ದೇಶೀಯ ಕ್ರಿಕೆಟ್ನ ಶ್ರೇಷ್ಠ ಸ್ಪಿನ್ನರ್ ಎಂದು ಖ್ಯಾತರಾಗಿದ್ದ ಮಾಜಿ ಎಡಗೈ ಸ್ಪಿನ್ನರ್ ರಾಜಿಂದರ್ ಗೋಯೆಲ್ ತಮ್ಮ 77ನೇ ವಯಸ್ಸಿನಲ್ಲಿ ಭಾನುವಾರ ನಿಧನರಾಗಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದರೂ ಅವರು ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಎಂದೂ ಪಡೆದಿರಲಿಲ್ಲ.
ರಣಜಿ ಟ್ರೋಫಿ ಇತಿಹಾಸದಲ್ಲಿ ಸರ್ವಾಧಿಕ 637 ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆಯನ್ನು ಈಗಲೂ ತಮ್ಮ ಹೆಸರಿನಲ್ಲಿ ಹೊಂದಿರುವ ರಾಜಿಂದರ್, 44ನೇ ವಯಸ್ಸಿನವರೆಗೂ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಪತ್ನಿ ಮತ್ತು ಪುತ್ರ, ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ಹಾಲಿ ದೇಶೀಯ ಮ್ಯಾಚ್ ರೆಫ್ರಿ ನಿತಿನ್ ಗೋಯೆಲ್ರನ್ನು ಅಗಲಿದ್ದಾರೆ.
1996ರಲ್ಲೇ ಗವಾಸ್ಕರ್ ಭವಿಷ್ಯ: ಸಚಿನ್ 'ಅಂದು' ಮತ್ತು 'ಇಂದಿನ' ಪ್ರತಿಕ್ರಿಯೆ ಹೇಗಿದೆ ನೋಡಿ!
ರಣಜಿಯಲ್ಲಿ ರಾಜಿಂದರ್ ಗೋಯೆಲ್ ಹರಿಯಾಣ, ಪಂಜಾಬ್, ದೆಹಲಿ ತಂಡಗಳನ್ನು ಪ್ರತಿನಿಧಿಸಿದ್ದರು. 157 ಪ್ರಥಮ ದರ್ಜೆ ಪಂದ್ಯಗಳಲ್ಲಿ 750 ವಿಕೆಟ್ ಕಬಳಿಸಿದ್ದಾರೆ. ಸ್ಪಿನ್ ದಿಗ್ಗಜರಾದ ಬಿಷನ್ ಸಿಂಗ್ ಬೇಡಿ, ಬಿಎಸ್ ಚಂದ್ರಶೇಖರ್, ಎಸ್. ವೆಂಕಟರಾಘವನ್ ಅವರ ಸಮಕಾಲೀನರಾಗಿದ್ದರು ಗೋಯೆಲ್.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಗೋಯೆಲ್ 18.58ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದರು. ಇದು ಅವರ ಬೌಲಿಂಗ್ ಬ್ಯಾಟ್ಸ್ಮನ್ಗಳನ್ನು ಎಷ್ಟರ ಮಟ್ಟಿಗೆ ಕಂಗೆಗೆಡಿಸಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಗೋಯೆಲ್ 5 ವಿಕೆಟ್ಗಳ ಗೊಂಚಲನ್ನು 59 ಬಾರಿ ಮತ್ತು 18 ಬಾರಿ 10 ವಿಕೆಟ್ ಗೊಂಚಲನ್ನು ಪಡೆದುಕೊಂಡಿದ್ದಾರೆ.
"ಹೆಚ್ಚು ಆಡುವ ಅವಕಾಶ ದೊರೆತಿದ್ದರೆ ಭಾರತದ ಶ್ರೇಷ್ಠ ಆಲ್ರೌಂಡರ್ ಎನಿಸಿಕೊಳ್ಳುತ್ತಿದ್ದೆ"
1974-75ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ಬೆಂಗಳೂರು ಟೆಸ್ಟ್ಗೆ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಅವಕಾಶ ಲಭಿಸಿರಲಿಲ್ಲ. 12ನೇ ಆಟಗಾರನಾಗಿ ಉಳಿದುಬಿಟ್ಟಿದ್ದರು. ಬಿಸಿಸಿಐನಿಂದ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. 1991ರಲ್ಲಿ ಅವರು ಹರಿಯಾಣದ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿದ್ದರು.