ಗಾಯಗೊಂಡು ಚೇತರಿಸಿಕೊಂಡವರು ದೇಸಿ ಕ್ರಿಕೆಟ್ ಆಡಲೇಬೇಕು
ಸದ್ಯ ಭಾರತ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿರುವ ಯಾವುದೇ ಆಟಗಾರನಾದರೂ ಗಾಯದ ಸಮಸ್ಯೆಗೆ ಒಳಗಾಗಿ, ಚಿಕಿತ್ಸೆ ಪಡೆದುಕೊಂಡು ಮರಳಿ ತಂಡ ಸೇರಬೇಕೆಂದರೆ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಲೇಬೇಕಾಗಿದೆ ಎಂಬ ನೀತಿಯನ್ನು ರಾಹುಲ್ ದ್ರಾವಿಡ್ ಪುನಃ ಜಾರಿಗೆ ತಂದಿದ್ದಾರೆ. ಹೀಗಾಗಿ ಗಾಯಕ್ಕೊಳಗಾಗುವ ಆಟಗಾರರು ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿ ತಾವು ಫಿಟ್ ಆಗಿರುವುದನ್ನು ಸಾಬೀತುಪಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ರವಿಶಾಸ್ತ್ರಿ ಸಮಯದಲ್ಲಿ ಇರಲಿಲ್ಲ ಈ ಸಂಪ್ರದಾಯಗಳು
ಗಾಯದ ಸಮಸ್ಯೆಗೆ ಒಳಗಾಗಿ ತಂಡದಿಂದ ಹೊರಗುಳಿಯುವ ಆಟಗಾರರು ಕಡ್ಡಾಯವಾಗಿ ದೇಸಿ ಕ್ರಿಕೆಟ್ ಆಡಲೇಬೇಕೆಂಬ ಸಂಪ್ರದಾಯ ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗ ಜಾರಿಯಲ್ಲಿತ್ತು. ಆದರೆ ಅನಿಲ್ ಕುಂಬ್ಳೆ ನಂತರ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಈ ಸಂಪ್ರದಾಯಗಳಿಗೆ ಸೊಪ್ಪು ಹಾಕಿರಲಿಲ್ಲ. ಗಾಯದ ಸಮಸ್ಯೆಗೆ ಒಳಗಾದ ಆಟಗಾರರು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಕು ತಂಡದಲ್ಲಿ ಸ್ಥಾನ ಸಿಗುತ್ತಿತ್ತು. ಅಷ್ಟೇ ಅಲ್ಲದೇ ತಂಡ ಸೇರುವ ನೂತನ ಆಟಗಾರರಿಗೆ ರವಿಶಾಸ್ತ್ರಿ - ಕೊಹ್ಲಿ ಸಮಯದಲ್ಲಿ ಭಾರತದ ಮಾಜಿ ಕ್ರಿಕೆಟಿಗರಿಂದ ಕ್ಯಾಪ್ ಕೊಡಿಸುವ ಸಂಪ್ರದಾಯಕ್ಕೂ ಬ್ರೇಕ್ ಹಾಕಿ ಪ್ರಸ್ತುತ ತಂಡದಲ್ಲಿರುವ ಆಟಗಾರರ ಕೈನಿಂದಲೇ ಯುವ ಆಟಗಾರರಿಗೆ ಕ್ಯಾಪ್ ಕೊಡಿಸಲಾಗುತ್ತಿತ್ತು. ಆದರೆ ಈಗ ಭಾರತ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗ ಇದ್ದ ಈ ಎರಡೂ ಸಂಪ್ರದಾಯಗಳನ್ನೂ ಮರಳಿ ತರುವುದರ ಮೂಲಕ ಭಾರೀ ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ.
ಗಾಯದ ಸಮಸ್ಯೆಗೊಳಗಾಗಿ ತಂಡದಿಂದ ಹೊರಗುಳಿಯುವ ಆಟಗಾರರಿಗೆ ಸಂಕಷ್ಟ
ರಾಹುಲ್ ದ್ರಾವಿಡ್ ಜಾರಿಗೆ ತಂದಿರುವ ಈ ಸಂಪ್ರದಾಯದಿಂದ ಗಾಯದ ಸಮಸ್ಯೆಗೊಳಗಾಗಿ ತಂಡದಿಂದ ಹೊರಗುಳಿಯುವ ಆಟಗಾರರಿಗೆ ಸಂಕಷ್ಟ ಎದುರಾಗುವುದು ಕಟ್ಟಿಟ್ಟ ಬುತ್ತಿ. ಹೌದು, ಗಾಯದಿಂದ ಚೇತರಿಸಿಕೊಂಡು ಫಿಟ್ನೆಸ್ ಪರೀಕ್ಷೆಗೊಳಗಾಗಿ ನೇರವಾಗಿ ತಂಡ ಸೇರುತ್ತಿದ್ದ ಆಟಗಾರರು ಈಗ ದೇಸಿ ಕ್ರಿಕೆಟ್ ಆಡಿ ತಾವು ಫಿಟ್ ಆಗಿರುವುದನ್ನು ನಿರೂಪಿಸಿಕೊಂಡರಷ್ಟೇ ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.