ಮುಂಬೈ, ಆಗಸ್ಟ್ 06: ನೂತನ ಕೇಂದ್ರಾಡಳಿತ ಪ್ರದೇಶ ಲಡಾಖ್ನಿಂದ ಹೊರಬರುವ ಉದಯೋನ್ಮುಖ ಕ್ರಿಕೆಟಿಗರು ಸದ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪ್ರತಿನಿಧಿಸಬಹುದಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ನ ಆಡಳಿತ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಅಭಯಹಸ್ತ ನೀಡಿದ್ದಾರೆ.
ಭಾರತ ಸರಕಾರ, ಇದೇ ಸೋಮವಾರ ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಆಗಿ ಎರಡು ಭಾಗವನ್ನಾಗಿಸುವ ಮೂಲಕ ನೂತನ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಈ ಸಂದರ್ಭದಲ್ಲಿ ಸದ್ಯಕ್ಕೆ ಪ್ರತ್ಯೇಕ ಕ್ರಿಕೆಟ್ ಸಂಸ್ಥೆ ಸಾಧ್ಯವಿಲ್ಲದ ಕಾರಣ ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆ ಅಡಿಯಲ್ಲೇ ಲಡಾಖ್ ಕ್ರಿಕೆಟಿಗರು ದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.
ದುಲೀಪ್ ಟ್ರೋಫಿ 2019ರ ತಂಡಗಳು ಪ್ರಕಟ: ಇಂಡಿಯಾ ಬ್ಲೂಗೆ ಗಿಲ್ ನಾಯಕ
"ಲಡಾಖ್ಗೆ ಪ್ರತ್ಯೇಕ ಕ್ರಿಕೆಟ್ ಸಂಸ್ಥೆ ಸ್ಥಾಪಿಸುವ ಕಡೆಗೆ ನಾವು ಸದ್ಯಕ್ಕೆ ಆಲೋಚಿಸಿಲ್ಲ. ಆ ಭಾಗದ ಕ್ರಿಕೆಟಿಗರು ಜಮ್ಮು ಮತ್ತು ಕಾಶ್ಮೀರ ತಂಡದ ಪರ ದೇಶಿ ಟೂರ್ನಿಗಳಲ್ಲಿ ಆಡಲು ಅರ್ಹರು," ಎಂದು ವಿನೋದ್ ರಾಯ್ ಪಿಟಿಐಗೆ ತಿಳಿಸಿದ್ದಾರೆ.
ಅಂದಹಾಗೆ ಜಮ್ಮು ಮತ್ತು ಕಾಶ್ಮೀರ ತಂಡದಲ್ಲಿ ಲಡಾಖ್ನ ಯಾವುದೇ ಆಟಗಾರ ಈವರೆಗೆ ಕಾಣಿಸಿಕೊಂಡಿಲ್ಲ. 2019-20ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಮುಂಬರುವ ಡಿಸೆಂಬರ್ನಲ್ಲಿ ಆರಂಭವಾಗಲಿದೆ.
ಕಾಶ್ಮೀರ ವಿಚಾರದಲ್ಲಿ ಕೆಣಕಿದ ಅಫ್ರಿದಿಗೆ ಗೌತಮ್ ಗಂಭೀರ್ ಖಡಕ್ ಉತ್ತರ
"ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ರೀತಿಯಲ್ಲೇ ಇಲ್ಲೂ ನಡೆಸಿಕೊಡಲಿದ್ದೇವೆ. ಚಂಡೀಗಢದ ಆಟಗಾರರು ದೇಶಿ ಟೂರ್ನಿಗಳ ಸಲುವಾಗಿ ಪಂಜಾಬ್ ಅಥವಾ ಹರಿಯಾಣ ತಂಡಗಳ ಪರ ಆಡುತ್ತಾರೆ. ಲಡಾಖ್ ವಿಚಾರದಲ್ಲೂ ಹಾಗೆಯೇ ಆಗಲಿದೆ," ಎಂದು ರಾಯ್ ಹೇಳಿದ್ದಾರೆ.
ಇನ್ನು ಜಮ್ಮು-ಕಾಶ್ಮೀರದಲ್ಲಿ ಕ್ರಿಕೆಟ್ ಆಯೋಜಿಸುವ ಕುರಿತಾಗಿ ಮಾತನಾಡಿದ ರಾಯ್, "ಕಳೆದ ಬಾರಿಯಂತೆ ಈ ಬಾರಿಯೂ ಜಮ್ಮು-ಕಾಶ್ಮೀರ ತಂಡ ತನ್ನೆಲ್ಲಾ ತವರು ಪಂದ್ಯಗಳನ್ನು ಶ್ರೀನಗರದಲ್ಲೇ ಆಡುತ್ತದೆ ಎಂಬ ವಿಶ್ವಾಸವಿದೆ. ತಂಡಕ್ಕೆ ಬದಲಿ ತವರು ಅಂಗಣ ನಿಯೋಜಿಸುವ ಕಡೆಗೆ ಚರ್ಚೆಯಾಗಿಲ್ಲ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.