ನವದೆಹಲಿ, ಜುಲೈ 28: ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ, ಭಾರತೀಯ ರೈಲ್ವೆ ತಂಡದ 10 ಆಟಗಾರರಿಗೆ ರೈಲ್ವೆ ಇಲಾಖೆ ಒಟ್ಟು 1.30 ಕೋಟಿ ರು.ನಗದು ಬಹುಮಾನ ಘೋಷಿಸಿದೆ.
ಭಾರತೀಯ ಮಹಿಳಾ ಕ್ರಿಕೆಟರ್ ಹರ್ಮನ್ ಪ್ರೀತ್ ಗೆ DCP ಹುದ್ದೆ
ನಾಯಕಿ ಮಿಥಾಲಿರಾಜ್ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ಹರ್ಮನ್ ಪ್ರೀತ್ ಕೌರ್ ಅವರಿಗೆ ಗೆಜೆಟೆಡ್ ಅಧಿಕಾರಿ ಹುದ್ದೆಯನ್ನು ನೀಡುವುದಾಗಿ ಸಚಿವ ಸುರೇಶ್ ಪ್ರಭು ಘೋಷಿಸಿದ್ದಾರೆ.
'ಭಾರತದ ಮಹಿಳಾ ತಂಡದವರು ವಿಶ್ವಕಪ್ನಲ್ಲಿ ಆಡಿದ ಪರಿ ಎಲ್ಲ ಭಾರತೀಯರಿಗೆ ಅಭಿಮಾನ ಉಂಟು ಮಾಡಿದೆ. ರೈಲ್ವೆ ತಂಡದ ಆಟಗಾರ್ತಿಯರು ತಂಡದಲ್ಲಿರುವುದು ರೈಲ್ವೆ ಇಲಾಖೆಗೆ ಅತ್ಯಭಿಮಾನದ ವಿಷಯ.
ದೇಶದ ಮಹಿಳಾ ತಂಡದವರು ಈ ರೀತಿಯ ಸಾಮರ್ಥ್ಯ ಮೆರೆಯುವರು ಎಂದು ಯಾರೂ ಊಹಿಸಿರಲಿಲ್ಲ. ಅರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮದಿಂದ ಅವರು ಈ ಸಾಧನೆ ಮಾಡಿದ್ದಾರೆ' ಎಂದು ಸುರೇಶ್ ಪ್ರಭು ಹೇಳಿದರು.
'ಮಾಜಿ ನಾಯಕಿ ಡಯಾನ ಯಡುಲ್ಜಿ ಅವರಿಂದ ಈಗಿನ ನಾಯಕಿ ಮಿಥಾಲಿ ರಾಜ್ ವರೆಗಿನ ಬಹುತೇಕ ಎಲ್ಲರೂ ರೈಲ್ವೆ ತಂಡದಲ್ಲಿ ಆಡಿದವರು. ಭಾರತದ ಪುರುಷ ತಂಡದಲ್ಲಿ ರೈಲ್ವೆಯ ಆಟಗಾರರು ಇಲ್ಲ.
ಆದರೆ, ಮಹಿಳಾ ತಂಡದಲ್ಲಿ ಹೆಚ್ಚಿನವರು ರೈಲ್ವೆಯವರು. ಇದು ಒಂಥರಾ ರೈಲ್ವೆ ಬೋಗಿಯನ್ನೇ ಕಾಯ್ದಿರಿಸಿದಂತೆ' ಎಂದು ಸುರೇಶ್ ಪ್ರಭು ಹಾಸ್ಯ ಚಟಾಕಿ ಹಾರಿಸಿದರು.