ಚೆನ್ನೈ, ಫೆಬ್ರವರಿ. 06 : 'ಶೀಘ್ರದಲ್ಲೇ ತಮಿಳುನಾಡಿನಲ್ಲಿ 234 ಹುದ್ದೆಗಳು ಖಾಲಿಯಾಗಲಿವೆ. ಈ ಮೂಲಕ ತಮಿಳುವಾಡಿನ ಜನರು ವಿಧಾನಸಭೆ ಚುನಾವಣೆಗೆ ಸಿದ್ದರಾಗಬಹುದು' ಎಂಬರ್ಥದಲ್ಲಿ ಟ್ವೀಟ್ ಮಾಡಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸಂಚಲನ ಮೂಡಿಸಿದ್ದರು.
ಆದರೆ, ಈ ಟ್ವೀಟ್ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಅಶ್ವಿನ್ ಇದೀಗ ಸ್ಪಷ್ಟನೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ಎದುರಾಗಲಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಆರ್.ಅಶ್ವಿನ್ ರಾಜಕೀಯ ಭವಿಷ್ಯ ನುಡಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿತ್ತು.
ಇದರಿಂದ ಮತ್ತೊಂದು ಟ್ವೀಟ್ ಮಾಡಿರುವ ಅಶ್ವಿನ್, ನನ್ನ ಟ್ವೀಟ್ ಗಳಿಗೂ ತಮಿಳುನಾಡು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. [ಚಿನ್ನಮ್ಮ ತಮಿಳ್ನಾಡಿನ ಕಿಂಗ್ ಮೇಕರ್ ಆಗಿದ್ದು ಹೇಗೆ?]
ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಅಶ್ವಿನ್ ಶೀಘ್ರದಲ್ಲೇ 234 ಹುದ್ದೆಗಳು ಖಾಲಿಯಾಗಲಿವೆ ಎಂದಿದ್ದಾರೆ. ಈ ಮೂಲಕ ತಮಿಳುವಾಡಿನ ಜನರು ವಿಧಾನಸಭೆ ಚುನಾವಣೆಗೆ ಸಿದ್ದರಾಗಬಹುದು ಎಂಬರ್ಥದಲ್ಲಿ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು.
Guys please cool it down, it is a job creation drive.Nothing to do with Politics.#howmuchtwisting 😂
— Ashwin Ravichandran (@ashwinravi99) February 6, 2017
To all the youngsters in TN, 234 job opportunities to open up shortly.
— Ashwin Ravichandran (@ashwinravi99) February 6, 2017
ಆಡಳಿತಾರೂಢ ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತಸ್ನೇಹಿತೆ ವಿ.ಕೆ. ಶಶಿಕಲಾ ನಟರಾಜನ್ ಅವರು ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆಯಾದ ಬಳಿಕ ಸೆಲ್ವಂ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು.
ರಾಜೀನಾಮೆ ಪತ್ರವನ್ನು ಸೋಮವಾರ ರಾಜ್ಯಪಾಲ ವಿದ್ಯಾಸಾಗರ್ ಅಂಗೀಕರಿಸಿದ್ದಾರೆ.