ಜಮ್ಮು: ಜಮ್ಮು-ಕಾಶ್ಮೀರ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಆಟ ಪ್ರದರ್ಶಿಸಿದ ಕರ್ನಾಟಕ ಸೆಮಿಫೈನಲ್ ತಲುಪಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಿತ್ತು. ಆದರೆ ಬೌಲಿಂಗ್ನಲ್ಲಿ ಊಹಿಸದ ರೀತಿಯಲ್ಲಿ ತಿರುಗೇಟು ನೀಡಿದ ಕರ್ನಾಟಕ ಅದ್ಭುತ ರೀತಿಯಲ್ಲಿ ಪಂದ್ಯವನ್ನು ಹಿಡತಕ್ಕೆ ತೆಗೆದುಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆಯನ್ನು ಪಡೆದುಕೊಳ್ಳುವಂತೆ ಮಾಡಿದೆ. ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶಿಸಿರುವ ಕರ್ನಾಟಕ ಗೆದ್ದು ಸೆಮಿ ಫೈನಲ್ಗೇರುವ ವಿಶ್ವಾಸದಲ್ಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ 204ರನ್ಗಳಿಗೆ ಆಲ್ಔಟ್ ಆಗಿದ್ದ ಕರ್ನಾಟಕ ಎರಡನೇ ಇನ್ನಿಂಗ್ಸ್ನಲ್ಲಿ 245ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದೆ. ಈ ಮೂಲಕ ಸೆಮಿಫೈನಲ್ಗೇರುವ ಕನಸನ್ನು ಜೀವಂತವಾಗಿರಿಸಿದೆ.
ಮೂರನೇ ದಿನದಂತ್ಯಕ್ಕೆ ಜಮ್ಮು ಕಾಶ್ಮೀರ ತಂಡ 88 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ನಿನ್ನೆ ಕರ್ನಾಟಕ ತಂಡಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಜಮ್ಮು ಕಾಶ್ಮೀರಕ್ಕೆ ಅಡ್ಡಿಯಾದರು. ಐದನೇ ವಿಕೆಟ್ಗೆ 35 ರನ್ ಜೊತೆಯಾಟವನ್ನು ಹೊರತುಪಡಿಸಿದರೆ ಯಾವ ಹಂತದಲ್ಲೂ ಪ್ರತಿರೋಧವನ್ನು ಒಡ್ಡಲಿಲ್ಲ.
ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಮಾರಕ ದಾಳಿಗೆ ಜಮ್ಮು-ಕಾಶ್ಮೀರ ಆಟಗಾರರು ಉತ್ತರವನ್ನು ನೀಡಲಾಗದೆ ವಿಕೆಟ್ ಕಳೆದುಕೊಂಡರು. ಕರ್ನಾಟಕ ನೀಡಿದ 206 ರನ್ಗಳ ಅಲ್ಪ ಮೊತ್ತವನ್ನು ಮುಟ್ಟಲಾಗದೆ 192 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಹಿನ್ನಡೆಯನ್ನು ಕಾಣುವಂತಾಯಿತು.
ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆದ ಹೊರತಾಗಿಯೂ ಮುನ್ನಡೆಯನ್ನು ಪಡೆದುಕೊಂಡಿರುವ ಕರ್ನಾಟಕ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿದೆ. ಆರಂಭಿಕ ಆಟಗಾರರು ಅರ್ಧ ಶತಕದ ಜೊತೆಯಾಟವನ್ನು ನೀಡಿದರು. ನಾಲ್ಕು ವಿಕೆಟ್ ಕಳೆದುಕೊಂಡಿರುವ ಕರ್ನಾಟಕ 245 ರನ್ಗಳಿಸಿ ಸುಸ್ಥಿತಿಯಲ್ಲಿದೆ. 75 ರನ್ಗಳಿಸಿರುವ ವೇದಮೂರ್ತಿ ಸಿದ್ಧಾರ್ಥ್ ಮತ್ತು ಶ್ರೀನಿವಾಸ್ ಶರತ್ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಇಂದು ಅಂತಿಮ ದಿನವಾದ ಕಾರಣ ಕರ್ನಾಟಕದ ಗೆಲುವು ಬಹುತೇಕ ಖಾತ್ರಿಯಾಗಿದೆ. ಉತ್ತಮ ಮುನ್ನಡೆಯನ್ನು ಪಡೆದಿರುವ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ ಲೀಡ್ ಪಡೆದಿರುವ ಕಾರಣ ಈ ಪಂದ್ಯವನ್ನು ಡ್ರಾ ಮಾಡಿಕೊಂಡರು ಸೆಮಿಫೈನಲ್ ಪ್ರವೇಶವನ್ನು ಪಡೆದುಕೊಳ್ಳುವಲ್ಲಿ ಸಫಲವಾಗಲಿದೆ.