ಕೋಚ್ ಆದಾಗ ಇದು ಯೋಜನೆಯಲ್ಲಿರಲಿಲ್ಲ
ಕಳೆದ 8 ತಿಂಗಳುಗಳಲ್ಲಿ ಒಟ್ಟು 6 ವಿವಿಧ ನಾಯಕರ ಜತೆ ಕೆಲಸ ಮಾಡಿರುವುದರ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್ ಆ ಅನುಭವ ರೋಮಾಂಚಕಾರಿಯಾಗಿತ್ತು ಹಾಗೂ ಅದರ ಜತೆಗೆ ಸವಾಲಿನಿಂದಲೂ ಕೂಡಿತ್ತು ಎಂದಿದ್ದಾರೆ. ತಾನು ಹೆಡ್ ಕೋಚ್ ಆಗಿ ನೇಮಕಗೊಂಡಾಗ ವಿವಿಧ ನಾಯಕರನ್ನು ಹೊಂದುವುದು ನಮ್ಮ ಯೋಜನೆಯಲ್ಲಿರಲಿಲ್ಲ ಆದರೆ ಕೊರೊನಾ ಪರಿಸ್ಥಿತಿ ಮತ್ತು ಇನ್ನಿತರೆ ಸನ್ನಿವೇಶಗಳಲ್ಲಿ ವಿವಿಧ ನಾಯಕರನ್ನು ಹೊಂದಬೇಕಾಯಿತು ಎಂದು ಹೇಳಿಕೆ ನೀಡಿದ್ದಾರೆ.
ಹೊಸ ನಾಯಕರನ್ನು ಸೃಷ್ಟಿಸಲು ಒಳ್ಳೆಯ ಅವಕಾಶ
ಹಲವು ನಾಯಕರ ಜತೆ ಕೆಲಸ ಮಾಡಿದ್ದು ಸವಾಲಾಗಿತ್ತು ಹಾಗೂ ಸಂತಸವನ್ನೂ ನೀಡಿತು ಎಂದಿರುವ ರಾಹುಲ್ ದ್ರಾವಿಡ್ ಇದರಿಂದ ಹೆಚ್ಚು ನೂತನ ನಾಯಕರನ್ನು ಹುಟ್ಟಿಹಾಕಲು ಅನುಕೂಲವಾಯಿತು ಎಂದೂ ಸಹ ಹೇಳಿಕೆಯನ್ನು ನೀಡಿದ್ದಾರೆ. ಗುಂಪಾಗಿ ನಾವು ಹೊಸ ವಿಷಯಗಳನ್ನು ಅರಿಯುತ್ತಿದ್ದು, ಉತ್ತಮ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟು ಹಲವಾರು ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಈ ತಿಂಗಳೇ ಇಬ್ಬರು ನೂತನ ನಾಯಕರ ಸೃಷ್ಟಿ
ಈ ಜೂನ್ ತಿಂಗಳಲ್ಲಿಯೇ ಇಬ್ಬರು ನೂತನ ನಾಯಕರ ಸೃಷ್ಟಿ ಟೀಮ್ ಇಂಡಿಯಾದಲ್ಲಿ ಆಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ನೂತನ ನಾಯಕನಾಗಿ ರಿಷಭ್ ಪಂತ್ ನೇಮಕಗೊಂಡರೆ, ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ.