ಪಾಕಿಸ್ತಾನಕ್ಕೆ ನಷ್ಟವಾಗುತ್ತದೆ ಹೊರತು, ಭಾರತಕ್ಕಲ್ಲ
ಐಸಿಸಿ ಟೂರ್ನಿಯನ್ನು ಬಹಿಷ್ಕರಿಸುವ ಧೈರ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಿಲ್ಲ ಎಂದು ದಾನೀಶ್ ಕನೇರಿಯಾ ಹೇಳಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ ಅದು ಪಾಕಿಸ್ತಾನಕ್ಕೆ ನಷ್ಟವಾಗುತ್ತದೆ ಹೊರತು, ಭಾರತಕ್ಕಲ್ಲ. ಏಕೆಂದರೆ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಪಾಕಿಸ್ತಾನ ಭಾಗವಹಿಸುತ್ತದೆಯೇ ಅಥವಾ ಭಾಗವಹಿಸುವುದಿಲ್ಲ ಎಂಬುದನ್ನು ಬಿಸಿಸಿಐ ಚಿಂತಿಸುವುದಿಲ್ಲ ಎಂದಿದ್ದಾರೆ.
"ಐಸಿಸಿ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವಷ್ಟು ಧೈರ್ಯ ಪಿಸಿಬಿಗೆ ಇಲ್ಲ. ಮತ್ತೊಂದೆಡೆ, ಪಾಕಿಸ್ತಾನ ಬರದಿದ್ದರೂ ಭಾರತ ಯೋಚಿಸುವುದಿಲ್ಲ. ಹೆಚ್ಚಿನ ಆದಾಯವನ್ನು ಗಳಿಸುವ ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದಾರೆ. ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಹಠ ಹಿಡಿದರೆ ಪಾಕಿಸ್ತಾನದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ಗೆ ಹಾನಿ ಮಾಡುತ್ತದೆ
"ಪಾಕಿಸ್ತಾನ ಅಂತಿಮವಾಗಿ ಏಕದಿನ ವಿಶ್ವಕಪ್ಗಾಗಿ ಭಾರತಕ್ಕೆ ಪ್ರಯಾಣಿಸಲಿದೆ. ಐಸಿಸಿಯಿಂದ ಒತ್ತಡವಿದ್ದ ಕಾರಣ ತಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಪಿಸಿಬಿ ಅಧಿಕಾರಿಗಳು ಹೇಳುತ್ತಾರೆ. ಅವರು ಐಸಿಸಿ ಟೂರ್ನಿಯನ್ನು ಬಹಿಷ್ಕರಿಸುವ ಬಗ್ಗೆ ಪದೇ ಪದೇ ಮಾತನಾಡಿದರೆ ಅದು ಪಾಕಿಸ್ತಾನ ಕ್ರಿಕೆಟ್ಗೆ ಹಾನಿ ಮಾಡುತ್ತದೆ," ಎಂದು ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ಅಭಿಪ್ರಾಯಪಟ್ಟರು.
2023ರ ಏಷ್ಯಾ ಕಪ್ಗೆ ಇನ್ನೂ ಸಾಕಷ್ಟು ಸಮಯವಿರುವುದರಿಂದ ಹಾಗೂ ಪಾಕಿಸ್ತಾನದ ಪ್ರಸ್ತುತ ಸ್ಥಿತಿಯಿಂದಾಗಿ ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ದಾನೀಶ್ ಕನೇರಿಯಾ ಅವರು ರಮೀಜ್ ರಾಜಾಗೆ ಸಲಹೆ ನೀಡಿದರು. ಇದೇ ವೇಳೆ ಅಂತಹ ಹೇಳಿಕೆಯು ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಾವಳಿಯನ್ನು ಬಹಿಷ್ಕರಿಸಲು ಕಾರಣವಾಗಬಹುದು ಎಂದಿದ್ದಾರೆ.
ರಮೀಜ್ ರಾಜಾ ಎಚ್ಚರಿಕೆಗೆ ಅನುರಾಗ್ ಠಾಕೂರ್ ತಿರುಗೇಟು
ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ, ಭಾರತದಲ್ಲಿ ನಡೆಯುವ 2023ರ ವಿಶ್ವಕಪ್ಗೆ ಪಾಕಿಸ್ತಾನ ಹೋಗುವುದಿಲ್ಲ ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರ ಎಚ್ಚರಿಕೆಗೆ ಕೇಂದ್ರ ಕ್ರೀಡಾ ಅನುರಾಗ್ ಠಾಕೂರ್ ಖಡಕ್ ತಿರುಗೇಟು ನೀಡಿದ್ದಾರೆ.
ರಮೀಜ್ ರಾಜಾ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾ ಸಚಿವರು, "ಸರಿಯಾದ ಸಮಯಕ್ಕಾಗಿ ಕಾಯಿರಿ, ಭಾರತ ಕ್ರೀಡಾ ಜಗತ್ತಿನಲ್ಲಿ ಪ್ರಮುಖ ಶಕ್ತಿಯಾಗಿದ್ದು, ಯಾವುದೇ ದೇಶವು ಭಾರತವನ್ನು ಕಡೆಗಣಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.