ಕೊಲಂಬೋ ಜುಲೈ 19: ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಯುವ ಆಟಗಾರರಾದ ಪೃಥ್ವಿ ಶಾ, ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಹಾಗೂ ನಾಯಕ ಶಿಖರ್ ಧವನ್ ತಾಳ್ಮೆಯ ಆಟದಿಂದಾಗಿ ಭಾರತ ಸುಲಭವಾಗಿ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಈ ಗೆಲುವಿನ ಬಳಿಕ ಭಾರತೀಯ ತಂಡದ ನಾಯಕ ಶಿಖರ್ ಧವನ್ ಪ್ರತಿಕ್ರಿಯಿಸಿದರು. ಭಾರತ ತಂಡದ ಯುವ ಆಟಗಾರರಾದ ಪೃಥ್ವಿ ಶಾ ಹಾಗೂ ಇಶಾನ್ ಕಿಶನ್ ಈ ಪಂದ್ಯವನ್ನು ಮೊದಲ 15 ಓವರ್ಗಳಲ್ಲಿಯೇ ಮುಗಿಸಿದ್ದರು ಎಂದು ಶಿಖರ್ ಧವನ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ನೀಡಿದ್ದ 263 ರನ್ಗಳ ಗುರಿಯನ್ನು ಭಾರತ ಇನ್ನೂ 80 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು.
"ಎಲ್ಲವೂ ನಮ್ಮ ಹುಡುಗರಿಂದ ಸಾಧ್ಯವಾಯಿತು. ಹೆಚ್ಚಿನ ಆಟಗಾರರು ಈ ಮೊದಲು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರೆಲ್ಲಾ ತುಂಬಾ ಪ್ರಬುದ್ಧರು ಹಾಗೂ ಆಕ್ರಮಣಕಾರಿ ಆಟಗಾರರು. ಇಂದು ಅವರು ಆಡಿದ ರೀತಿ ಅದ್ಭುತವಾಗಿದೆ. ಅವರ ಪ್ರಯತ್ನಕ್ಕೆ ನಾನು ತುಂಬಾ ಸಂತೋಷಪಟ್ಟಿದ್ದೇನೆ" ಎಂದು ಶಿಖರ್ ಧವನ್ ಪಂದ್ಯದ ಮುಕ್ತಾಯದ ಬಳಿಕ ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದು ತಿದಿಯಲ್ಲಿ ನಿಂದು ಯುವ ಆಟಗಾರರ ಆಟವನ್ನು ಆನಂದಿಸಿರುವುದಾಗಿಯೂ ಈ ಸಂದರ್ಭದಲ್ಲಿ ಶಿಖರ್ ಧವನ್ ಹೇಳಿಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ನಿಗದಿತ 50 ಓವರ್ಗಳಲ್ಲಿ 262 ರನ್ಗಳನ್ನು ಗಳಿಸಿತ್ತು. ವೇಗಿ ದೀಪಕ್ ಚಾಹರ್ ಸ್ಪಿನ್ನರ್ಗಳಾದ ಯುಜುವೇಂದ್ರ ಚಾಹಲ್ ಹಾಗೂ ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದ್ದರು. ಶ್ರೀಲಂಕಾ ತಂಡ ನೀಡಿದ್ದ ಈ ಗುರಿಯನ್ನು ಭಾರತ ತಂಡ ಕೇವಲ 36.4 ಓವರ್ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು.
"ಪಿಚ್ ಸ್ವಲ್ಪ ಮಟ್ಟಿಗೆ ತಿರುವು ಪಡೆಯುವುದು ಗಮನಿಸಿದ್ದೆವು. 10ನೇ ಓವರ್ ನಂತರ ಅವರು ಪಂದ್ಯವನ್ನು ನಮ್ಮತ್ತ ತಿರುಗಿಸಿದರು. ವಿಕೆಟ್ ಪಡೆಯುತ್ತಾ ಮುನ್ನಗ್ಗಿದರು. ಮೂವರು ಸ್ಪಿನ್ನರ್ಗಳು ಕೂಡ ಅದ್ಭುತವಾದ ಪ್ರದರ್ಶನ ನೀಡಿದ್ದು ಬಳಿಕ ವೇಗಿಗಳು ಕೂಡ ಉತ್ತಮ ಕೊಡುಗೆ ನೀಡಿದರು" ಎಂದು ಶಿಖರ್ ಧವನ್ ಹೇಳಿದರು.