ಏಕದಿನ ವಿಶ್ವಕಪ್ ಮುಂದೆ ಟಿ ಟ್ವೆಂಟಿ ವಿಶ್ವಕಪ್ ದೊಡ್ಡದೇನಲ್ಲ
ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯ ಕುರಿತಾಗಿ ಮಾತನಾಡಿರುವ ಗೌತಮ್ ಗಂಭೀರ್ ಏಕದಿನ ವಿಶ್ವಕಪ್ ಟೂರ್ನಿಗೆ ಹೋಲಿಸಿದರೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮಹತ್ವದ್ದೇನಲ್ಲ ಎಂಬ ಹೇಳಿಕೆ ನೀಡಿದ್ದಾರೆ. "1981ರಲ್ಲಿ ಹುಟ್ಟಿದ ನಾನು 90ರ ದಶಕದಿಂದ ಏಕದಿನ ಕ್ರಿಕೆಟ್ ನೋಡುತ್ತಾ ಬೆಳೆದು ಬಂದಿದ್ದೇನೆ. ಏಕದಿನ ವಿಶ್ವಕಪ್ ಟೂರ್ನಿ 4 ವರ್ಷಗಳಿಗೊಮ್ಮೆ ನಡೆಯಲಿದ್ದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಆದರೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಹಾಗಲ್ಲ, ಈ ವರ್ಷ ಸದ್ಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಮತ್ತೆ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಹೀಗೆ ಆಗಿಂದಾಗ್ಗೆ ನಡೆಯುವ ಟಿ ಟ್ವೆಂಟಿ ವಿಶ್ವಕಪ್ಗೆ ಏಕದಿನ ವಿಶ್ವಕಪ್ ರೀತಿಯ ಮಹತ್ವವಿಲ್ಲ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿ 3 ವರ್ಷಗಳಿಗೊಮ್ಮೆ ನಡೆಯಬೇಕು
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು ಸರಿಯಾದ ಅವಧಿಗಳ ಅಂತರದಲ್ಲಿ ನಡೆಯದೆ ಇರುವುದರ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು 3 ವರ್ಷಗಳ ಅಂತರದಲ್ಲಿ ನಡೆಯಬೇಕು. ಹೀಗಿದ್ದಾಗ ಮಾತ್ರ ಚಾಂಪಿಯನ್ ಆಗುವ ತಂಡ 3 ವರ್ಷಗಳ ಕಾಲ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ಸ್ ಎಂದು ಕರೆಸಿಕೊಳ್ಳುತ್ತದೆ. ಹೀಗೆ ವರ್ಷಕ್ಕೊಂದು ಬಾರಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ನಡೆಸಿದರೆ ವರ್ಷಕ್ಕೊಮ್ಮೆ ನೂತನ ಚಾಂಪಿಯನ್ಸ್ ತಂಡ ಹೊರಬೀಳುತ್ತದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ ಈ ಬಾರಿಯ ಟೂರ್ನಿಯಲ್ಲಿ ಮಿಂಚಲಿರುವ ಆಟಗಾರ
"ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರಾಗಿದ್ದಾರೆ. ಆದರೆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬಲ್ಲ ಆಟಗಾರನೆಂದರೆ ಅದು ಜಸ್ಪ್ರೀತ್ ಬುಮ್ರಾ ಮಾತ್ರ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.