ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಲಾರ್ಡ್ಸ್ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಆರಂಭಿಕ ಎರಡು ದಿನಗಳಲ್ಲಿ ಉತ್ತಮ ಪ್ರರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೂ ಟೀಮ್ ಇಂಡಿಯಾಗೆ ಒಂದು ಸಂಗತಿ ಹಿನ್ನಡೆಯನ್ನುಂಟು ಮಾಡಬಹುದು ಎಂದು ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರಾ ಹೇಳಿಕೆಯನ್ನು ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಿಂದ ಆರ್ ಅಶ್ವಿನ್ ಹೊರಗುಳಿದಿದ್ದಾರೆ. ನಾಲ್ವರು ವೇಗಿಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿದ್ದು ಓರ್ವ ಸ್ಪಿನ್ನರ್ನ ಜೊತೆಗೆ ಇಂಗ್ಲೆಂಡ್ ನೆಲದಲ್ಲಿ ಆಡಲು ಇಳಿಯುವ ನಿರ್ಧಾರ ಮಾಡಿದೆ. ಹೀಗಾಗಿ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರವಾಗಿ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು ಆರ್ ಅಶ್ವಿನ್ ಬೆಂಚ್ ಕಾಯುತ್ತಿದ್ದಾರೆ.
ಭಾರತ vs ಇಂಗ್ಲೆಂಡ್: ವಿರಾಟ್ ಕೊಹ್ಲಿಯ ಈ ತಪ್ಪು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್
ಆದರೆ ಲಾರ್ಡ್ಸ್ ಅಂಗಳದಲ್ಲಿ ಆರ್ ಅಶ್ವಿನ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದು ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಬಹುದು ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಾರ್ಡ್ಸ್ ಮೈದಾನದ ಪಿಚ್ ನಿಧಾನಗತಿಯಲ್ಲಿ ವರ್ತಿಸುತ್ತಿದ್ದು ಆರ್ ಅಶ್ವಿನ್ ಅಲಭ್ಯತೆ ತಂಡಕ್ಕೆ ಕಾಡಲಿದೆ. ಅಂತಿಮ ಎರಡು ದಿನಗಳಲ್ಲಿ ಆರ್ ಅಶ್ವಿನ್ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದ್ದರು ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾರತದ ಬಾಲಂಗೋಚಿಗಳ ಬಳಗ ತುಂಬಾ ಉದ್ದವಿದೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ ಹಾಗೂ ಇಶಾಂತ್ ಶರ್ಮಾ ಈ ಬೌಲರ್ಗಳಿಂದ ನೀವು ಹೆಚ್ಚಿನ ರನ್ಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಆಟಗಾರರು ಯಾರು ಕೂಡ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲದ ಕಾರಣ ಅದು ನಿಮಗೆ ಹಿನ್ನಡೆಯುಂಟು ಮಾಡಲಿದೆ" ಎಂದು ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಆಡುವ ಬಳಗ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.