ಸ್ಯಾಮ್ಸನ್, ಧವನ್ ಡಕ್ ಔಟ್
ಭಾರತ-ಶ್ರೀಲಂಕಾ ಮೂರು ಪಂದ್ಯಗಳಲ್ಲಿ ಕೊನೆಯೆರಡು ಪಂದ್ಯಗಳ ವೇಳೆ ಟೀಮ್ ಇಂಡಿಯಾಕ್ಕೆ ಬ್ಯಾಟ್ಸ್ಮನ್ಗಳ ಅಗತ್ಯ ತುಂಬಾ ಇತ್ತು. ಯಾಕೆಂದರೆ ತಂಡದಲ್ಲಿ ಕೋವಿಡ್-19 ಪ್ರಕರಣ ಕಾಣಿಸಿಕೊಂಡಿದ್ದರಿಂದ ಪ್ರಮುಖ ಬ್ಯಾಟ್ಸ್ಮನ್ಗಳು ಮೆನ್ನೆಚ್ಚರಿಕೆಯಾಗಿ ಕ್ವಾರಂಟೈನ್ ಪಾಲಿಸುತ್ತಿದ್ದರಿಂದ ಶಿಖರ್ ಧವನ್, ಸಂಜು ಸ್ಯಾಮ್ಸನ್ ಮತ್ತು ಋತುರಾಜ್ ಗಾಯಕ್ವಾಡ್ ಹೆಗಲಿನ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು. ಕೊನೇ ಎರಡು ಪಂದ್ಯಗಳ ವೇಳೆ ತಂಡದಲ್ಲಿದ್ದು ಕೇವಲ 5 ಬ್ಯಾಟ್ಸ್ಮನ್ಗಳು. ಆದರೆ ಯಾರೂ ಇವರಲ್ಲಿ ಶ್ರೀಲಂಕಾ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಲಿಲ್ಲ. ಮುಖ್ಯವಾಗಿ ಕೊನೇ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ಸಂಜು ಸ್ಯಾಮ್ಸನ್ ಡಕ್ ಔಟ್ ಆದರೆ, ಋತುರಾಜ್ 14 ರನ್ ಬಾರಿಸಿದ್ದರು.
ಬೌಲರ್ಗಳೇ ಆಡಿದ್ದು
ಟಿ20ಐ ಸರಣಿ ವಿಜೇತರನ್ನು ನಿರ್ಧರಿಸಲು ನಿರ್ಣಾಯಕವೆನಿಸಿದ್ದ ಕೊನೇ ಟಿ20ಐ ಪಂದ್ಯದಲ್ಲಿ ಭಾರತೀಯ ತಂಡದಲ್ಲಿದ್ದ ಐದೂ ಬ್ಯಾಟ್ಸ್ಮನ್ಗಳು ನಿರಾಶಾದಾಯ ಪ್ರದರ್ಶನ ನೀಡಿದ್ದರು. ಆರಂಭಿಕರಾಗಿ ಬಂದಿದ್ದ ಋತುರಾಜ್ ಗಾಯಕ್ವಾಡ್ 14, ಶಿಖರ್ ಧವನ್ 0, ದೇವದತ್ ಪಡಿಕ್ಕಲ್ 9, ಸಂಜು ಸ್ಯಾಮ್ಸನ್ 0, ನಿತೀಶ್ ರಾಣಾ 6 ರನ್ ಬಾರಿಸಿದ್ದರು. ಇನ್ನುಳಿದ ರನ್ ಬಾರಿಸಿದ್ದೆಲ್ಲಾ ಬೌಲರ್ಗಳು. ಭುವನೇಶ್ವರ್ ಕುಮಾರ್ 16, ಕುಲದೀಪ್ ಯಾದವ್ ಅಜೇಯ 23 (28), ರಾಹುಲ್ ಚಾಹರ್ 5, ಚೇತನ್ ಸಕಾರಿಯಾ 5 ರನ್ ಬಾರಿಸಿದ್ದರು. ಭಾರತ 20 ಓವರ್ಗಳಲ್ಲಿ 8 ವಿಕೆಟ್ ಕಳೆದು 81 ರನ್ ಬಾರಿಸಿತ್ತು.
ಕಮ್ರನ್ ಅಕ್ಮಲ್ ಬೇಸರ
ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಬಗ್ಗೆ ಕಮ್ರನ್ ಅಕ್ಮಲ್ ಯೂಟ್ಯೂಬ್ ಚಾನೆಲ್ನ ಮೂಲಕ ಪ್ರತಿಕ್ರಿಯಿಸಿದ್ದಾರೆ. "ಸಂಜು ಸ್ಯಾಮ್ಸನ್ ಬಗ್ಗೆ ಬಹಳಷ್ಟು ನಿರೀಕ್ಷೆಗಳಿದ್ದವು. ಒತ್ತಡದ ಸಂದರ್ಭದಲ್ಲಿ ಅವರು ಭಾರತ ತಂಡವನ್ನು ಮೇಲೆತ್ತುತ್ತಾರೆ ಎಂದು ನಂಬಲಾಗಿತ್ತು. ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೂರು ಶತಕಗಳನ್ನು ಬಾರಿಸಿದ ಅನುಭವವಿದೆ. ಅಲ್ಲದೆ ದೇಶಿ ಕ್ರಿಕೆಟ್ನಲ್ಲೂ ಅವರು ಸಾಕಷ್ಟು ಅನುಭವ ಪಡೆದುಕೊಂಡಿದ್ದಾರೆ. ಆದರೆ ಅವರು ಐಪಿಎಲ್ನ ಆ ಶಾಟ್ಗಳ ಮೇಲೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗಮನ ಹರಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ಅವರಿಗೆ ಇದಕ್ಕಿಂತ ಉತ್ತಮ ಅವಕಾಶ ಇನ್ನು ಸಿಗಲಾರದು," ಎಂದು ಅಕ್ಮಲ್ ಹೇಳಿದ್ದಾರೆ.
ವನಿಂದು ಹಸರಂಗ ಮಾರಕ ಬೌಲಿಂಗ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 20 ಓವರ್ಗಳಲ್ಲಿ 8 ವಿಕೆಟ್ ಕಳೆದು 81 ರನ್ ಬಾರಿಸಿದರೆ ಗುರಿ ಬೆನ್ನಟ್ಟಿದ ಶ್ರೀಲಂಕಾ, ಅವಿಷ್ಕ ಫೆರ್ನಾಂಡೋ 12, ಮಿನೋದ್ ಭಾನುಕಾ 18, ವನಿಂದು ಹಸರಂಗ 14, ದನಂಜಯ ಡಿ ಸಿಲ್ವಾ 23 ರನ್ನೊಂದಿಗೆ 14.3ನೇ ಓವರ್ಗೆ 3 ವಿಕೆಟ್ ಕಳೆದು 82 ರನ್ ಬಾರಿಸಿತು. ಭಾರತದ ಇನ್ನಿಂಗ್ಸ್ ವೇಳೆ ಲಂಕಾ ಸ್ಪಿನ್ನರ್ ವನಿಂದು ಹಸರಂಗ ಕೇವಲ 9 ರನ್ ನೀಡಿ 4 ವಿಕೆಟ್ ಮುರಿದಿದ್ದರು. ಹಸರಂಗಗೆ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳು ಲಭಿಸಿದ್ದವು.