ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯವನ್ನ ಮುಂದೂಡುವಂತೆ ಜಾರ್ಖಂಡ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಶುಕ್ರವಾರ (ನವೆಂಬರ್ 19)ರಂದು ರಾಂಚಿಯ ಜೆಎಸ್ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್ನಲ್ಲಿ ನಡೆಯಲಿರುವ ಭಾರತ-ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯದಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ವೀಕ್ಷಣೆಗೆ ಅವಕಾಶ ನೀಡಿರುವುದನ್ನ ನಿಷೇಧಿಸುವಂತೆ ಅರ್ಜಿ ಹಾಕಲಾಗಿದೆ.
ಭಾರತದಲ್ಲಿ ಇತ್ತೀಚೆಗೆ ಕೋವಿಡ್-19 ಪರಿಸ್ಥಿತಿಯು ಸಾಕಷ್ಟು ಸ್ಥಿರವಾಗಿರುವುದರಿಂದ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸರ್ಕಾರಿ ಅಧಿಕಾರಿಗಳಿಂದ ಗ್ರೀನ್ ಸಿಗ್ನಲ್ ಪಡೆದ ನಂತರ ಸ್ಥಳಗಳಲ್ಲಿ ಸಂಪೂರ್ಣ ಆಕ್ಯುಪೆನ್ಸಿಗೆ ಅವಕಾಶ ನೀಡಿತು. ಮೊದಲ ಟಿ20 ಪಂದ್ಯದಲ್ಲಿ ಜೈಪುರದಲ್ಲಿ ಪೂರ್ಣ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ಸ್ಟೇಡಿಯಂನಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.
ಕೋವಿಡ್-19 ಸಾಂಕ್ರಾಮಿಕದ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಸ್ಟೇಡಿಯಂನಲ್ಲಿ ಸಂಪೂರ್ಣ ಸೀಟುಗಳಲ್ಲಿ ಪ್ರೇಕ್ಷಕರು ಕುಳಿತುಕೊಂಡು ಪಂದ್ಯ ವೀಕ್ಷಿಸಿದರು. ಆದ್ರೆ ಎರಡನೇ ಪಂದ್ಯದಲ್ಲಿ ಪೂರ್ಣ ಜನರಿಗೆ ಅವಕಾಶ ನೀಡಬಾರದು ಎಂದು ವಕೀಲ ಧೀರಜ್ ಕುಮಾರ್ ಜಾರ್ಖಂಡ್ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪಂದ್ಯವನ್ನು ಮುಂದೂಡುವಂತೆ ಅಥವಾ ಕ್ರೀಡಾಂಗಣದ ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವಂತೆ ಕರೆ ನೀಡಿದ್ದಾರೆ.
ಕೋವಿಡ್-19 ಪರಿಸ್ಥಿತಿಯ ನಡುವೆ 100 ಪ್ರತಿಶತ ಸಾಮರ್ಥ್ಯದೊಂದಿಗೆ ಆಟಗಳನ್ನು ನಡೆಸಲು ಬಿಸಿಸಿಐಗೆ ನೀಡಿದ ಅನುಮತಿಯ ಬಗ್ಗೆ ಕುಮಾರ್ ಪ್ರಶ್ನೆಗಳನ್ನು ಎತ್ತಿದ್ದಾರೆ. ರಾಜ್ಯದ ಎಲ್ಲಾ ದೇವಾಲಯಗಳು, ನ್ಯಾಯಾಲಯಗಳು ಮತ್ತು ಇತರ ಕಚೇರಿಗಳು 50% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂಬ ಅಂಶವನ್ನು ಅವರು ಗಮನಸೆಳೆದರು. ಈ ಎಲ್ಲಾ ಅಂಶಗಳನ್ನು ಎತ್ತಿಹಿಡಿದ ಅವರು, 100% ಸಾಮರ್ಥ್ಯದ ಸ್ಟ್ಯಾಂಡ್ಗಳ ಬಳಕೆಯನ್ನು ನಿಷೇಧಿಸುವಂತೆ ನ್ಯಾಯಾಲಯವನ್ನು ಕೋರಿದರು.
ಈ ಪಂದ್ಯಕ್ಕಾಗಿ ಜಾರ್ಖಂಡ್ ಸರ್ಕಾರವು ಆರಂಭದಲ್ಲಿ ಕೇವಲ 50% ಹಾಜರಾತಿಗೆ ಕ್ರೀಡಾಂಗಣದಲ್ಲಿ ಅನುಮತಿ ನೀಡಿತ್ತು ಎಂಬುದನ್ನು ಗಮನಿಸಬೇಕು. ಆದಾಗ್ಯೂ, ಅಂತಿಮವಾಗಿ ನಿರ್ಧಾರವನ್ನು ರದ್ದುಗೊಳಿಸಲಾಯಿತು ಮತ್ತು ಸ್ಥಳದಲ್ಲಿ ಎಲ್ಲಾ ಆಸನಗಳನ್ನು ಕಾಯ್ದಿರಿಸಲು ಲಭ್ಯವಿದೆ ಎಂದು ಘೋಷಿಸಲಾಯಿತು. ಹೀಗಾಗಿ ನಾಳಿನ ಪಂದ್ಯಕ್ಕೂ ಮೊದಲು ಏನಾಗಬಹುದು ಎಂದು ಕಾದು ನೋಡಬೇಕು.
ಸರಣಿಯ ಬಗ್ಗೆ ಹೇಳುವುದಾದರೆ, ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಆರಂಭಿಕ ಪಂದ್ಯವನ್ನು ಟೀಂ ಇಂಡಿಯಾ ಐದು ವಿಕೆಟ್ಗಳಿಂದ ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 165 ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಮುಂಬೈ ಇಂಡಿಯನ್ಸ್ ಜೋಡಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತದ ಚೇಸ್ ಅನ್ನು ಸುಲಭವಾಗಿಸಿದ್ರು. ಆದರೆ, ಏಕಾಏಕಿ ವಿಕೆಟ್ಗಳ ಪತನವು ಪಂದ್ಯವನ್ನು ಕೊನೆಯ ಓವರ್ಗೆ ಕೊಂಡೊಯ್ಯಿತು. ಆತಿಥೇಯ ತಂಡ ಕೇವಲ ಒಂದೆರಡು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗೆರೆ ದಾಟಿತು.