ನವದೆಹಲಿ: ಕಾತರದಿಂದ ಕಾಯುತ್ತಿರುವ ದೇಸಿ ಕ್ರಿಕೆಟ್ ಮುಂಬರುವ ಜನವರಿ 1ರಿಂದ ಆರಂಭಿಸಲು ಯೋಚಿಸುತ್ತಿದ್ದೇವೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಭಾನುವಾರ ಈ ಬಗ್ಗೆ ಸಭೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾನುವಾರ ಸಂಜೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮೀಟಿಂಗ್ ನಡೆದಿದೆ. ಈ ವೇಳೆ ದೇಸಿ ಕ್ರಿಕೆಟ್ಗೆ ಸಂಬಂಧಿಸಿ ಒಂದಿಷ್ಟು ಸಮಯ ಚರ್ಚೆ ನಡೆದಿದೆ. ಕೊರೊನಾ ವೈರಸ್ ಭೀತಿ ಕಾಡಿದ್ದರಿಂದ ಈ ವರ್ಷದ ದೇಸಿ ಕ್ರಿಕೆಟ್ ಟೂರ್ನಿ ನಡೆಸಲು ಸಾಧ್ಯವಾಗಿರಲಿಲ್ಲ.
'ನಾವು ದೇಸಿ ಕ್ರಿಕೆಟ್ಗೆ ಸಂಬಂಧಿಸಿ ಭಾನುವಾರ ಸುದೀರ್ಘ ಸಭೆಯಲ್ಲಿ ಚರ್ಚಿಸಿದ್ದೇವೆ. 2021ರ ಜನವರಿ 1ರಿಂದ ದೇಸಿ ಕ್ರಿಕೆಟ್ ಟೂರ್ನಿಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ,' ಎಂದು ದುಬೈನಲ್ಲಿದ್ದ ಸೌರವ್ ಗಂಗೂಲಿ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.
'ನಾವು ಬಹುತೇಕ ಸಂಪೂರ್ಣ ರಣಜಿ ಮ್ಯಾಚ್ (ರೆಡ್ಬಾಲ್) ನೋಡಲಿದ್ದೇವೆ. ಯಾಕೆಂದರೆ ಎಲ್ಲಾ ಟೂರ್ನಿಗಳನ್ನೂ ನಡೆಸಲು ಸಾಧ್ಯವಾಗದಿರುವುದರಿಂದ ರಣಜಿಯನ್ನಾದರೂ ಸಂಪೂರ್ಣ ನಡೆಸಲು ಯೋಚಿಸಿದ್ದೇವೆ,' ಎಂದು ಗಂಗೂಲಿ ಹೇಳಿದ್ದಾರೆ.