ಬಿಸಿಸಿಐನ ಹಿಂದೆ ಬೀಳಲ್ಲ
ಭಾರತದ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಸಿದ್ದವಿದೆ. ಆದರೆ ಬಿಸಿಸಿಐ ತೆಗೆದುಕೊಂಡ ನಿರ್ಧಾರದ ಕಾರಣಕ್ಕೆ ಬಿಸಿಸಿಐನ ಹಿಂದೆ ಬಿದ್ದು ಭವಿಷ್ಯದಲ್ಲಿ ಸರಣಿ ನಡೆಯುವಂತೆ ಒತ್ತಾಯಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಇಹ್ಸಾನ್ ಮನಿ ಹೇಳಿಕೆಯನ್ನು ನೀಡಿದ್ದಾರೆ.
2013ರಲ್ಲಿ ಕೊನೆಯ ಸರಣಿ
2013ರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಂಡಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡ ಅಂದು ಭಾರತ ಪ್ರವಾಸವನ್ನು ಕೈಗೊಂಡು 2 ಟಿ20 ಹಾಗೂ 3 ಏಕದಿನ ಸರಣಿಯಲ್ಲಿ ಪಾಲ್ಗೊಂಡಿತ್ತು. ಆದರೆ ಅದಾದ ಬಳಿಕ ಎರಡು ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಂಡಿಲ್ಲ.
ಐಸಿಸಿ ಟೂರ್ನಿಯಲ್ಲಿ ಮಾತ್ರ ಮುಖಾಮುಖಿ
ಹಾಗಿದ್ದರೂ ಈ ಎರಡು ತಂಡಗಳು ಐಸಿಸಿಯ ಮುಖ್ಯ ಟೂರ್ನಿಗಳಾದ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ನಲ್ಲಿ ಮುಖಾಮುಖಿಯಾಗುತ್ತಿದೆ. ಕೊನೆಯ ಬಾರಿಗೆ ಕಳೆದ ಏಕದಿನ ವಿಶ್ವಕಪ್ನಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆದ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿತ್ತು. ಇದರಲ್ಲಿ ಭಾರತ ಪಾಕಿಸ್ತಾನವನ್ನು 89 ರನ್ಗಳಿಂದ ಮಣಿಸಿತ್ತು.
ಸರಣಿ ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟ ವಿಚಾರ
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಿಸಿಬಿ ಅಧ್ಯಕ್ಷ ಇಹ್ಸಾನ್ ಮನಿ ಬಿಸಿಸಿಐನ ನಿಲುವನ್ನು ಪಡೆದುಕೊಂಡಿದ್ದು ಒಂದು ಸಂಗತಿಯನ್ನು ತಿಳಿಸಲು ಬಯಸುತ್ತೇನೆ. ನಾವು ಯಾವಾಗಲೂ ದ್ವಿಪಕ್ಷೀಯ ಸರಣಿಗೆ ಸಿದ್ದರಾಗಿದ್ದೇವೆ. ಆದರೆ ಅದಕ್ಕಾಗಿ ಅವರ ಹಿಂದೆ ಬೀಳಲಾರೆವು. ಯಾವಾಗ ಸರಣಿಯನ್ನು ಆಡಲು ಸಿದ್ದರಿದ್ದಾರೆ ಎಂಬುದು ತಿಳಿಸುವುದು ಅವರಿಗೆ ಬಿಟ್ಟ ವಿಚಾರ. ನಾವು ಸಿದ್ದರಾಗಿರುತ್ತೇವೆ ಎಂದಿದ್ದಾರೆ.
ವಾರದ ಹಿಂದೆ ಇಹ್ಸಾನ್ ಮನಿ ಹೇಳಿದ್ದೇನು?
ಇದೇ ಸಂದರ್ಭದಲ್ಲಿ ಮನಿ ಭವಿಷ್ಯದ ಸರಣಿಗಳನ್ನು ಯೋಜನೆ ರೂಪಿಸುವಾಗ ಭಾರತದೊಂದಿಗಿನ ದ್ವಿಪಕ್ಷೀಯ ಸರಣಿಯ ಸಾಧ್ಯತೆಗಳ ಬಗ್ಗೆ ಯೋಚನೆಗಳನ್ನು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಕಳೆದ ಒಂದು ವಾರದ ಹಿಂದೆಯಷ್ಟೇ ಇಹ್ಸಾನ್ ಮನಿ ಭಾರತ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಕ್ರೀಡೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಹೇಳಿಕೆಯನ್ನು ನೀಡಿದ್ದರು.