ಹೆನ್ರಿ ನಿಕೋಲ್ಸ್ ಔಟ್ ಗಾಗಿ ಮನವಿ
ರವೀಂದ್ರ ಜಡೇಜಾ ಎಸೆದ 16.5ನೇ ಎಸೆತದಲ್ಲಿ ನ್ಯೂಜಿಲ್ಯಾಂಡ್ ಬ್ಯಾಟ್ಸ ಮನ್ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. ಜಡೇಜಾ ಅವರ ಗಟ್ಟಿಯಾದ ಮನವಿಗೆ ಅಂಪೈರ್ ಔಟ್ ಎಂದು ತೀರ್ಮಾನಿಸಿದರು. ಬಳಿಕ ಕಿವೀಸ್ ಬ್ಯಾಟ್ಸ ಮನ್ ನಿಕೋಲ್ಸ್ ಡಿ ಆರ್ ಎಸ್ (Decision Review System DRS)) ಮೊರೆ ಹೋದರು. ಈ ಸಂದರ್ಭದಲ್ಲಿ ಅಂಪೈರ್ ಎಡವಟ್ಟು ಮಾಡಿದ್ದು ಕಂಡುಬಂತು.
ಡಿಆರ್ಎಸ್ಗೆ ನಿಗದಿತ ಸಮಯ
ಆನ್ ಫಿಲ್ಡ್ ಅಂಪೈರ್ ತೀರ್ಮಾನ ನೀಡಿದ ಬಳಿಕ ಅದನ್ನು ಪ್ರಶ್ನಿಸಿ ಥರ್ಡ್ ಅಂಪೈರ್ ಗೆ ಮೇಲ್ಮನವಿ ಸಲ್ಲಸಬಹುದು. ಈ ವ್ಯವಸ್ಥೆಯನ್ನು ಡಿ ಆರ್ ಎಸ್ ಎಂದು ಕರೆಯುತ್ತಾರೆ. ಅಂಪೈರ್ ತೀರ್ಮಾನ ನೀಡಿದ ನಂತರ 15 ಸೆಕೆಂಡ್ ಗಳು ಡಿ ಆರ್ ಎಸ್ ಗೆ ಹೋಗಲು ಅವಕಾಶ ಇರುತ್ತದೆ. ಅಷ್ಟರಲ್ಲಿ ಬ್ಯಾಟ್ಸ ಮನ್ ಅಥವಾ ಫಿಲ್ಡಿಂಗ್ ತಂಡದ ನಾಯಕ ಡಿ ಆರ್ ಎಸ್ ಗೆ ಹೋಗಬಹುದು. ಒಮ್ಮೆ 15 ಸೆಕೆಂಡ್ ಕಾಲಾವಕಾಶ ಮುಗಿದರೆ, ಆನ್ ಫಿಲ್ಡ್ ಅಂಪೈರ್ ತೀರ್ಮಾನವೇ ಅಂತಿಮ ಆಗುತ್ತೆ. ಆದರೆ, ಈ ವ್ಯವಸ್ಥೆಯಲ್ಲಿ ಎಡವಟ್ಟು ಆಗಿದೆ.
ಸಮಯ ಮುಗಿದರೂ ಡಿಆರ್ಎಸ್ ಕೊಟ್ಟಿದ್ದೇಕೆ?
