ನವದೆಹಲಿ, ಆಗಸ್ಟ್ 22: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಯುವ ಪ್ರತಿಭೆಗಳಾದ ಪೃಥ್ವಿ ಶಾ ಮತ್ತು ಹನುಮ ವಿಹಾರಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಸತತ ವೈಫಲ್ಯ ಅನುಭವಿಸುತ್ತಿರುವ ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಮುರಳಿ ವಿಜಯ್ ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಟ್ರೆಂಟ್ ಬ್ರಿಡ್ಜ್ ಟೆಸ್ಟ್: ಆಂಗ್ಲರ ವಿರುದ್ಧ ಭಾರತಕ್ಕೆ ಒಲಿದ ವಿಜಯಲಕ್ಷ್ಮಿ
ಸೌಥಾಂಪ್ಟನ್ ಮತ್ತು ಓವಲ್ಗಳಲ್ಲಿ ನಡೆಯಲಿರುವ ನಾಲ್ಕು ಮತ್ತು ಐದನೇ ಪಂದ್ಯಗಳಿಗೆ ತಂಡದಲ್ಲಿ ಬದಲಾವಣೆ ಮಾಡಿರುವುದಾಗಿ ಬಿಸಿಸಿಐ ಬುಧವಾರ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆ ತಿಳಿಸಿದೆ.
ವಿಜಯ್ ಮತ್ತು ಕುಲದೀಪ್ ಇಬ್ಬರೂ ನ್ಯಾಟಿಂಗ್ಹ್ಯಾಮ್ ಟೆಸ್ಟ್ನಲ್ಲಿ ಆಡಿರಲಿಲ್ಲ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಏಳು ಶತಕ ಮತ್ತು ಐದು ಅರ್ಧಶತಕ ಗಳಿಸಿರುವ 18 ವರ್ಷದ ಪೃಥ್ವಿ ಶಾ 56.72ರ ಸರಾಸರಿ ಹೊಂದಿದ್ದಾರೆ. ಆರಂಭಿಕ ಆಟಗಾರನಾಗಿ ಅವರು ಇತ್ತೀಚೆಗೆ ಭಾರತ ಎ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.
ತಂಡದ ಗೆಲುವನ್ನು ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ ಕೊಹ್ಲಿ
ವೆಸ್ಟ್ ಇಂಡೀಸ್ ಎ ವಿರುದ್ಧ 188, ಇಂಗ್ಲೆಂಡ್ ಲಯನ್ಸ್ ವಿರುದ್ಧ 62 ಮತ್ತು ದಕ್ಷಿಣ ಆಫ್ರಿಕಾ ಎ ವಿರುದ್ಧ 136 ರನ್ ಗಳಿಸಿದ್ದರು. ಮಹಾರಾಷ್ಟ್ರದ ಥಾಣೆಯವರಾದ ಪೃಥ್ವಿ, ಈ ಬಾರಿಯ ವಿಶ್ವಕಪ್ ಗೆದ್ದ ಅಂಡರ್ 19 ತಂಡದ ನಾಯಕರಾಗಿದ್ದರು.
ಆಂಧ್ರಪ್ರದೇಶದ 24 ವರ್ಷದ ಹನುಮ ವಿಹಾರಿ ಭಾರತ ಎ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಉತ್ತಮ ಫಾರ್ಮ್ನಲ್ಲಿರುವ ವಿಹಾರಿ, ಇತ್ತೀಚೆಗೆ ದಕ್ಷಿಣ ಆಫ್ರಿಕಾ ಎ ವಿರುದ್ಧ 148 ರನ್ ಗಳಿಸಿದ್ದರು.
ಲಾರ್ಡ್ಸ್ ಪಂದ್ಯದ ಬಳಿಕ ವಿಜಯ್ ಅವರನ್ನು ಕೈಬಿಟ್ಟ ನಂತರ ಪೃಥ್ವಿ ಶಾ ಆಯ್ಕೆಯು ಬ್ಯಾಟಿಂಗ್ ಲೈನ್ಅಪ್ನಲ್ಲಿನ ಬದಲಾವಣೆಯನ್ನು ಸೂಚಿಸಿದೆ. 2007ರಲ್ಲಿ ವೇಗಿ ಇಶಾಂತ್ ಶರ್ಮಾ ಪಾದಾರ್ಪಣೆ ಮಾಡಿದ ಬಳಿಕ ಇದುವರೆಗೂ ಶಿಖರ್ ಧವನ್, ಮುರಳಿ ವಿಜಯ್ ಮತ್ತು ಕೆ.ಎಲ್ ರಾಹುಲ್ ಮಾತ್ರ ಪಾದಾರ್ಪಣೆ ಮಾಡಿದ ಆರಂಭಿಕ ಆಟಗಾರರಾಗಿದ್ದರು.
ಆದರೆ, ಈ ಇಬ್ಬರೂ ಹೊಸ ಆಟಗಾರರಿಗೆ ಸೌಥಾಂಪ್ಟನ್ ಟೆಸ್ಟ್ನಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ನ್ಯಾಟಿಂಗ್ಹ್ಯಾಮ್ನಲ್ಲಿ ಇಬ್ಬರೂ ಆರಂಭಿಕರು ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದರು. ಕೆಳಕ್ರಮಾಂಕದಲ್ಲಿಯೂ ಉತ್ತಮ ಆಟ ದೊರೆತಿರುವುದರಿಂದ ಪಾದಾರ್ಪಣೆಯ ಅವಕಾಶ ಸಿಗುವ ಸಂಭವ ಇಲ್ಲ.
ಕೊನೆಯ ಎರಡು ಟೆಸ್ಟ್ಗಳಿಗೆ ತಂಡ ಹೀಗಿದೆ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ಕರುಣ್ ನಾಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್.