ಮುಂಬೈ, ನವೆಂಬರ್ 15: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಮಹತ್ವದ ಘೋಷಣೆಯೊಂದನ್ನು ಗುರುವಾರ(ನವೆಂಬರ್ 15)ದಂದು ಮಾಡಿದ್ದಾರೆ. ಮುಂಬರುವ ವಿಶ್ವಕಪ್ ತನಕ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.
ಇಂಗ್ಲೆಂಡಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 05ರಂದು ಭಾರತ ತನ್ನ ಮೊದಲ ಪಂದ್ಯವಾಡಲಿದೆ. ಇದಕ್ಕೂ ಮುನ್ನ 13 ಪಂದ್ಯಗಳನ್ನು ಆಡಲಿರುವ ಭಾರತ ತಂದದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸಬೇಡಿ. ತಂಡದ ಸಮತೋಲನ ಕಾಯ್ದುಕೊಳ್ಳಲಾಗಿದೆ ಎಂದಿದ್ದಾರೆ.
ಈಗ ಆಯ್ಕೆಯಾಗಿರುವ 15 ಮಂದಿ ಆಟಗಾರರು ಬಹುತೇಕ ಯುಕೆಗೆ ಪ್ರಯಾಣಿಸಲು ವಿಮಾನ ಏರಲಿದ್ದಾರೆ ಎಂಬ ಸುಳಿವು ನೀಡಿದರು. ಆಸ್ಟ್ರೇಲಿಯಾ ಸರಣಿ ನವೆಂಬರ್ 21ಕ್ಕೆ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಟಿಯಲ್ಲಿ ಶಾಸ್ತ್ರಿ ಮಾತನಾಡಿದರು.
ಇನ್ನು ಕೇವಲ 13 ಪಂದ್ಯಗಳು ಮಾತ್ರವಿದೆ. ಆಸ್ಟ್ರೇಲಿಯಾ ಸರಣಿ ನಂತರ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿ ಆಡಲಿದೆ. ಡಿಸೆಂಬರ್ 06ರಿಂದ ಅಡಿಲೇಡ್ ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ.
ಪ್ರತಿ ಪಂದ್ಯದಿಂದಲೂ ಕಲಿಯುವುದು ಇದ್ದೇ ಇರುತ್ತದೆ. ಆಸ್ಟ್ರೇಲಿಯಾದಲ್ಲಿ ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಇಂಗ್ಲೆಂಡಿಗೆ ಹೋಗಬೇಕಿದೆ. ಆಟಗಾರರ ಮನಸ್ಥಿತಿಯೂ ಮುಖ್ಯ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.