ರವೀಂದ್ರ ಜಡೇಜಾ ಎಸೆತದಲ್ಲಿ ನಿಕೋಲ್ಸ್ ಔಟ್ ಆದರು. ಸ್ಕ್ರೀನ್ ಮೇಲೆ ಟೈಮರ್ ಓಡ್ತಿತ್ತು. ಕಿವೀಸ್ ಬ್ಯಾಟ್ಸ ಮನ್ ಇಬ್ಬರು ಡಿ ಆರ್ ಎಸ್ ಗೆ ಹೋಗ್ಬೇಕಾ ಅಥವಾ ಬೇಡವಾ ಎಂದು ಚರ್ಚಿಸುತ್ತಿದ್ದರು. ಸರಿಯಾಗಿ 15 ಸೆಕೆಂಡ್ ಮುಗಿಯುವೊತ್ತಿಗೆ ಕಿವೀಸ್ ಬ್ಯಾಟ್ಸಮನ್ ಡಿ ಆರ್ ಎಸ್ ಮನವಿ ಮಾಡಿದರು. ಆದರೆ ಸ್ಕ್ರೀನ್ ಮೇಲೆ ತೋರಿಸುತ್ತಿದ್ದ ಪ್ರಕಾರ 15 ಸೆಕೆಂಡ್ ಮುಕ್ತಾಯವಾಗಿ ರೆಡ್ ಸಿಗ್ನಲ್ ಬಂದಿತ್ತು. ಆದರೂ ಅಂಪೈರ್ ಕಿವೀಸ್ ಬ್ಯಾಟ್ಸ ಮನ್ ಮನವಿ ಸ್ವೀಕರಿಸಿದರು. ಇದನ್ನು ಗಮನಿಸಿದ ಕೊಹ್ಲಿ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. 15 ಸೆಕೆಂಡ್ ಮುಗಿದಿದೆ, ಡಿ ಆರ್ ಎಸ್ ಗೆ ಅವಕಾಶ ಕೊಡಬಾರದು ಎಂದು ಪ್ರಶ್ನಿಸಿದರು. ಆದರೆ, ಕೊಹ್ಲಿ ಮಾತಿಗೆ ಬೆಲೆ ಕೊಡದ ಅಂಪೈರ್ ಡಿ ಆರ್ ಎಸ್ ಮೊರೆ ಹೋದರು.
ಡಿಆರ್ಎಸ್ ನಲ್ಲಿ ಏನಾಯ್ತು?
ಅಂತಿಮವಾಗಿ ಡಿ ಆರ್ ಎಸ್ ಗೆ ಅವಕಾಶ ಮಾಡಿಕೊಡಲಾಯಿತು. ಪಿಚ್ ಇನ್ ಸೈಡ್, ಇಂಪ್ಯಾಕ್ಟ್ ಇನ್ ಸೈಡ್ ಹಾಗೂ ಬಾಲ್ ವಿಕೆಟ್ ಗೆ ತಾಗಿತ್ತು. ಲೆಗ್ ವಿಕೆಟ್ ಗೆ ಮುತ್ತಿಟ್ಟು ಹೋಗಿದ್ದ ಕಾರಣ ಥರ್ಡ್ ಅಂಪೈರ್ 'ಅಂಪೈರ್ಸ್ ಕಾಲ್' ಘೋಷಿಸಿದರು. ಅದಾಗಲೇ ಆನ್ ಫಿಲ್ಡ್ ಅಂಪೈರ್ ಔಟ್ ಎಂದು ತೀರ್ಮಾನಿಸಿದ್ದರಿಂದ ನ್ಯೂಜಿಲ್ಯಾಂಡ್ ಬ್ಯಾಟ್ಸಮನ್ ಔಟ್ ಎಂದು ನಿರ್ಧರಿಸಲಾಯಿತು.
ಸಣ್ಣ ತಪ್ಪು ಪಂದ್ಯ ಬದಲಿಸಬಹುದು
ಕ್ರಿಕೆಟ್ ನಲ್ಲಿ ಅಂಪೈರ್ ಗಳು ಮಾಡುವ ಒಂದು ತಪ್ಪು ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸುತ್ತೆ. ಇಂತಹ ಉದಾಹರಣೆಗಳು ಸಾಕಷ್ಟು ಆಗಿದೆ. ಇಷ್ಟು ಮುಂದುವರಿದ ತಂತ್ರಜ್ಞಾನದ ವ್ಯವಸ್ಥೆ ಇದ್ದರೂ ಅಂಪೈರ್ ಗಳು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಸೆ ಮಾಡುತ್ತೆ.