ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು ತೋರಿದ ಅತ್ಯದ್ಭುತ ಪ್ರದರ್ಶನದ ಬಳಿಕ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಇಂಜಮಾಮ್ ಉಲ್ ಹಕ್ ಟೀಮ್ ಇಂಡಿಯಾ ಹೊಸ ಪ್ರತಿಭಾವಂತ ಆಟಗಾರರನ್ನು ಉತ್ಪಾದಿಸುವ ಯಂತ್ರವನ್ನು ಇಟ್ಟುಕೊಂಡಿದೆ ಅಂತ ನನಗೆ ಅನಿಸುತ್ತದೆ ಎಂದು ಹೇಳಿದರು. ಪ್ರಸಿದ್ಧ್ ಕೃಷ್ಣ ಮತ್ತು ಕೃನಾಲ್ ಪಾಂಡ್ಯ ಅವರ ಆಟವನ್ನು ಇಂಜಮಾಮ್ ಪ್ರಶಂಸಿಸಿದರು. ಹಾಗೆಯೇ ಭಾರತದ ಯುವ ಆಟಗಾರರು ತೋರುತ್ತಿರುವ ಪ್ರದರ್ಶನವನ್ನು ಗಮನಿಸಿದರೆ ಈಗಾಗಲೇ ತಂಡದಲ್ಲಿರುವ ಹಿರಿಯ ಆಟಗಾರರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಇನ್ನೂ ಚೆನ್ನಾಗಿ ಆಟವಾಡಬೇಕು ಎಂದಿದ್ದಾರೆ.
ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಇಂಗ್ಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದವರೆಗೂ ನಾನು ಗಮನಿಸುತ್ತಾ ಬಂದಿದ್ದೇನೆ ಪ್ರತೀ ಪಂದ್ಯದಲ್ಲೂ ಹೊಸ ಯುವ ಆಟಗಾರನೊಬ್ಬ ತಂಡದ ಪರ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾನೆ. ಇದೀಗ ತಾನೇ ತಂಡವನ್ನು ಸೇರಿದ ಕಿರಿಯ ಆಟಗಾರರು ಈ ರೀತಿಯ ಪ್ರದರ್ಶನವನ್ನು ನೀಡುತ್ತಿರುವುದು ನಿಜಕ್ಕೂ ದೊಡ್ಡ ವಿಷಯ ಎಂದು ಇಂಜಮಾಮ್ ಉಲ್ ಹಕ್ ಭಾರತ ತಂಡವನ್ನು ಹಾಡಿ ಹೊಗಳಿದ್ದಾರೆ.