ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ 71 ರನ್ಗಳ ಜಯ ಸಾಧಿಸಿದ ಸೌರಾಷ್ಟ್ರ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ನಲ್ಲಿ ಸೌರಾಷ್ಟ್ರ ಕರ್ನಾಟಕದ ವಿರುದ್ಧ ಸೆಣೆಸಲಿದೆ.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೌರಾಷ್ಟ್ರ ಮತ್ತು ಪಂಜಾಬ್ ಗೆಲುವಿಗಾಗಿ ಸಾಕಷ್ಟು ಹೋರಾಟ ನಡೆಸಿದವು. ಆದರೆ, ಕೊನೆಯ ಹಂತದಲ್ಲಿ ಮೇಲುಗೈ ಸಾಧಿಸಿದ ಸೌರಾಷ್ಟ್ರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿ ಗೆಲುವು ಪಡೆಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ 303 ರನ್ಗಳಿಗೆ ಆಲೌಟ್ ಆಗಿತ್ತು. ಪಾರ್ಥ ಭುಟ್ ಅಜೇಯ 111 ರನ್ ಗಳಿಸುವ ಮೂಲಕ ಸೌರಾಷ್ಟ್ರ ತಂಡಕ್ಕೆ ಆಸರೆಯಾಗಿದ್ದರು. ಪಂಜಾಬ್ ಪರವಾಗಿ ಮಯಾಂಕ್ ಮಾರ್ಕಂಡೆ 4 ವಿಕೆಟ್ ಪಡೆದು ಮಿಂಚಿದರು. ಬಲ್ಜೀತ್ ಸಿಂಗ್ 3 ವಿಕೆಟ್ ಪಡೆದಿದ್ದರು.
IND vs AUS: "ಆಸೀಸ್ ಆಟಗಾರರ ತಲೆಯಲ್ಲಿ ಕೇವಲ ಭಾರತದ ಈ ಸ್ಪಿನ್ನರ್ನದ್ದೇ ಯೋಚನೆ"
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಪಂಜಾಬ್ 431 ರನ್ ಗಳಿಸುವ ಮೂಲಕ 128 ರನ್ಗಳ ಮುನ್ನಡೆ ಸಾಧಿಸಿ ಮೇಲುಗೈ ಸಾಧಿಸಿತ್ತು. ಪ್ರಭ್ಸಿಮ್ರಾನ್ 126 ಮತ್ತು ನಮನ್ ಧಿರ್ 131 ರನ್ ಗಳಿಸಿ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಮನದೀಪ್ 91 ರನ್ ಗಳಿಸಿದರೆ, ಉಳಿದ ಬ್ಯಾಟರ್ ಗಳು ಉತ್ತಮ ಮೊತ್ತ ಕಲೆಹಾಕುವಲ್ಲಿ ವಿಫಲವಾಗಿದ್ದರು.
ಧರ್ಮೇಂದ್ರ ಜಡೇಜಾ 5 ವಿಕೆಟ್ ಪಡೆಯುವ ಮೂಲಕ ಪಂಜಾಬ್ ತಂಡಕ್ಕೆ ಆಘಾತ ನೀಡಿದ್ದರು. ಪಾರ್ಥ್ ಭುಟ್ 3 ವಿಕೆಟ್ ಪಡೆದರು, ಯುವರಾಜ್ ಸಿನ್ಹ 2 ವಿಕೆಟ್ ಪಡೆದರು.
ಸೌರಾಷ್ಟ್ರ ಉತ್ತಮ ಬ್ಯಾಟಿಂಗ್
128 ರನ್ಗಳ ಹಿನ್ನಡೆ ಸಾಧಿಸಿದ ಸೌರಾಷ್ಟ್ರ ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ವಸಾವಡ 77 ಮತ್ತು ಚಿರಾಗ್ ಜಾನಿ 77 ರನ್ ಗಳಿಸಿದರು. ಪ್ರೇರಕ್ ಮಂಕಡ್ 88 ಮತ್ತು ಪಾರ್ಥ ಭುಟ್ 51 ರನ್ ಗಳಿಸಿದರು. ಅಂತಿಮವಾಗಿ ಸೌರಾಷ್ಟ್ರ 379 ರನ್ಗಳಿಗೆ ಆಲೌಟ್ ಆಗುವ ಮೂಲಕ 251 ರನ್ ಮುನ್ನಡೆ ಸಾಧಿಸಿದರು. ವಿನಯ್ ಚೌಧರಿ 7 ವಿಕೆಟ್ ಪಡೆದು ಸೌರಾಷ್ಟ್ರ ವಿರುದ್ಧ ಮಿಂಚಿದರು.
ಎರಡನೇ ಇನ್ನಿಂಗ್ಸ್ನಲ್ಲಿ ವಿಫಲವಾದ ಪಂಜಾಬ್
252 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಎರಡನೇ ಇನ್ನಿಂಗ್ಸ್ನಲ್ಲಿ ರನ್ ಗಳಿಸುವಲ್ಲಿ ವಿಫಲವಾದರು. ಪುಖ್ರಜ್ ಮನ್ 42 ರನ್, ಮನದೀಪ್ ಸಿಂಗ್ 45 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಹೆಚ್ಚಿನ ರನ್ ಗಳಿಸಲಿಲ್ಲ.
ಪಾರ್ಥ ಭುಟ್ 5 ವಿಕೆಟ್ ಪಡೆದು ಪಂಜಾಬ್ ತಂಡಕ್ಕೆ ಆಘಾತ ನೀಡಿದರು. ಧರ್ಮೇಂದ್ರ ಜಡೇಜಾ 3 ವಿಕೆಟ್ ಪಡೆದರೆ, ಯುವರಾಜ್ ಸಿನ್ಹ 2 ವಿಕೆಟ್ ಪಡೆದರು. ಫೆಬ್ರವರಿ 9 ರಂದು ಸೌರಾಷ್ಟ್ರ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ಆಡಲಿದೆ.