ಬೆಳಗಾವಿ, ನವೆಂಬರ್ 21 : ಆಟೋನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆದಿರುವ ಮುಂಬೈ ಹಾಗೂ ಕರ್ನಾಟಕ ನಡುವಿನ ರಣಜಿ ಎ ಗುಂಪಿನ ಪಂದ್ಯವು ಕುತೂಹಲ ಘಟ್ಟ ತಲುಪಿದೆ. ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 400 ಸ್ಕೋರಿಗೆ ಆಲೌಟಾದರೆ, ಮುಂಬೈ ತಂಡವು ಎರಡನೇ ದಿನದ ಅಂತ್ಯಕ್ಕೆ 99/2 ಸ್ಕೋರ್ ಮಾಡಿದೆ.
ಮೊದಲು ಬ್ಯಾಟ್ ಆಯ್ದುಕೊಂಡಿದ್ದ ಕರ್ನಾಟಕ ತಂಡ 263/4 ಸ್ಕೋರ್ ನಿಂದ ಎರಡನೇ ದಿನದ ಆಟ ಆರಂಭಿಸಿ 129.4 ಓವರ್ಗೆ 400 ರನ್ ದಾಖಲಿಸಿತು. ಎರಡನೇ ಪಂದ್ಯದಲ್ಲೇ ಶತಕ ಬಾರಿಸಿದ ಕೃಷ್ಣಮೂರ್ತಿ ಸಿದ್ದಾರ್ಥ್ 161ರನ್ ಗಳಿಸಿ ಔಟಾದರು. 293 ಎಸೆತದಲ್ಲಿ ಸಿದ್ಧಾರ್ಥ 19 ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ಸಿಡಿಸಿದರು.
ಕರ್ನಾಟಕ ತಂಡದ ನಾಯಕ ಶ್ರೇಯಸ್ ಗೋಪಾಲ್ 93 ಎಸೆತದಲ್ಲಿ 48 ರನ್ ಗಳಿಸಿ ಔಟಾದರು. ಜೆ ಸುಚೀತ್ 86 ಎಸೆತದಲ್ಲಿ 30 ರನ್ ಹಾಗೂ ಅಭಿಮನ್ಯು ಮಿಥುನ್ 29 ಎಸೆತದಲ್ಲಿ ಅಜೇಯ 34 ರನ್ ಗಳಿಸಿ ಸ್ಕೋರ್ ಹೆಚ್ಚಿಸಿದರು. ಮುಂಬೈ ಪರ ಶಿವಂ ದುಬೆ 7, ಧವಳ್ ಕುಲಕರ್ಣಿ 2 ಹಾಗೂ ಬಿ.ಆಲಂ 1 ವಿಕೆಟ್ ಪಡೆದರು.
ಬ್ಯಾಟಿಂಗ್ ಆರಂಭಿಸಿರುವ ಪ್ರವಾಸಿ ಮುಂಬೈ ತಂಡ ಆರಂಭದಲ್ಲೇ ಅಖಿಲ್ ಹೆರ್ವಾಡ್ಕರ್(5) ಕಳೆದುಕೊಂಡಿತು. ಚಹಾ ವಿರಾಮಕ್ಕೆ 11 ಓವರ್ಗೆ 40 ರನ್ ದಾಖಲಿಸಿತ್ತು. ಆದರೆ, ದಿನದ ಅಂತ್ಯಕ್ಕೆ ಜಾಯ್ ಬಿಸ್ತಾ 69ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ತಂಡದ ಮೊತ್ತ 99/2 ಆಗಿದೆ.