ವಿಶ್ವಕಪ್ಗೆ ಮುನ್ನವೇ ಅಬ್ಬರಿಸಿತ್ತು ಭಾರತ
ಈ ವಿಶ್ವಕಪ್ಗೆ ಮುನ್ನ ಭಾರತ ವೆಸ್ಟ್ ಕೆರೀಬಿಯನ್ ನಾಡಿಗೆ ಪ್ರವಾಸ ಕೈಗೊಂಡಿತ್ತು. ಆ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಸರಣಿಯಲ್ಲಿ ಅದರದ್ದೇ ನೆಲದಲ್ಲಿ ಭರ್ಜರಿಯಾಗಿ ಸೋಲಿಸಿತ್ತು. ಆದರೆ ಅದು ಭಾರತಕ್ಕೆ ಸಿಕ್ಕ ಅಚಾನಕ್ ಗೆಲುವು ಎಂದು ವಿಮರ್ಶಿಸಲಾಗಿತ್ತು. ಆದರೆ ವಿಶ್ವಕಪ್ನಲ್ಲಿ ಭಾರತ ಫೈನಲ್ ಪಂದ್ಯವೂ ಸೇರಿದಂತೆ ವೆಸ್ಟ್ ಇಂಡೀಸ್ ತಂಡವನ್ನು ಎರಡು ಪಂದ್ಯಗಳಲ್ಲಿ ಸೋಲಿಸಿ ಇದು ತನ್ನ ಸ್ವಂತ ಸಾಮರ್ಥ್ಯದ ಗೆಲುವು ಎಂದು ಸಾರಿ ಹೇಳಿತ್ತು.
ಆರಂಭದಲ್ಲೇ ಪರಾಕ್ರಮ
1983ರ ಪಂದ್ಯದಲ್ಲಿ ಭಾರತ ಮೊದಲಿಗೆ ವೆಸ್ಟ್ ಇಂಡೀಸ್ ತಂಡವನ್ನು ಲೀಗ್ ಹಂತದಲ್ಲಿ ಎದುರಿಸಿತ್ತು. ಈ ಪಂದ್ಯದಲ್ಲಿ ಭಾರತದ ತಂಡ ಯಶ್ಪಾಲ್ ಶರ್ಮಾ ಅವರ 89ರನ್ಗಳ ಅಮೂಲ್ಯ ಕೊಡುಗೆ ಸಂದೀಪ್ ಪಾಟೀಲ್ ಉಪಯುಕ್ತ ಆಟದಿಂದ ನಿಗದಿತ 60 ಓವರ್ಗಳಲ್ಲಿ 262 ರನ್ಗಳ ಸವಾಲನ್ನು ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 228ರನ್ ಗಳಿಸಿ ಭಾರತಕ್ಕೆ ಶರಣಾಗಿತ್ತು. ಈ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿತ್ತು. ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಕೂಡ ಸುಲಭವಾಗಿ ಸೋಲಿಸಿತ್ತು.
ಸತತ ಗೆಲುವಿನ ನಂತರ ಆಘಾತ
ಮೊದಲೆರಡು ಪಂದ್ಯಗಳಲ್ಲಿ ಗೆಲುವನ್ನು ಕಂಡ ಭಾರತ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಡವಿತ್ತು. ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮತ್ತೊಂದು ಲೀಗ್ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡಕ್ಕೆ ಶರಣಾಗಿತ್ತು. ಈ ಮೂಲಕ ಭಾರತ ಟೂರ್ನಿಯಿಂದ ಹೊರ ಬೀಳುವ ಆತಂಕಕ್ಕೆ ಒಳಗಾಗಿತ್ತು. ಭಾರತ ಮುಂದಿನ ಹಂತಕ್ಕೇರಬೇಕಾದರೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು.
