ಪಂಜಾಬ್ ಹೊರಗಿಟ್ಟಿದ್ದೇಕೆ?
ಕೊರೊನಾವೈರಸ್ ಕಾರಣದಿಂದಾಗಿ 2020ರ ಐಪಿಎಲ್ ಸೀಸನ್ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದಿತ್ತು. ಭಾರತದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಿದ್ದರಿಂದ ಆರಂಭದಲ್ಲಿ ಮುಂಬೈ ತಾಣವನ್ನು ಐಪಿಎಲ್ ಪಟ್ಟಿಯಿಂದ ಹೊರಗಿಡಲಾಗಿತ್ತು. ಮುಂಬೈನಲ್ಲಿ ಪ್ರತೀದಿನ ಸುಮಾರು 9,000 ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಆದರೂ ಮುಂಬೈನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಅಂತಿಮವಾಗಿ ನಿರ್ಧಾರ ತಾಳಿತ್ತು. ಆದರೆ ಪಂಜಾಬ್ನಲ್ಲಿ ಈ ಬಾರಿ ಪಂದ್ಯಗಳು ನಡೆಯುತ್ತಿಲ್ಲ. ಹೀಗಾಗಿ ಪಂಜಾಬ್ನಿಂದ ಬಿಸಿಸಿಐ ನಿಲುವಿನ ಬಗ್ಗೆ ಅಸಮಾಧಾನ ಕೇಳಿ ಬಂದಿದೆ.
ಬಿಸಿಸಿಐಗೆ ಸಿಎಂ ಪತ್ರ
ಐಪಿಎಲ್ ತಾಣಗಳಿಂದ ಪಂಜಾಬ್ ಹೊರಗಿಟ್ಟಿದ್ದಕ್ಕೆ ಪ್ರಶ್ನಿಸಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಿಸಿಸಿಐಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಅಮರೀಂದರ್, 'ನಾನು ಅವರಿಗೆ (ಬಿಸಿಸಿಐ) ಪತ್ರ ಬರೆದಿದ್ದೇನೆ. ಪ್ರತಿದಿನ 9,000 ಪ್ರಕರಣಗಳು ದಾಖಲಾಗುತ್ತಿದ್ದರೂ ಮುಂಬೈನಲ್ಲಿ ಅವರು ಐಪಿಎಲ್ ನಡೆಸಬಹುದಾದರೆ ಮೊಹಾಲಿಯಲ್ಲಿ ನಡೆಸೋದಕ್ಕೇನು? ನಾವು ಕೊರೊನಾ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೇವೆ,' ಎಂದಿರುವುದಾಗಿ ಪಿಟಿಐ ಟ್ವೀಟ್ ಮಾಡಿದೆ.
ಇಲ್ಲಿದೆ ಅಸಲಿ ಕಾರಣ!
ಪಂಜಾಬ್ ಅನ್ನು ಈ ಬಾರಿ ಐಪಿಎಲ್ ತಾಣಗಳಿಂದ ದೂರ ಇಡುತ್ತಿರುವುದಕ್ಕೆ ಅಸಲಿ ಕಾರಣವನ್ನು ಬಿಸಿಸಿಐ ಮೂಲ ಈ ಮೊದಲೇ ತಿಳಿಸಿತ್ತು. ಕೇಂದ್ರ ಸರ್ಕಾರ ಕೃಷಿ ವಿರೋಧಿ ಮಸೂದೆಗಳ ವಿರುದ್ಧ ಪಂಜಾಬ್ನಲ್ಲಿ ರೈತರ ಪ್ರತಿಭಟನೆಗಳು ಜೋರಾಗಿವೆ. ಪಂಜಾಬ್ನಲ್ಲಿ ಐಪಿಎಲ್ ನಡೆಸಿದರೆ ರೈತರು ಸ್ಟೇಡಿಯಂಗೂ ಮುತ್ತಿಗೆ ಹಾಕಿ ಸಮಸ್ಯೆ ಉಂಟಾಗುವ ಸಂಭವವಿದೆ. ಹೀಗಾಗಿ ಈ ಬಾರಿ ಪ್ರಸಿದ್ಧ ಮೊಹಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸದಿರಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲ ಮಾಹಿತಿ ನೀಡಿತ್ತು.