ಹುಬ್ಬಳ್ಳಿ, ಜ.2: ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿ ದೈತ್ಯ ಸಂಹಾರಿಗಳೆನಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಸೆಣಸಾಡಲಿದೆ.
ಈ ಭಾಗದಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪರಿಚಿತವಾದ ಗದಗಿನ ಮೂಲದ ಸುನೀಲ್ ಜೋಶಿ ಅವರು ಈಗ ಜಮ್ಮು ತಂಡ ಮುಖ್ಯ ಕೋಚ್. ಎ ಗುಂಪಿನ ಈ ಪಂದ್ಯ ಇಲ್ಲಿನ ರಾಜನಗರ ಕ್ರೀಡಾಂಗಣದಲ್ಲಿ ಜ 5 ರಿಂದ 8 ರ ತನಕ ನಡೆಯಲಿದೆ. ಸತತ ಮೂರು ಗೆಲುವಿನಿಂದ 18 ಅಂಕ ಸಂಪಾದಿಸಿರುವ ಕರ್ನಾಟಕ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹತ್ತು ಹಲವು ನಿರ್ಬಂಧಗಳ ನಡುವೆ ಈ ಪಂದ್ಯ ನಡೆಯಲಿದೆ.[ಮುಂಬೈ ಮಣಿಸಿದ ಜೋಶಿ 'ಕಾಶ್ಮೀರಿ' ಹುಡುಗರು]
ಆಟಗಾರರಿಗೆ ನಿರ್ಬಂಧ: ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ ಸದಸ್ಯರ ಹದ್ದಿನ ಕಣ್ಣಿನ ನಡುವೆ ಮೈದಾನದಲ್ಲಿ ಆಟಗಾರರು ಇನ್ಮುಂದೆ ಸೆಣಸಬೇಕಿದೆ. ಐಪಿಎಲ್ ನ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ನಂತರ ದೇಶಿ ಕ್ರಿಕೆಟ್ ನಲ್ಲೂ ಹೆಚ್ಚಿನ ನಿರ್ಬಂಧ, ನಿಯಮಗಳು ಜಾರಿಗೆ ಬರುತ್ತಿವೆ. ಪ್ರಥಮ ಬಾರಿಗೆ ಈ ನಿಯಮಗಳನ್ನು ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವಿನ ಪಂದ್ಯದಲ್ಲಿ ಅಳವಡಿಸಲಾಗುತ್ತಿದೆ. ಕೆಲ ನಿಯಮಗಳು ಈ ಕೆಳಗಿನಂತಿದೆ:
* ಪಂದ್ಯ ಆರಂಭಕ್ಕೆ ಮುನ್ನ ತಮ್ಮ ಮೊಬೈಲ್ಗಳನ್ನು ತಂಡದ ವ್ಯವಸ್ಥಾಪಕರ ವಶಕ್ಕೆ ಒಪ್ಪಿಸಬೇಕಾಗುತ್ತದೆ.
* ಮೊಬೈಲ್ ಫೋನ್ ಬಳಕೆ ನಿಷೇಧದ ಜತೆಗೆ ಡ್ರೆಸಿಂಗ್ ಕೊಠಡಿಗೆ ಅನ್ಯರ ಪ್ರವೇಶ ನಿಷೇಧಿಸಲಾಗಿದೆ.
* ಪಂದ್ಯದಲ್ಲಿ ಆಡುವ XI ಆಟಗಾರರು ಹಾಗೂ ತಂಡದ ವ್ಯವಸ್ಥಾಪಕರ ಚಿತ್ರವನ್ನು ಡ್ರೆಸಿಂಗ್ ಕೊಠಡಿಯ ಮುಂಭಾಗ ಅಂಟಿಸಲಾಗುತ್ತದೆ.
* ಡ್ರೆಸಿಂಗ್ ಕೊಠಡಿಗೆ ಚಿತ್ರದಲ್ಲಿರುವವರನ್ನು ಬಿಟ್ಟು ಮಿಕ್ಕವರು ಪ್ರವೇಶಿಸುವಂತಿಲ್ಲ.
* ಆಟಗಾರರ ಕೋಣೆಗೆ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿರುತ್ತದೆ.
ಈ ಪಂದ್ಯದಲ್ಲಿ ಬಿಸಿಸಿಐನಿಂದ ಆರ್. ಮಾಧವನ್ ಭ್ರಷ್ಟಾಚಾರ ನಿಗ್ರಹ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು ಕೆಎಸ್ಸಿಎ ಅಧಿಕಾರಿ ಕುಮಾರ್ ಅಪ್ಪಚ್ಚು ನಿಗಾ ವಹಿಸಲಿದ್ದಾರೆ. [ಉತ್ತಪ್ಪ ಆರ್ಭಟ, ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ]
ಕರ್ನಾಟಕ ತಂಡ ಇಂತಿದೆ: ಆರ್ ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಮಾಯಾಂಕ್ ಅಗರವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಗೌತಮ್ ಸಿಎಂ (ಉಪನಾಯಕ, ವಿಕೆಟ್ ಕೀಪರ್), ಕುನಾಲ್ ಕಪೂರ್, ಶ್ರೇಯಸ್ ಗೋಪಾಲ್, ಉದಿತ್ ಬಿ ಪಟೇಲ್, ಅಭಿಮನ್ಯು ಮಿಥುನ್, ಎಚ್ ಎಸ್ ಶರತ್, ಎಸ್ ಅರವಿಂದ್, ಅಬ್ರಾರ್ ಕಾಜಿ, ಸಮರ್ಥ್ ಆರ್.
ಬ್ಯಾಟಿಂಗ್ ಕೋಚ್: ಜೆ ಅರುಣ್ ಕುಮಾರ್
ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್
ಮ್ಯಾನೇಜರ್ : ಸಿದ್ದರಾಮು