ಈ ಬಾರಿಯ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ಹಿನ್ನೆಲೆ ಇದೀಗ ಕ್ರೀಡಾಭಿಮಾನಿಗಳ ಚಿತ್ತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಮುಂಬರುವ ಟೂರ್ನಿಗಳತ್ತ ಇದೆ. ಬಿಸಿಸಿಐ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೆ ಬೃಹತ್ ತಂಡವನ್ನು ಪ್ರಕಟಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಇಂಗ್ಲೆಂಡ್ ನೆಲದಲ್ಲಿಯೇ ನಡೆಯಲಿದೆ.
ಇದರ ನಡುವೆ ಜುಲೈ ತಿಂಗಳಲ್ಲಿ ಶ್ರೀಲಂಕಾದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಸೀಮಿತ ಓವರ್ಗಳ ಸರಣಿಯನ್ನಾಡಲಿದ್ದು ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿರುವ ಟೀಮ್ ಇಂಡಿಯಾ ತಂಡಕ್ಕೆ ಆಯ್ಕೆಗೊಂಡಿರುವ ಆಟಗಾರರು ಶ್ರೀಲಂಕಾ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಬಿಸಿಸಿಐ ಪ್ರತ್ಯೇಕ ಟೀಮ್ ಇಂಡಿಯಾ ತಂಡವನ್ನು ರಚಿಸಿ ಶ್ರೀಲಂಕಾಗೆ ಕಳುಹಿಸಲಿದೆ. ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿರುವ ಸ್ಟಾರ್ ಆಟಗಾರರು ಹಾಗೂ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಕೆಲ ಆಟಗಾರರನ್ನೊಳಗೊಂಡ ತಂಡವನ್ನು ಬಿಸಿಸಿಐ ರಚಿಸಲಿದ್ದು ಜುಲೈ 13, 16 ಹಾಗೂ 19ರಂದು 3 ಏಕದಿನ ಪಂದ್ಯಗಳು ಮತ್ತು ಜುಲೈ 22, 24 ಹಾಗೂ 27ರಂದು 3 ಟಿ ಟ್ವೆಂಟಿ ಪಂದ್ಯಗಳು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ.
ಇನ್ನು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ತಂಡವನ್ನು ಯಾವ ಆಟಗಾರ ಮುನ್ನಡೆಸಬೇಕು ಎಂಬುದರ ಚರ್ಚೆ ಇದೀಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಝಾ 3 ಆಟಗಾರರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೆಸರಿಸಿದ್ದಾರೆ. ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಇಬ್ಬರಿಗೂ ಸಹ ನಾಯಕತ್ವದಲ್ಲಿ ಉತ್ತಮ ಅನುಭವವಿದ್ದು ಈ ಇಬ್ಬರಲ್ಲಿ ಒಬ್ಬರು ಟೀಮ್ ಇಂಡಿಯಾವನ್ನು ಮುನ್ನಡೆಸಿದರೆ ಉತ್ತಮ ಎಂದು ಓಝಾ ಹೇಳಿದ್ದಾರೆ. ಆದರೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಐಯ್ಯರ್ ಇಬ್ಬರೂ ಸಹ ಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಕಾರಣ ಒಂದುವೇಳೆ ಶ್ರೀಲಂಕಾ ಸರಣಿಗೆ ಅಲಭ್ಯರಾದರೆ ನಾಯಕತ್ವವನ್ನು ಶಿಖರ್ ಧವನ್ ಅವರಿಗೆ ನೀಡಬೇಕೆಂದು ಪ್ರಗ್ಯಾನ್ ಓಝಾ ಅಭಿಪ್ರಾಯಪಟ್ಟಿದ್ದಾರೆ.