ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಬೌಲರ್ ಗಳು ಮಿಂಚು ಹರಿಸಿದರು. ಜೆಮ್ಶೆಡ್ಪುರದ ಕೀನನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ಮೊದಲನೇ ಇನ್ನಿಂಗ್ಸ್ನಲ್ಲಿ 164 ರನ್ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಾರ್ಖಂಡ್ಗೆ ಕರ್ನಾಟಕದ ಬೌಲರ್ ಗಳು ಆರಂಭದಲ್ಲೇ ಆಘಾತ ನೀಡಿದರು. ಕೃಷ್ಣಪ್ಪ ಗೌತಮ್ ಬೌಲಿಂಗ್ನಲ್ಲಿ ಆರ್ಯಮಾನ್ ಸೇನ್ 6 ಗಳಿಸಿದ್ದಾಗ ಔಟಾಗುವ ಮೂಲಕ ಜಾರ್ಖಂಡ್ನ ವಿಕೆಟ್ ಪತನ ಆರಂಭವಾಯಿತು.
ಹ್ಯಾರಿಸ್ ರೌಫ್ ಜೊತೆ ಭಾರತದ ಈ ವೇಗಿಯನ್ನು ಹೋಲಿಸಬೇಡಿ ಎಂದ ಪಾಕ್ ಮಾಜಿ ಕ್ರಿಕೆಟಿಗ
ಕುಮಾರ್ ದಿಯೋಬ್ರತ್ 18 ರನ್ಗಳಿಸಿ ಔಟಾದರೆ, ಕುಮಾರ್ ಸೂರಜ್ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಜಾರ್ಖಂಡ್ ತಂಡದ ನಾಯಕ ವಿರಾಟ್ ಸಿಂಗ್ 8 ರನ್ ಗಳಿಸಿ ನಿರಾಸೆ ಮೂಡಿಸಿದರು. ವಿಕೆಟ್ ಕೀಪರ್ ಕುಮಾರ್ ಕುಶಾಗರ ಮಾತ್ರ 37 ರನ್ ಗಳಿಸಿ ಕೆಲ ಸಮಯ ಕರ್ನಾಟಕದ ಬೌಲಿಂಗ್ ಅನ್ನು ಎದುರಿಸಿದರು. ಉಳಿದಂತೆ ಶಹಬಾಜ್ ನದೀಮ್ (22), ಸುಪ್ರಿಯೋ ಚಕ್ರವರ್ತಿ (14), ವಿನಾಯಕ್ ವಿಕ್ರಮ್ (3), ಆಶಿಶ್ ಕುಮಾರ್ (10) ರನ್ ಗಳಿಸಿದರು.
ಅತ್ಯುತ್ತಮ ಬೌಲಿಂಗ್ ಮಾಡಿದ ಕೃಷ್ಣಪ್ಪ ಗೌತಮ್ 4 ವಿಕೆಟ್ಗಳನ್ನು ಗಳಿಸಿದರು. ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರೆ, ವೇಗಿ ವಿಧ್ವತ್ ಕಾವೇರಪ್ಪ 2 ವಿಕೆಟ್ ಪಡೆದುಕೊಂಡರು, ಶುಭಾಂಗ್ ಹೆಗ್ಡೆ 1 ವಿಕೆಟ್ ಪಡೆದು ಮಿಂಚಿದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ. ರವಿಕುಮಾರ್ ಸಮರ್ಥ್ 31 ರನ್ ಗಳಿಸಿ ಔಟಾದರೆ, ನಾಯಕ ಮಯಾಂಕ್ ಅಗರ್ವಾಲ್ 20 ರನ್ ಗಳಿಸ ಔಟಾಗಿದ್ದಾರೆ. ದೇವದತ್ ಪಡಿಕ್ಕಲ್ ಅಜೇಯ 20 ಮತ್ತು ನಿಕಿನ್ ಜೋಸ್ ಅಜೇಯ 8 ರನ್ ಗಳಿಸಿದ್ದು, ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಕರ್ನಾಟಕ
ಎಲೈಟ್ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಈಗಾಗಲೇ ರಣಜಿ ಟ್ರೋಫಿಯಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ. ಆದರೆ, ಎರಡನೇ ಸ್ಥಾನದಲ್ಲಿರುವ ಜಾರ್ಖಂಡ್ಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಾದರೆ ಕರ್ನಾಟಕದ ವಿರುದ್ಧ ಗೆಲ್ಲಲೇಬೇಕಿದೆ. ಕೇರಳಕ್ಕೆ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶವಿದೆ, ಪುದುಚೆರಿ ವಿರುದ್ಧ ಅವರು ಗೆಲುವು ಸಾಧಿಸಬೇಕಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್(ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ನಿಕಿನ್ ಜೋಸ್, ಶರತ್ ಬಿಆರ್(ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್, ವಿಧ್ವತ್ ಕಾವೇರಪ್ಪ
ಜಾರ್ಖಂಡ್: ಕುಮಾರ್ ದಿಯೋಬ್ರತ್, ಆರ್ಯಮನ್ ಸೇನ್, ಕುಮಾರ್ ಸೂರಜ್, ವಿರಾಟ್ ಸಿಂಗ್ (ನಾಯಕ), ಸೌರಭ್ ತಿವಾರಿ, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಅನುಕುಲ್ ರಾಯ್, ಶಹಬಾಜ್ ನದೀಮ್, ಸುಪ್ರಿಯೋ ಚಕ್ರವರ್ತಿ, ವಿನಾಯಕ್ ವಿಕ್ರಮ್, ಆಶಿಶ್ ಕುಮಾರ್