂಡ ಕಾರಣಕ್ಕೆ ನ್ಯೂಜಿಲ್ಯಾಂಡ್ ತಂಡಸರಣಿಯ ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇಬೇಕಾಗಿದೆ. ಇಲ್ಲವಾದಲ್ಲಿ ನ್ಯೂಜಿಲ್ಯಾಂಡ್ ತವರಿನಲ್ಲೇ ಸರಣಿ ಸೋಲಿನ ಅವಮಾನಕ್ಕೆ ತುತ್ತಾಗಲಿದೆ.
ಟಾಸ್ ಗೆದ್ದು ನ್ಯೂಜಿಲ್ಯಾಂಡ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತ್ತು. ಆದರೆ ಟಿಮ್ ಇಂಡಿಯಾ ಬೌಲರ್ಗಳ ನಿಖರ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್ ಸಾಧಾರಣ ಗುರಿಯನ್ನು ನೀಡಿತ್ತು. 133 ರನ್ಗಳ ಗುರಿಯನ್ನು ಟೀಮ್ ಇಂಡಿಯಾಗೆ ನೀಡಿತ್ತು.
ಈ ಗುರಿಯನ್ನು ಟೀಮ್ ಇಂಡಿಯಾ ಸುಲಭವಾಗಿ ಬೆನ್ನತ್ತುವಲ್ಲಿ ಯಶಸ್ವಿಯಾಗಿದೆ. 17.3 ಓವರ್ಗಳಲ್ಲಿ ಭಾರತ ನ್ಯೂಜಿಲ್ಯಾಂಡ್ ನೀಡಿದ್ದ ಗುರಿಯನ್ನು ಬೆನ್ನತ್ತಿ ಜಯಭೇರಿ ಸಾಧಿಸಿದೆ. ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಮತ್ತೊಂದು ಅರ್ಧ ಶತಕ ಬಾರಿಸಿ ಮಿಂಚಿದರು. ಶ್ರೇಯಸ್ ಅಯ್ಯರ್(44 ರನ್) ರಾಹುಲ್ಗೆ ಉತ್ತಮ ಸಾಥ್ ನೀಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತ್ತು. ಆದರೆ ಕೀವಿಸ್ ತನ್ನ ನಿರ್ಧಾರದಲ್ಲಿ ಆರಂಭದಲ್ಲೇ ಎಡವಿತು. ಉತ್ತಮ ಆರಂಭ ದೊರೆತರೂ ಬಳಿಕ ತನ್ನ ವಿಕೆಟ್ ಗಳನ್ನು ಕಳೆದುಕೊಳ್ಳಲು ಆರಂಭಿಸಿತು. ನ್ಯೂಜಿಲ್ಯಾಂಡ್ನ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಅರ್ಧ ಶತಕದ ಗಡಿಯನ್ನು ದಾಟಲೇ ಇಲ್ಲ.
ಟೀಮ್ ಇಂಡಿಯಾ ಪರವಾಗಿ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದರೆ ಶಾರ್ದೂಲ್ ಠಾಕೂರ್, ಜಸ್ಪ್ರಿತ್ ಬೂಮ್ರಾ ಮತ್ತು ಶಿವಮ್ ದುಬೆ ತಲಾ ಒಂದು ವಿಕೆಟ್ ಪಡೆದರು.