ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಮುಂಬೈ ತಂಡವು ಆರಂಭಿಕ ದಿನದಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದೆ. ಉತ್ತಮ ಆರಂಭ ಪಡೆದರೂ ಸಹ, ದೊಡ್ಡ ಮೊತ್ತವನ್ನ ಕಲೆಹಾಕುವ ಯೋಜನೆಗೆ ಮಧ್ಯಪ್ರದೇಶ ತಂಡವು ತಡೆಯೊಡ್ಡಿದೆ.
ಆರಂಭಿಕ ಬ್ಯಾಟರ್ಗಳಾಗಿ ಕಣಕ್ಕಿಳಿದಿದ್ದ ನಾಯಕ ಪೃಥ್ವಿ ಶಾ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 87 ರನ್ಗಳ ಜೊತೆಯಾಟದ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪೃಥ್ವಿ ಶಾ ಎಂದಿನಂತೆ ಬಿರುಸಿನ ಆಟಕ್ಕೆ ಮೊರೆ ಹೋಗಿದ್ದರು. 79 ಎಸೆತಗಳಲ್ಲಿ 47 ರನ್ ಕಲೆಹಾಕಿದ ಪೃಥ್ವಿ ಶಾ ಅನುಭವ್ ಅಗರ್ವಾಲ್ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ಮೊದಲ ವಿಕೆಟ್ ಒಪ್ಪಿಸಿದ್ರು. ಇವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು.
ಪೃಥ್ವಿ ಶಾ ವಿಕೆಟ್ ಉರುಳಿದ ಬಳಿಕ ತಾಳ್ಮೆಯ ಆಟವಾಡುತ್ತಿದ್ದ ಯಶಸ್ವಿ ಜೈಸ್ವಾಲ್ ಜೊತೆಗೂಡಿದ ಅರ್ಮಾನ್ ಜಾಫರ್ ಕೊಂಚ ಪ್ರತಿರೋಧ ಒಡ್ಡುವ ಪ್ರಯತ್ನ ನಡೆಸಿದಾದ್ರು ಸಹ, ಅವರ ಇನ್ನಿಂಗ್ಸ್ 26 ರನ್ಗಳಿಗೆ ಕೊನೆಗೊಂಡಿತು. ಸುವೇದ್ ಪಾರ್ಕರ್ ಬಂದಷ್ಟೇ ವೇಗವಾಗಿ 18ರನ್ಗೆ ಇನ್ನಿಂಗ್ಸ್ ಮುಗಿಸಿದ್ರು. ಹಾರ್ದಿಕ್ ತಮೋರೆ ಆಟ 24ರನ್ಗೆ ಕೊನೆಗೊಂಡಿತು.
ಒಂದೆಡೆ ಗಟ್ಟಿಯಾಗಿ ನೆಲೆಯೂರಿ ಇನ್ನಿಂಗ್ಸ್ ಆಡಿದ ಯಶಸ್ವಿ ಜೈಸ್ವಾಲ್ 163 ಎಸೆತಗಳಲ್ಲಿ 78 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವು 200ರ ಗಡಿ ದಾಟುವಂತೆ ನೋಡಿಕೊಂಡರು. ಜೈಸ್ವಾಲ್ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ರಣಜಿಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಸರ್ಫರಾಜ್ ಖಾನ್ 125 ಎಸೆತಗಳಲ್ಲಿ ಅಜೇಯ 40 ರನ್ ಕಲೆಹಾಕಿದ್ದು, ಶಮ್ಸ್ ಮುಲಾನಿ ಅಜೇಯ 12 ರನ್ಗಳಿಸಿದ್ದಾರೆ.
ಮುಂಬೈ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 248 ರನ್ ಕಲೆಹಾಕಿದೆ. ಮಧ್ಯಪ್ರದೇಶ ಪರ ಅನುಭವ ಅಗರ್ವಾಲ್ 2, ಸರನ್ಷ್ ಜೈನ್ 2 ವಿಕೆಟ್ ಪಡೆದಿದ್ದಾರೆ. ಕುಮಾರ್ ಕಾರ್ತಿಕೇಯ ಒಂದು ವಿಕೆಟ್ ಉರುಳಿಸಿದ್ರು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಮುಂಬೈ
ಪೃಥ್ವಿ ಶಾ(ನಾಯಕ), ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸುವೇದ್ ಪರ್ಕರ್, ಸರ್ಫರಾಜ್ ಖಾನ್, ಹಾರ್ದಿಕ್ ತಮೋರ್(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ
ಮಧ್ಯಪ್ರದೇಶ
ಯಶ್ ದುಬೆ, ಹಿಮಾಂಶು ಮಂತ್ರಿ(ವಿಕೆಟ್ ಕೀಪರ್), ಶುಭಂ ಎಸ್ ಶರ್ಮಾ, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ(ನಾಯಕ), ಅಕ್ಷತ್ ರಘುವಂಶಿ, ಸರನ್ಶ್ ಜೈನ್, ಕುಮಾರ್ ಕಾರ್ತಿಕೇಯ, ಅನುಭವ್ ಅಗರ್ವಾಲ್, ಗೌರವ್ ಯಾದವ್, ಪಾರ್ಥ್ ಸಹಾನಿ