ಹೊಸ ದಿಲ್ಲಿ, ಏಪ್ರಿಲ್ 18: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ರಾಹುಲ್ ಜೊಹ್ರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸಿಇಒ ಹುದ್ದೆಯಲ್ಲಿ ಮುಂದುವರಿಯುತ್ತಿರುವುದನ್ನು ಪ್ರಶ್ನಿಸಿ ಮಹಿಳಾ ಪರ ಹೋರಾಟಗಾರ್ತಿ ಒಬ್ಬರು ಸುಪ್ರೀಂ ಕೋರ್ಟ್ನಲ್ಲಿ ಗುರುವಾರ ಮೇಲ್ಮನವಿ ಸಲ್ಲಿಸಿದ್ದಾರೆ.
ರಾಹುಲ್ ಜೊಹ್ರಿ ಅವರ ಪ್ರಕರಣವನ್ನು ಬಿಸಿಸಿಐನ ಒಂಬುಡ್ಸ್ಮನ್ (ನಿವೃತ್ತ ನ್ಯಾಯಮೂರ್ತಿ) ಡಿ.ಕೆ ಜೈನ್ ಅವರು ಮರು ಪರಿಶೀಲಿಸಬೇಕು ಎಂದು ಸುಪ್ರೀಂಗೆ ಸಲ್ಲಿಸಲಾಗಿರುವ ಮೇಲ್ಮನವಿಯಲ್ಲಿ ಮಹಿಳಾ ಪರ ಹೋರಾಟಗಾರ್ತಿ ರಷ್ಮಿನಾಯರ್ ಮನವಿ ಮಾಡಿದ್ದಾರೆ.
"ಜೊಹ್ರಿ ತಾವು ಕಾರ್ಯನಿರ್ವಹಿಸಿದ ಎಲ್ಲಾ ಸಂಸ್ಥೆಗಳಲ್ಲೂ ವೈಭವಯುತ ಹಿನ್ನೆಲೆ ಹೊಂದಿದ್ದಾರೆ. ತಮ್ಮ ವಿರುದ್ಧ ದಾಖಲಾದ ಎಲ್ಲಾ ಲೈಂಗಿಕ ಕಿರುಕುಳಗಳ ಆರೋಪಗಳಿಂದ ಹೆದರಿಸುವ ಮೂಲಕ, ಹಣ ಕೊಟ್ಟು ಅಥವಾ ಇನ್ನಿತರ ಒತ್ತಡಗಳನ್ನು ಹೇರಿ ಪಾರಾಗಿದ್ದಾರೆ,'' ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ ನೂತನವಾಗಿ ನೇಮಕಗೊಂಡಿರುವ ಬಿಸಿಸಿಐನ ಒಂಬುಡ್ಸ್ಮನ್ ಪ್ರಕರಣವನ್ನು ಈವರೆಗೆ ವಿಚಾರಣೆಗೆ ಒಳಪಡಿಸದೇ ಇರಲು ಕಾರಣವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
"ಮೂವರು ಮಹಿಳೆಯರು ಜೊಹ್ರಿ ಅವರಿಂದ ತಮಗಾದ ಅನ್ಯಾಯದ ವಿರುದ್ಧ ಹೋರಾಡಲು ಮುಂದಾಗಿದ್ದರು. ಆದರೆ, ಇದೀಗ ಮೂವರಲ್ಲಿ ಒಬ್ಬರು ಉತ್ತರ ನೀಡುತ್ತಿಲ್ಲ ಮತ್ತಿಬ್ಬರು ತಮ್ಮ ನಿಲುವು ಬದಲಾಯಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಜೈನ್ ಅವರು ಮರು ಪರಿಶೀಲನೆ ಮಾಡಬೇಕು,'' ಎಂದು ನಾಯರ್ ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.