ಮುಂಬೈ, ಆಗಸ್ಟ್29: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ) ಮುಖ್ಯಸ್ಥರಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಬಳಿ ಇದ್ದ ಕೋಚ್ ಹುದ್ದೆಯನ್ನು ಬಿಸಿಸಿಐ ಹಿಂಪಡೆದುಕೊಂಡು, ಹೊಸಬರನ್ನು ಆ ಸ್ಥಾನಕ್ಕೆ ಕರೆ ತರಲಾಗಿದೆ. ಇಂಡಿಯಾ 'ಎ' ಹಾಗೂ ಅಂಡರ್ 19 ತಂಡಕ್ಕೆ ಹೊಸ ಕೋಚ್ ಗಳನ್ನು ನೇಮಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಣೆ ಹೊರಡಿಸಿದೆ.
ಸೌರಾಷ್ಟ್ರದ ಮಾಜಿ ಬ್ಯಾಟ್ಸ್ ಮನ್ ಸೀತಾಂಶು ಕೋಟಕ್ ಅವರು ಇಂಡಿಯಾ 'ಎ' ಗೆ ಕೋಚ್ ಆಗಿ ನೇಮಕವಾಗಿದ್ದರೆ, ಅಂಡರ್ 19 ಕೋಚ್ ಆಗಿ ಮಾಜಿ ವೇಗಿ ಪರಾಸ್ ಮಾಂಬ್ರೆ ಆಯ್ಕೆಯಾಗಿದ್ದಾರೆ. ಕೋಟಕ್ ಅವರು 130 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, ಈ ಹಿಂದೆ ಟೀಂ ಇಂಡಿಯಾ 'ಎ' ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಇತ್ತೀಚಿನ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಕಾರ್ಯ ನಿರ್ವಹಿಸಿದ್ದರು.
ಪರಾಸ್ ಮಾಂಬ್ರೆ ಅವರು ಟೀಂ ಇಂಡಿಯಾ ಪರ 2 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನಾಡಿದ್ದಾರೆ. ಆದರೆ, ದ್ರಾವಿಡ್ ಸಹಾಯಕರಾಗಿ ಕಳೆದ ಮೂರು ವರ್ಷಗಳಿಂದ ಇಂಡಿಯಾ 'ಎ' ಹಾಗೂ ಅಂಡರ್ 19 ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬೌಲಿಂಗ್ ಕೋಚ್ ಆಗಿ ರಮೇಶ್ ಪವಾರ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಟಿ ದಿಲೀಪ್ ನೇಮಕವಾಗಿದ್ದಾರೆ. ಹೃಷಿಕೇಶ್ ಕಾನಿಟ್ಕರ್ ಅಂಡರ್ 19 ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.