ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯ
ಈ ಲೇಖನ ಬರೆಯುವ ವೇಳೆಗೆ ಬಂಗಾಳ ತಂಡ 7 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದ್ದು, ಶಹಬಾಜ್ ಅಹ್ಮದ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಂಗಾಳ ಮತ್ತು ಜಾರ್ಖಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಬಂಗಾಳ ತಂಡ ಸೆಮಿಫೈನಲ್ ತಲುಪಿದೆ.
ಇಬ್ಬರು ಶತಕ, ಏಳು ಜನ ಅರ್ಧ ಶತಕ
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ಗೆ 773 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಸುದೀಪ್ ಕುಮಾರ್ ಘರಾಮಿ ಮತ್ತು ಅನುಸ್ತುಪ್ ಮಜುಂದಾರ್ ಶತಕ ಗಳಿಸಿದರೆ, ಕ್ರೀಡಾ ಸಚಿವ ಮನೋಜ್ ತಿವಾರಿ ಸೇರಿದಂತೆ ಇತರ ಏಳು ಬ್ಯಾಟ್ಸ್ಮನ್ಗಳು ತಲಾ ಅರ್ಧಶತಕ ಗಳಿಸಿ, ರಣಜಿ ಟ್ರೋಫಿಯಲ್ಲಿ ದಾಖಲೆ ನಿರ್ಮಿಸಿದರು.
243 ರನ್ಗಳ ಬೃಹತ್ ಜೊತೆಯಾಟ
ಆರಂಭಿಕರಾದ ಅಭಿಷೇಕ್ ರಾಮನ್ (61) ಮತ್ತು ನಾಯಕ ಅಭಿಮನ್ಯು ಈಶ್ವರನ್ (65) ಮೊದಲ ವಿಕೆಟ್ಗೆ 132 ರನ್ ಜೊತೆಯಾಟದ ಮೂಲಕ ಬಂಗಾಳಕ್ಕೆ ಉತ್ತಮ ಆರಂಭ ನೀಡಿದ್ದರು. ಈಶ್ವರನ್ ಅವರು ಸುಶಾಂತ್ ಮಿಶ್ರಾ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡು ನಿರ್ಗಮಿಸಿದರು.
ಆನಂತರ ಸುದೀಪ್ ಕುಮಾರ್ ಘರಾಮಿ ಅವರು ಮಜುಂದಾರ್ ಅವರೊಂದಿಗೆ 243 ರನ್ಗಳ ಬೃಹತ್ ಜೊತೆಯಾಟ ನೀಡಿದ್ದರಿಂದ ಬಂಗಾಳವು ಪ್ರಾಬಲ್ಯವನ್ನು ಮುಂದುವರೆಸಿತು, ಮಜುಂದಾರ್ ಅವರು ಅನುಕುಲ್ ರಾಯ್ ಬೌಲಿಂಗ್ನಲ್ಲಿ 117 ರನ್ ಗಳಿಸಿದ್ದಾಗ ಔಟಾದರು. ಸುದೀಪ್ ಕುಮಾರ್ ಘರಾಮಿ 186 ರನ್ ಗಳಿಸಿ ಜಾರ್ಖಂಡ್ಗೆ ದುಸ್ವಪ್ನವಾಗಿ ಕಾಡಿದರು.
ಜಾರ್ಖಂಡ್ ಪರ ಸುಶಾಂತ್ ಮಿಶ್ರಾ ಮೂರು ವಿಕೆಟ್
ಘರಾಮಿ ಔಟಾದ ನಂತರ, ಮನೋಜ್ ತಿವಾರಿ, ಅಭಿಷೇಕ್ ಪೊರೆಲ್, ಶಹಬಾಜ್ ಅಹ್ಮದ್, ಸಯಾನ್ ಮೊಂಡಾಲ್ ಮತ್ತು ಆಕಾಶ್ ದೀಪ್ ಎಲ್ಲರೂ ಅರ್ಧಶತಕಗಳನ್ನು ಗಳಿಸಿ ಬಂಗಾಳವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ಜಾರ್ಖಂಡ್ ಪರ ಸುಶಾಂತ್ ಮಿಶ್ರಾ ಮೂರು ವಿಕೆಟ್ ಪಡೆದರೆ, ಶಬಾಜ್ ನದೀಮ್ ಎರಡು ವಿಕೆಟ್ ಪಡೆದರು. ಪ್ರತ್ಯುತ್ತರವಾಗಿ ಜಾರ್ಖಂಡ್ ತಂಡವು 298 ರನ್ಗಳಿಗೆ ಆಲೌಟ್ ಆಯಿತು, ವಿರಾಟ್ ಸಿಂಗ್ ಅಜೇಯ 113 ರನ್ಗಳೊಂದಿಗೆ ಗರಿಷ್ಠ ಸ್ಕೋರರ್ ಆಘಿ ಮಿಂಚಿದರು.