ಮುಂಬೈ, ಫೆಬ್ರವರಿ 17: ದೇಶಿ ಕ್ರಿಕೆಟ್ ನ ಪ್ರಮುಖ ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೆಣಸಲಿರುವ ಮುಂಬೈ ತಂಡಕ್ಕೆ ಯುವ ಪ್ರತಿಭಾವಂತ ಆಟಗಾರ ಪೃಥ್ವಿ ಶಾ ಬೆಂಬಲ ಸಿಕ್ಕಿದೆ. ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿದ್ದ ಪೃಥ್ವಿ ಶಾ ಅವರು ಅಭ್ಯಾಸ ಪಂದ್ಯದ ವೇಳೆ ಕಾಲಿಗೆ ಗಾಯಗೊಂಡು ಭಾರತಕ್ಕೆ ಮರಳಿದ್ದರು.
ಮುಂಬರುವ ಮುಷ್ತಾಕ್ ಅಲಿ ಟ್ರೋಫಿ ಆಡಲಿರುವ 15 ಸದಸ್ಯರ ತಂಡವನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಪ್ರಕಟಿಸಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಪ್ರಕಟಿಸಿರುವ ತಂಡವು ಇಂದೋರ್ ನಲ್ಲಿ ಫೆಬ್ರವರಿ 21 ರಿಂದ ಆರಂಭಗೊಳ್ಳಲಿರುವ ಟಿ20 ಟೂರ್ನಮೆಂಟ್ ನಲ್ಲಿ ಆಡಲಿದೆ.
ವೆಸ್ಟ್ ಇಂಡೀಸ್ ವಿರುದ್ಧ 'ಸರಣಿ ಶ್ರೇಷ್ಠ' ಪೃಥ್ವಿ ಮುರಿದ ದಾಖಲೆಗಳು
ಇತ್ತೀಚೆಗೆ ಮುಕ್ತಾಯಗೊಂಡ ರಣಜಿ ಟ್ರೋಫಿಯಲ್ಲಿ ವೈಫಲ್ಯ ಕಂಡ ಮುಂಬೈ ತಂಡವು ಏಕದಿನ ಟೂರ್ನಮೆಂಟ್ ವಿಜಯ್ ಹಜಾರೆ ಟ್ರೋಫಿ ಗೆದ್ದಿತ್ತು. ಹಿರಿಯ ಆಟಗಾರರಾದ ಶ್ರೇಯಸ್ ಅಯ್ಯರ್, ಸಿದ್ದೇಶ್ ಲಾಡ್, ಸೂರ್ಯಕುಮಾರ್ ಯಾದವ್ , ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆದಿತ್ಯ ತಾರೆ, ವೇಗಿ ಧವಳ್ ಕುಲಕರ್ಣಿ ತಂಡದಲ್ಲಿದ್ದಾರೆ.
ಮುಂಬೈ ತಂಡ : ಅಜಿಂಕ್ಯ ರಹಾನೆ(ನಾಯಕ), ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಧವಳ್ ಕುಲಕರ್ಣಿ, ಸಿದ್ದೇಶ್ ಲಾಡ್, ಅದಿತ್ಯ ತಾರೆ, ಸೂರ್ಯ ಕುಮಾರ್ ಯಾದವ್, ಆಕಾಶ್ ಪಾರ್ಕರ್, ಏಕನಾತ್ ಕೇರ್ಕರ್, ಧುರ್ಮಿಕ್ ಮತ್ಕಾರ್, ಶಾಮ್ಸ್ ಮುಲಾನಿ, ಶುಭಂ ರಂಜಾನೆ, ತುಷಾರ್ ದೇಶಪಾಂಡೆ ಹಾಗೂ ರೊಯ್ಸ್ಟನ್ ಡಿಯಾಸ್.