ಕಪಿಲ್ ದೇವ್ ಐತಿಹಾಸಿಕ 175 ರನ್
ಸೆಮಿ ಫೈನಲ್ ಹಂತಕ್ಕೇರಬೇಕಾದರೆ ಲೀಗ್ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ತಂಡವನ್ನು ಸೋಲಿಸಲೇಬೇಕಿತ್ತು. ಜಿಂಬಾಬ್ವೆಯನ್ನು ಮೊದಲು ಎದುರಿಸಿದ ಭಾರತ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿತ್ತು. ಕೇವಲ 17 ರನ್ಗೆ ಭಾರತ ತನ್ನ 5 ವಿಕೆಟ್ ಕಳೆದುಕೊಂಡಿತ್ತು. ಭಾರತದ ಎಲ್ಲಾ ಪ್ರಮುಖ ಆಟಗಾರರು ಫೆವಿಲಿಯನ್ ಸೇರಿಕೊಂಡಿದ್ದರು. ಆದರೆ ಆಗ ಭಾರತದ ಆಪತ್ಭಾಂದವನಂತೆ ಯಾರೂ ಊಹಿಸಲು ಸಾಧ್ಯವಾಗದಂತೆ ಮೇಲಕ್ಕೆತ್ತಿದ್ದರು ಕಪಿಲ್ ದೇವ್. 138 ಎಸೆತಗಳಲ್ಲಿ ಕಪಿಲ್ ಅಂದು ಭರ್ಜರಿ 175 ರನ್ ಚಚ್ಚಿದ್ದರು. ಈ ಮೂಲಕ ಭಾರತ 8 ವಿಕೆಟ್ ಕಳೆದುಕೊಂಡು 266 ರನ್ಗಳನ್ನು ಪೇರಿಸಿತ್ತು. ಭಾರತದ ತಂಡದ ನಾಯಕ ಕಪಿಲ್ದೇವ್ ಏಕದಿನ ವೃತ್ತಿ ಬದುಕಿನಲ್ಲಿ ಸಿಡಿಸಿದ ಏಕೈಕ ಶತಕ ಇಂಥಾ ಅನಿವಾರ್ಯ ಮತ್ತು ಒತ್ತಡದ ಸಂದರ್ಭದಲ್ಲಿ ಬಂದಿತ್ತು!
ಕಪಿಲ್ ಮ್ಯಾಜಿಕ್ ನಂತರ ಭಾರತದ ಓಟಕ್ಕಿಲ್ಲ ತಡೆ!
ಕಪಿಲ್ದೇವ್ ಅಂದು ಸಿಡಿಸಿದ ಶತಕ ಏಕದಿನ ಕ್ರಿಕೆಟ್ ಇತಿಹಾಸ ಕಂಡ ಅದ್ಭುತ ಶತಕಗಳಲ್ಲಿ ಒಂದಾಗಿದೆ. ಆ ಪಂದ್ಯದಲ್ಲಿ ಗೆಲುವನ್ನು ಕಂಡ ಬಳಿಕ ಆಸ್ಟ್ರೇಲಿಯಾ ತಂಡಕ್ಕೂ ಸೋಲಿನ ರುಚಿ ತೋರಿಸಿ ಸೆಮಿಫೈನಲ್ ಹಂತಕ್ಕೇರಿತ್ತು. ಮುಂದೆ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿತ್ತು. ಇಂಗ್ಲೆಂಡ್ ನೀಡಿದ್ದ 214 ರನ್ಗಳ ಸವಾಲನ್ನು ಭಾರತ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.
ಐತಿಹಾಸಿಕ ಕ್ಷಣವನ್ನು ಕಟ್ಟಿಕೊಟ್ಟ ಲಾರ್ಡ್ಸ್
1983 ವಿಶ್ವಕಪ್ನಲ್ಲಿ ಭಾರತ ಮೂರನೇ ಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಕಣಕ್ಕಿಳಿದಿತ್ತು. ಆದರೆ ಈ ಬಾರಿ ಹಿಂದೆಂದಿಗಿಂತಲೂ ಅತ್ಯಂತ ನಿರ್ಣಾಯಕ ಫೈನಲ್ ಪಂದ್ಯವಾಗಿತ್ತು. ಲಾರ್ಡ್ಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ವಿಂಡೀಸ್ ತಂಡವನ್ನು ಮೊದಲಿಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು ಭಾರತ ತಂಡದ ನಾಯಕ ಕಪಿಲ್ ದೇವ್. ಭಾರತದ ಬೌಲಿಂಗ್ ದಾಳಿಗೆ ಬೆದರಿದ್ದ ವೆಸ್ ಇಂಡೀಸ್ ತಂಡ 7 ಆಟಗಾರರ ಒಂದಂಕಿಯ ಕೊಡುಗೆಯೊಂದಿಗೆ ಕೇವಲ 140 ರನ್ಗೆ ಆಟವನ್ನು ಮುಗಿಸಿತ್ತು. ಇದನ್ನು ಸುಲಭವಾಗಿ ಬೆನ್ನತ್ತಿದ ಭಾರತ ಅಭೂತಪೂರ್ವ ವಿಜಯವನ್ನು ದಾಖಲಿಸಿತ್ತು. ಈ ಮೂಲಕ ಭಾರತೀಯ ಕ್ರಿಕೆಟ್ನಲ್ಲಿ ಹೊಸದೊಂದು ಶಕೆಯನ್ನೇ ಬರೆದಿತ್ತು ಕಪಿಲ್ ದೇವ್ ಮತ್ತು ತಂಡ.