1983ರಲ್ಲಿ ವಿಶ್ವಕಪ್ಗೆ ಭಾರತ ಮುತ್ತಿಕ್ಕಿತು
ಫೈನಲ್ ತಲುಪುವ ಮುನ್ನ ಭಾರತ ತಂಡವು 1975 ಮತ್ತು 1979ರಲ್ಲಿ ನಿರಾಶಾದಾಯಕವಾಗಿ ಟೂರ್ನಿಯಿಂದ ಹೊರಬಿದ್ದ ನಂತರ ಕ್ರಿಕೆಟ್ ಲೋಕವನ್ನೇ ನಿಬ್ಬೆರಗಾಗಿಸುವ ಸಾಮರ್ಥ್ಯದೊಂದಿಗೆ 1983ರಲ್ಲಿ ವಿಶ್ವಕಪ್ಗೆ ಭಾರತ ಮುತ್ತಿಕ್ಕಿತು.
ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿ ನಾಲ್ಕು ಗೆಲುವುಗಳು ಮತ್ತು ಎರಡು ಸೋಲುಗಳೊಂದಿಗೆ ಅವರು ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದರು. ಅಲ್ಲದೆ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಆರು ವಿಕೆಟ್ಗಳಿಂದ ಸೋಲಿಸಿತ್ತು. ಭಾರತವು "ಜೈಂಟ್ ಕಿಲ್ಲರ್' ಮೋಡ್ನಲ್ಲಿ ಫೈನಲ್ಗೆ ಬಂದಿತ್ತು ಮತ್ತು ಟ್ರೋಫಿಯನ್ನು ಪಡೆದುಕೊಳ್ಳಲು ಒಂದು ಅಂತಿಮ ಹಂತಕ್ಕೆ ಬಂದು ನಿಂತಿತ್ತು. 1975 ಮತ್ತು 1979ರಲ್ಲಿ ಹಿಂದಿನ ಎರಡು ವಿಶ್ವಕಪ್ಗಳನ್ನು ಗೆದ್ದ ವೆಸ್ಟ್ ಇಂಡೀಸ್ ಫೇವರಿಟ್ ಆಗಿ ಫೈನಲ್ಗೆ ಎಂಟ್ರಿ ಕೊಟ್ಟಿತ್ತು.
ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್
ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ಭಾರತ ತಂಡವು ಫೇವರಿಟ್ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿ ಗೆಲುವಿನ ಸಿಹಿ ಉಣಬಡಿಸಿತು. ಭಾರತದ ಬೌಲಿಂಗ್ ವಿಭಾಗವು ಉತ್ಸಾಹಭರಿತ ಪ್ರದರ್ಶನವನ್ನು ಪ್ರದರ್ಶಿಸಿದ ಕಾರಣ ಭಾರತವು ಫೈನಲ್ನಲ್ಲಿ ಸಾಧಾರಣ ಸ್ಕೋರ್ ಅನ್ನು ರಕ್ಷಿಸಿತ್ತು.
ಲಾರ್ಡ್ಸ್ನ ಬಾಲ್ಕನಿಯಲ್ಲಿ ಕಪಿಲ್ ದೇವ್ ಮತ್ತು ಅವರ ತಂಡ ಕೈಯಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ನಿಂತಿರುವ ಚಿತ್ರವನ್ನು ಇಂದಿಗೂ ಯಾರೂ ಮರೆಯಲು ಸಾಧ್ಯವಿಲ್ಲ. ವಾಸ್ತವವಾಗಿ ಅನೇಕ ಭಾರತೀಯ ಆಟಗಾರರು ಸ್ವತಃ ತಂಡವು ಫೈನಲ್ವರೆಗೆ ಬರಬಹುದು ಮತ್ತು ಇತಿಹಾಸವನ್ನು ಬರೆಯಬಹುದು ಎಂದು ನಂಬಿರಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 183 ರನ್ ಗಳಿಸಿತು
1983ರ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಕೃಷ್ಣಮಾಚಾರಿ ಶ್ರೀಕಾಂತ್ 38 ರನ್ ಗರಿಷ್ಠ ಸ್ಕೋರರ್ ಎನಿಸುವುದರೊಂದಿಗೆ 183 ರನ್ಗಳಿಗೆ ಆಲೌಟ್ ಆಯಿತು. ಸಂದೀಪ್ ಪಾಟೀಲ್ ಕೂಡ 27 ರನ್ ಗಳಿಸಿ ಔಟಾದರು. ಆದರೆ ಉಳಿದ ಯಾವುದೇ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಸುನಿಲ್ ಗವಾಸ್ಕರ್ (2) ಮತ್ತು ಕಪಿಲ್ ದೇವ್ (15) ಉತ್ತಮ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.
