ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಇಂಗ್ಲೆಂಡ್ ಸೋಲಿಸಿದ ಭಾರತ
ನಂತರ ಬರ್ಮಿಂಗ್ಹ್ಯಾಮ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ಸವಾಲುಗಳನ್ನು ಎದುರಿಸಿ ಗೆದ್ದಿತು. ಇಂಗ್ಲೆಂಡ್ ವಿರುದ್ಧ ಪ್ರಶಸ್ತಿ ಹಣಾಹಣಿಯನ್ನು ಎದುರಿಸುವ ಮೊದಲು ಶ್ರೀಲಂಕಾ ವಿರುದ್ಧ ಭರ್ಜರಿಯಾಗಿ ಗೆಲುವಿನ ನಗೆ ಬೀರಿದ್ದರು.
ಇಂದು ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಗೆದ್ದ ವಾರ್ಷಿಕೋತ್ಸವದ ಘಟನೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟ್ವಿಟ್ಟರ್ನಲ್ಲಿ ನೆನಪಿಸಿಕೊಂಡಿದೆ.
"2013ರಲ್ಲಿ ಈ ದಿನದಂದು (ಜೂನ್ 23) ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದ ನಂತರ ಭಾರತವು ತಮ್ಮ ಚಾಂಪಿಯನ್ಸ್ ಟ್ರೋಫಿ ಗೆದ್ದವರ ಪಟ್ಟಿಯನ್ನು ಸೇರಿಸಿತು," ಎಂದು ಐಸಿಸಿ ಪೋಸ್ಟ್ಗೆ ಶೀರ್ಷಿಕೆ ನೀಡಿದೆ.
ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್
ಅಂದು ಫೈನಲ್ನಲ್ಲಿ ಮಳೆಯಿಂದಾಗಿ ಪ್ರತಿ ತಂಡಕ್ಕೆ 20 ಓವರ್ಗಳಿಗೆ ಇಳಿಕೆಯಾದ ಏಕದಿನ ಪಂದ್ಯದಲ್ಲಿ, ಭಾರತದ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಹೆಣಗಾಡಿದರು. ಇಂಗ್ಲೆಂಡ್ ಬೌಲರ್ಗಳು ಭಾರತವನ್ನು ಬಿಡಿಸಿಕೊಳ್ಳಲು ಎಂದಿಗೂ ಅವಕಾಶ ನೀಡಲಿಲ್ಲ. ದಿನೇಶ್ ಕಾರ್ತಿಕ್ (6), ಸುರೇಶ್ ರೈನಾ (1) ಮತ್ತು ನಾಯಕ ಎಂಎಸ್ ಧೋನಿ (0) ಸ್ಕೋರ್ಗೆ ಹೆಚ್ಚಿನ ಕೊಡುಗೆ ನೀಡಲಿಲ್ಲ ಮತ್ತು ಭಾರತ 5 ವಿಕೆಟ್ಗೆ 66ಕ್ಕೆ ಕುಸಿಯಿತು.
ಆದರೆ ಕ್ರಮವಾಗಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ 43(34) ಮತ್ತು 33*(25) ಸ್ಕೋರ್ಗಳು ಇಂಗ್ಲೆಂಡ್ ವಿರುದ್ಧ 129/7 ರನ್ ಗಳಿಸಲು ಸಹಾಯ ಮಾಡಿತು. ಶಿಖರ್ ಧವನ್ (24 ಎಸೆತಗಳಲ್ಲಿ 31) ಎರಡಂಕಿ ತಲುಪಿದ ಇನ್ನೊಬ್ಬ ಭಾರತೀಯ ಬ್ಯಾಟರ್ ಆಗಿದ್ದರು.
ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್
ನಂತರ 130 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ನ ಅಗ್ರ ಕ್ರಮಾಂಕ ಕೂಡ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ಆದರೆ ಇಯಾನ್ ಮಾರ್ಗನ್ ಮತ್ತು ರವಿ ಬೋಪಾರ ನಡುವಿನ 64 ರನ್ಗಳ ಜೊತೆಯಾಟವು ಇಂಗ್ಲೆಂಡ್ ತಂಡವನ್ನು ಮತ್ತೆ ಗೆಲುವಿನ ಹಳಿಗೆ ತಂದು ನಿಲ್ಲಿಸಿತ್ತು. ಆದರೆ, ಇಶಾಂತ್ ಶರ್ಮಾ 18ನೇ ಓವರ್ನಲ್ಲಿ ಇಬ್ಬರೂ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು.
ನಂತರ ಸ್ಫೋಟಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರು ರವೀಂದ್ರ ಜಡೇಜಾ ಅವರ ಅಂತಿಮ ಓವರ್ನಲ್ಲಿ ಗೋಲ್ಡನ್ ಡಕ್ಗೆ ಬಿದ್ದರು ಮತ್ತು ಎರಡು ಎಸೆತಗಳ ನಂತರ ಟಿಮ್ ಬ್ರೆಸ್ನನ್ ಕೂಡ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.
ಅಂತಿಮ ಓವರ್ನಲ್ಲಿ ಭಾರತಕ್ಕೆ ರೋಚಕ ಗೆಲುವು
ರವಿಚಂದ್ರನ್ ಅಶ್ವಿನ್ ಎಸೆದ ಇನ್ನಿಂಗ್ಸ್ ಅಂತಿಮ ಓವರ್ನಲ್ಲಿ 15 ರನ್ಗಳನ್ನು ಡಿಫೆಂಡ್ ಮಾಡುವ ಅಗತ್ಯವಿತ್ತು. ಆತಿಥೇಯ ಬಾಲಂಗೋಚಿ ಬ್ಯಾಟ್ಸ್ಮನ್ಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಟ್ರೆಡ್ವೆಲ್ ಇಂಗ್ಲೆಂಡ್ ಗೆಲುವಿಗೆ ಪವಾಡ ಸೃಷ್ಟಿಸಲು ವಿಫಲವಾದ ಕಾರಣ ಆರ್. ಅಶ್ವಿನ್ ಕೊನೆಯ ಎಸೆತವನ್ನು ಬೀಟ್ ಮಾಡುವ ಮೂಲಕ ಐತಿಹಾಸಿಕ ಗೆಲುವು ತಂದುಕೊಟ್ಟರು.
ಇದು ಭಾರತಕ್ಕೆ ಎರಡನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯಾಗಿದೆ. ಅದಕ್ಕೂ ಮುನ್ನ 2011ರ ವಿಶ್ವಕಪ್ನಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು ಸೋಲಿಸಿ ಎರಡನೇ ಬಾರಿಗೆ ವಿಶ್ವಕಪ್ಗೆ ಮುತ್ತಿಕ್ಕಿತು.
ಅದ್ಭುತ ಫಾರ್ಮ್ನಲ್ಲಿದ್ದ ಶಿಖರ್ ಧವನ್ 363 ರನ್ಗಳೊಂದಿಗೆ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು ಮತ್ತು ಗೋಲ್ಡನ್ ಬ್ಯಾಟ್ ತಮ್ಮದಾಗಿಸಿಕೊಂಡರೆ, ಸ್ಪಿನ್ನರ್ ರವೀಂದ್ರ ಜಡೇಜಾ ಗೋಲ್ಡನ್ ಬಾಲ್ ಪಡೆದರು.