184 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ವಿವಿಯನ್ ರಿಚರ್ಡ್ಸ್ ಅರ್ಧಶತಕ ಗಳಿಸುವ ಮುನ್ಸೂಚನೆ ನೀಡಿದ್ದರು. ಆದರೆ ಕಪಿಲ್ ದೇವ್ ಅದ್ಭುತ ರನ್ ಕ್ಯಾಚ್ ಪಡೆದರು. ವಿವಿಯನ್ ರಿಚರ್ಡ್ಸ್ 33 ರನ್ ಗಳಿಸಿದ ನಂತರ ಪೆವಿಲಿಯನ್ಗೆ ಮರಳಿದರು. ನಂತರ ಜೆಫ್ ಡುಜಾನ್ 25 ರನ್ ಗಳಿಸಿದರು.
ವೆಸ್ಟ್ ಇಂಡೀಸ್ 140ಕ್ಕೆ ಆಲೌಟ್
ಆದರೆ, ಅಂತಿಮವಾಗಿ ವೆಸ್ಟ್ ಇಂಡೀಸ್ ಇನ್ನಿಂಗ್ಸ್ 140ಕ್ಕೆ ಆಲೌಟ್ ಆಯಿತು ಮತ್ತು ಭಾರತವು 43 ರನ್ಗಳ ಸಮಗ್ರ ಜಯವನ್ನು ದಾಖಲಿಸಿತು. ಭಾರತದ ಪರ ಮೊಹಿಂದರ್ ಅಮರನಾಥ್ ಮತ್ತು ಮದನ್ ಲಾಲ್ ತಲಾ ಮೂರು ವಿಕೆಟ್ ಪಡೆದರು. ಲಾಲಾ ಅಮರನಾಥ್ ಅವರು ಮೈಕಲ್ರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ವಿಕೆಟ್ ಹಿಡಿದುಕೊಂಡು ಮತ್ತೆ ಡ್ರೆಸ್ಸಿಂಗ್ ರೂಂಗೆ ಓಡಿದ ಚಿತ್ರ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ.
ಈ ದಿನ 39 ವರ್ಷಗಳ ಹಿಂದೆ, ಕಪಿಲ್ ದೇವ್ ಲಾರ್ಡ್ಸ್ ಬಾಲ್ಕನಿಯಲ್ಲಿ ವಿಶ್ವಕಪ್ ಟ್ರೋಫಿಯನ್ನು ಎತ್ತಿದರು. ಕ್ರಿಕೆಟ್ ಅನ್ನು ಪ್ರೀತಿಸಲು ಮತ್ತು ಆಡಲು ಲಕ್ಷಾಂತರ ಜನರನ್ನು ಪ್ರೇರೇಪಿಸಿದರು. ಈ ವಿಶ್ವಕಪ್ ಗೆಲುವಿನ ನಂತರ ಭಾರತ ದೇಶದಲ್ಲಿ ಕ್ರಿಕೆಟ್ಗೆ ಪ್ರಮುಖ ಉತ್ತೇಜನ ಸಿಕ್ಕಿತು ಮತ್ತು ಕ್ರೀಡೆಯು ಮತ್ತೆ ಹಿಂದಿರುಗಿ ನೋಡದ ರೀತಿ ಬೆಳೆಯಿತು.